ಪುತ್ತೂರು: ಡಿಆರ್‌ಡಿಒ ಯುವ ವಿಜ್ಞಾನಿ ಆತ್ಮಹತ್ಯೆ

| Published : Dec 15 2023, 01:30 AM IST

ಪುತ್ತೂರು: ಡಿಆರ್‌ಡಿಒ ಯುವ ವಿಜ್ಞಾನಿ ಆತ್ಮಹತ್ಯೆ
Share this Article
  • FB
  • TW
  • Linkdin
  • Email

ಸಾರಾಂಶ

ಡಿಆರ್‌ಡಿಒದಲ್ಲಿ ವಿಜ್ಞಾನಿಯಾಗಿದ್ದ ಪುತ್ತೂರಿನ ಯುವಕ ಆತ್ಮಹತ್ಯೆ, ಕೆಲಸಕ್ಕೆ ಸೇರಿ ಎರಡು ತಿಂಗಳಾಗಿತ್ತು, ರಾಜಿನಾಮೆ ನೀಡಿ ಪುತ್ತೂರಿನ ಕಲ್ಲರ್ಪೆ ಮನೆಗೆ ಬಂದಿದ್ದ ಯುವಕ

ಕನ್ನಡಪ್ರಭ ವಾರ್ತೆ ಪುತ್ತೂರುತಾಲೂಕಿನ ಯುವ ವಿಜ್ಞಾನಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಪುತ್ತೂರು ತಾಲೂಕಿನ ಆರ್ಯಾಪು ಗ್ರಾಮದ ಕಲ್ಲರ್ಪೆ ಎಂಬಲ್ಲಿ ಗುರುವಾರ ಬೆಳಗ್ಗೆ ಬೆಳಕಿಗೆ ಬಂದಿದೆ. ಕಲ್ಲರ್ಪೆ ನಿವಾಸಿ ಭರತ್ ಕಲ್ಲರ್ಪೆ (24) ಮೃತರು.

ಭರತ್ ಅವರು ಹೈದರಾಬಾದ್‌ನ ಡಿಆರ್‌ಡಿಒ ಸಂಸ್ಥೆಯಲ್ಲಿ ತಾತ್ಕಾಲಿಕ ನೆಲೆಯಲ್ಲಿ ವಿಜ್ಞಾನಿಯಾಗಿ ಕೆಲಸ ನಿರ್ವಹಿಸುತ್ತಿದ್ದರು. ಎರಡು ತಿಂಗಳ ಹಿಂದೆಯಷ್ಟೇ ಅವರು ಈ ಸಂಸ್ಥೆಯಲ್ಲಿ ಉದ್ಯೋಗಕ್ಕೆ ಸೇರಿಕೊಂಡಿದ್ದರು.

ಕಳೆದ ಒಂದು ವಾರದ ಹಿಂದೆ ಅವರು ಊರಿಗೆ ಆಗಮಿಸಿದ್ದರು. ಈ ನಡುವೆ ಸಂಸ್ಥೆಗೆ ರಾಜೀನಾಮೆ ಪತ್ರ ನೀಡಿದ್ದರೂ ರಾಜೀನಾಮೆ ಸ್ವೀಕಾರ ಮಾಡಿರಲಿಲ್ಲ ಎನ್ನಲಾಗಿದೆ. ಬುಧವಾರ ರಾತ್ರಿ ಇವರು ಕೆಲಸ ನಿರ್ವಹಿಸುತ್ತಿದ್ದ ಸಂಸ್ಥೆಯ ಕಚೇರಿಯಿಂದ ಅವರಿಗೆ ಫೋನ್ ಕರೆ ಬಂದಿತ್ತು. ಆ ಬಳಿಕ ಮಲಗಿದ್ದ ಭರತ್ ಅವರು ತಡರಾತ್ರಿ ಈ ಕೃತ್ಯ ಎಸಗಿಕೊಂಡಿದ್ದಾರೆ. ಬೆಳಗ್ಗೆ ಘಟನೆ ಬೆಳಕಿಗೆ ಬಂದಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ. ಅವರು ತಂದೆ, ಸಹೋದರ ಪತ್ರಕರ್ತ ಗಣೇಶ್ ಕಲ್ಲರ್ಪೆ ಹಾಗೂ ಓರ್ವ ಸಹೋದರಿಯನ್ನು ಅಗಲಿದ್ದಾರೆ. ಗ್ರಾಮಾಂತರ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.