ಜೀವನ ಕಷ್ಟ ಸುಖಗಳ ಸಮ್ಮಿಲನ: ಬಿ.ಆರ್.ಮಲ್ಲೇಶ್

| Published : Feb 03 2024, 01:45 AM IST

ಸಾರಾಂಶ

ಮನುಷ್ಯನ ಯಾವುದೇ ನೋವು ನಲಿವುಗಳಿಗೆ ಆತನ ಮಾನಸಿಕ ಸ್ಥಿತಿಯೇ ಕಾರಣವಾಗಿರುತ್ತದೆ ಎಂದು ಚಿತ್ರ ದುರ್ಗ ಜಿಲ್ಲಾ ಉಪನ್ಯಾಸಕರ ಸಂಘದ ಅಧ್ಯಕ್ಷ ಬಿ.ಆರ್.ಮಲ್ಲೇಶ್ ವಿದ್ಯಾರ್ಥಿ ಚಟುವಟಿಕೆ ಸಮಾರೋಪ ಸಮಾರಂಭದಲ್ಲಿ ಅಭಿಪ್ರಾಯಪಟ್ಟರು.

ಕನ್ನಡಪ್ರಭವಾರ್ತೆ ಚಿತ್ರದುರ್ಗ

ಜೀವನ ಎಂದರೆ ಕಷ್ಟ ಸುಖಗಳ ಸಮ್ಮಿಲನ. ಸಮಸ್ಯೆಗಳು ಬಂದಾಗ ಎದೆಗುಂದದೆ ಧೈರ್ಯವಾಗಿ ನಿಭಾಯಿಸುವ ಕಲೆಗಾರಿಕೆಯನ್ನು ಮೈಗೂಡಿಸಿಕೊಂಡವರೇ ಬುದ್ಧಿವಂತರು ಎಂದು ಚಿತ್ರದುರ್ಗ ಜಿಲ್ಲಾ ಉಪನ್ಯಾಸಕರ ಸಂಘದ ಅಧ್ಯಕ್ಷ ಬಿ.ಆರ್.ಮಲ್ಲೇಶ್ ತಿಳಿಸಿದರು.

ನಗರದ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ 2023 -24 ನೇ ಸಾಲಿನ ವಿದ್ಯಾರ್ಥಿ ಚಟುವಟಿಕೆ ಸಮಾರೋಪದಲ್ಲಿ ಮಾತನಾಡಿದ ಅವರು, ಮನುಷ್ಯನ ಯಾವುದೇ ನೋವು ನಲಿವುಗಳಿಗೆ ಆತನ ಮಾನಸಿಕ ಸ್ಥಿತಿಯೇ ಕಾರಣವಾಗಿರುತ್ತದೆ. ಮನುಷ್ಯ ಬದುಕುವುದು ಬರೀ ಅನ್ನ, ಅಧಿಕಾರ, ಅಂತ ಸ್ತಿಗಾಗಿ ಅಲ್ಲ. ಎಲ್ಲರೊಂದಿಗೆ ಬೆರೆತು ಸಂತೋಷದ ಕ್ಷಣಗಳನ್ನು ತನ್ನದಾಗಿಸಿಕೊಳ್ಳುವ ಹಂಬಲದಲ್ಲಿ ಆತನಿರುತ್ತಾನೆ ಎಂದರು.

ಹೆಚ್ಚುವರಿ ಪೊಲೀಸ್ ಅಧೀಕ್ಷಕ ಬಿ.ಎಸ್. ಅಬ್ದುಲ್ ಖಾದರ್ ಮಾತನಾಡಿ, ವಿದ್ಯಾರ್ಥಿಗಳು ಶ್ರದ್ಧೆ, ಶಿಸ್ತು ಮತ್ತು ಭಕ್ತಿಯನ್ನು ಮೈಗೂಡಿಸಿಕೊಂಡು ಮುಂದುವರೆದಾಗ ಮಾತ್ರ ಯಶಸ್ಸು ನಿಮ್ಮದಾಗುತ್ತದೆ ಎಂದು ತಿಳಿಸಿದರು.

ಚಿತ್ರದುರ್ಗ ನಗರ ಸಭೆಯ ಪೌರಾಯುಕ್ತೆ ರೇಣುಕಾ ಮಾತನಾಡಿ, ಸಾಧನೆಗೆ ಬಡತನ ಅಥವಾ ಸಿರಿತನ ಕಾರಣವಲ್ಲ. ನಿಮ್ಮಲ್ಲಿರುವ ಬದ್ಧತೆ, ಕಾಯಕ ನಿಷ್ಠೆ ಮತ್ತು ಗುರುಹಿರಿಯರ ಮಾರ್ಗದರ್ಶನದಿಂದ ಉನ್ನತಿ ಸಾಧಿಸಲು ಸಾಧ್ಯವಾಗುತ್ತದೆ ಎಂದರು.

ಪಿಎಚ್‌ಡಿ ಪದವಿ ಪಡೆದ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಕನ್ನಡ ಉಪನ್ಯಾಸಕರಾದ ಟಿ.ತಿಪ್ಪೇಸ್ವಾಮಿ ಹಾಗೂ ಸಮಾಜಶಾಸ್ತ್ರ ಉಪನ್ಯಾಸಕರಾದ ಕೆ.ನಾಗರಾಜ,ನಿವೃತ್ತ ಪ್ರಾಂಶುಪಾಲ ಎನ್.ನರಸಿಂಹಮೂರ್ತಿ ಅವರನ್ನುಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು.

ಪ್ರಾಂಶುಪಾಲ ಹೆಚ್.ನಾಗರಾಜ್ ಅಧ್ಯಕ್ಷತೆ ವಹಿಸಿದ್ದರು. ಕಾಲೇಜು ಅಭಿವೃದ್ದಿ ಸಮಿತಿ ಉಪಾಧ್ಯಕ್ಷೆ ಗಾಯಿತ್ರಿಶಿವರಾಂ,ನಿವೃತ್ತ ಉಪ ನಿರ್ದೇಶಕ ಎನ್.ಆರ್. ನಾಗರಾಜಪ್ಪ, ಹಿರಿಯ ಉಪನ್ಯಾಸಕ ಡಾ.ಶಬ್ಬೀರ್ ಅಹಮ್ಮದ್ ಖಾನ್, ಸಿ.ಕಲ್ಲಪ್ಪ, ಬುಡೇನ್ ಸಾಬ್, ಚಂದ್ರಶೇಖರ್ ಉಪಸ್ಥಿತರಿದ್ದರು.

ಹೆಚ್.ಶ್ರೀನಿವಾಸ್ ಸ್ವಾಗತಿಸಿದರು, ಶಿವಕುಮಾರ್ ವಂದಿಸಿದರು. ಆರ್.ಚಂದ್ರಿಕಾ ಹಾಗೂ ಪೆನ್ನಯ್ಯ ಕಾರ್ಯಕ್ರಮ ನಿರ್ವಹಣೆ ಮಾಡಿದರು.