ಸಾರಾಂಶ
ಕನ್ನಡಪ್ರಭ ವಾರ್ತೆ ಕೋಲಾರಮಾದಕ ದ್ರವ್ಯ, ತಂಬಾಕು ಸೇವನೆಮುಕ್ತ ಅಪರಾಧ ರಹಿತ ಸಮಾಜ ನಿರ್ಮಾಣಕ್ಕೆ ನಿರಂತರವಾಗಿ ಶ್ರಮಿಸುತ್ತಿರುವ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮ ಯುವಜನತೆಗೆ ಬದುಕಿನ ಹಾದಿ ತೋರುತ್ತಿದೆ ಸಮಾಜಕ್ಕೆ ಮಾರ್ಗದರ್ಶನ ನೀಡುತ್ತಿದೆ ಎಂದು ಪ್ರಭಾರಿ ಮುಖ್ಯಶಿಕ್ಷಕಿ ಸಿದ್ದೇಶ್ವರಿ ತಿಳಿಸಿದರು.ತಾಲೂಕಿನ ಅರಾಭಿಕೊತ್ತನೂರು ಸರ್ಕಾರಿ ಪ್ರೌಢಶಾಲೆಯಲ್ಲಿ ವೇಮಗಲ್ ವ್ಯಾಪ್ತಿಯ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಬಿಸಿ ಟ್ರಸ್ಟ್, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯಿಂದ ವಿಶ್ವ ತಂಬಾಕು ವಿರೋಧಿ ದಿನಾಚರಣೆ ಮತ್ತು ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮದಲ್ಲಿ ಮಾತನಾಡಿದರು.ಶುಚಿತ್ವಕ್ಕೆ ಒತ್ತು ನೀಡುವ ಸುಂದರ ಸಮಾಜ ನಿರ್ಮಾಣ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಗುರಿಯಾಗಿದ್ದು, ವಿದ್ಯಾರ್ಥಿಗಳ ಮೂಲಕ ಪೋಷಕರಿಗೆ ಸಂದೇಶ ತಲುಪಿಸುವ ಕೆಲಸ ಮಾಡುತ್ತಿರುವುದು ಸಾಮಾಜಿಕ ಕಾಳಜಿಗೆ ಸಾಕ್ಷಿಯಾಗಿದೆ ಎಂದರು.ದೇಶದ ಭವಿಷ್ಯವೇ ಯುವಕರಾಗಿದ್ದೀರಿ, ನೀವು ಮಾದಕ ವಸ್ತುಗಳಿಂದ ದೂರವಿರುವುದು ಸೂಕ್ತ, ಯುವಜನತೆಯ ಮೇಲೆ ದೇಶ ಅಲ್ಲದೆ ಕುಟುಂಬಗಳೂ ಸಹ ಅವಲಂಭಿತವಾಗಿರುತ್ತವೆ. ಆದರೆ, ಅದನ್ನು ಮರೆತು ಯಾವುದೋ ಕಾರಣಗಳಿಗೆ ಯುವಶಕ್ತಿಯು ಮಾದಕ ವಸ್ತುಗಳಿಗೆ ತಮ್ಮನ್ನು ಅರ್ಪಿಸಿಕೊಳ್ಳುವ್ಯದರಿಂದ ನಿಮ್ಮ ಕುಟುಂಬ ಅಲ್ಲದೆ ದೇಶದ ಮೇಲೆಯೂ ಆತಂಕಕಾರಿ ಪರಿಣಾಮ ಬೀರಲಿದೆ ಎಂದು ಎಚ್ಚರಿಸಿದರು.ವೇಮಗಲ್ ಯೋಜನಾಧಿಕಾರಿ ರಘು ಮಾತನಾಡಿ, ಪೂಜ್ಯ ವೀರೇಂದ್ರ ಹೆಗಡೆಯವರ ಮಾರ್ಗದರ್ಶನದಂತೆ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮ ನಡೆಸುತ್ತಿದ್ದು, ಇದರಿಂದ ಸಮಾಜಕ್ಕೆ ಒಳಿತಾಗಲಿ ಎಂಬುದೇ ಉದ್ದೇಶವಾಗಿದೆ ಎಂದರು.ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ತಂಬಾಕು,ಮಾದಕ ವಸ್ತುಗಳ ಬಳಕೆಯಿಂದಾಗುವ ದುಷ್ಪರಿಣಾಮಗಳ ಕುರಿತು ಜಾಗೃತಿಯ ಜತೆಗೆ ಜಿಲ್ಲೆಯಲ್ಲಿ ಮದ್ಯವರ್ಜನ ಶಿಬಿರಗಳನ್ನು ನಡೆಸುವ ಮೂಲಕ ಅನೇಕರನ್ನು ಮದ್ಯ ಸೇವನೆಯಿಂದ ದೂರ ಮಾಡಿದೆ ಎಂದು ತಿಳಿಸಿದರು.ಜಿಲ್ಲಾ ಜನಜಾಗೃತಿ ವೇದಿಕೆ ಸದಸ್ಯ ನಾರಾಯಣಶೆಟ್ಟಿ ಮಾತನಾಡಿ, ಶಾಲಾ-ಕಾಲೇಜುಗಳಲ್ಲಿ ಇಂತಹ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಯುವಜನರನ್ನು ಸರಿದಾರಿಗೆ ಕೊಂಡೊಯ್ಯುವ ಕೆಲಸಕ್ಕೆ ಧರ್ಮಸ್ಥಳ ಯೋಜನೆ ಮುಂದಾಗಿದೆ ಎಂದರು. ಇತ್ತೀಚೆಗೆ ತಂಬಾಕು ಸೇವನೆ ಪ್ರಮಾಣ ಹೆಚ್ಚಾಗುತ್ತಿದ್ದು, ವಿಧ ವಿಧದ ಕ್ಯಾನ್ಸರ್ಗಳು ಆವರಿಸುತ್ತಿವೆ. ಇದರಿಂದಾಗಿ ಅವರು ಮಾತ್ರವಲ್ಲದೇ ಕುಟುಂಬವೇ ನಾಶವಾಗುತ್ತಿದೆ ಎಂದು ತಿಳಿಸಿ ಮಕ್ಕಳು ತಂಬಾಕು, ಮದ್ಯ ಸೇವನೆ ಚಟಕ್ಕೆ ಒಳಗಾಗದಿರಿ ಎಂದು ಎಚ್ಚರಿಸಿದರು.ಧರ್ಮಸ್ಥಳ ಯೋಜನೆಯ ‘ನೀರು ಉಳಿಸಿ’ ವಿಭಾಗದ ಮೇಲ್ವಿಚಾರಕ ರಘು ಮಾತನಾಡಿ, ಈ ದುಶ್ಚಟಗಳಿಗೆ ಅನೇಕರು ಬಲಿಯಾಗಲು ಬಡತನವೂ ಕಾರಣವಾಗಿರುತ್ತದೆ. ದುಶ್ಚಟಗಳಿಗೆ ಬಲಿಯಾಗುತ್ತಿರುವ ಒಬ್ಬೊಬ್ಬರನ್ನೇ ಸರಿದಾರಿಗೆ ಕರೆತರಲು ಎಲ್ಲರೂ ಮುಂದಾದರೆ ಇಡೀ ಕುಟುಂಬವನ್ನೇ ರಕ್ಷಿಸಿದಂತಾಗುತ್ತದೆ ಎಂದು ತಿಳಿಸಿ, ಮಾದಕ ವ್ಯಸನಿಗಳಿಂದ ಸಮಾಜದಲ್ಲಿ ಅಪರಾಧಗಳ ಪ್ರಮಾಣವೂ ಹೆಚ್ಚುವುದರಿಂದ ಇದು ಕುಟುಂಬ ಮಾತ್ರವಲ್ಲ ಇಡೀ ಸಮಾಜಕ್ಕೂ ಮಾರಕ ಎಂದರು.ಮೇಲ್ವಿಚಾರಕಿ ಕೆ.ಉಷಾ ಮಾತನಾಡಿ, ನೀರು ಮಿತವಾಗಿ ಬಳಸಿ, ಮಕ್ಕಳು ಶುಚಿತ್ವಕ್ಕೆ ಒತ್ತು ನೀಡಿ, ಸಮಯ ಪ್ರಜ್ಞೆ,ಶಿಸ್ತು ಮೈಗೂಡಿಸಿಕೊಳ್ಳಿ, ನಿಮ್ಮ ತಂದೆ,ತಾಯಿ,ಹಿರಿಯರಿಗೆ ಗೌರವ ನೀಡುವ ಸಂಸ್ಕಾರ ಕಲಿಯಿರಿ, ಶಿಕ್ಷಣದೊಂದಿಗೆ ಸಂಸ್ಕಾರವಿದ್ದರೆ ಮಾತ್ರ ಉತ್ತಮ ಬದುಕು ಸಾಧ್ಯ ಎಂದರು.ಸೇವಾ ಪ್ರತಿನಿಧಿ ರೇಣುಕಾ, ಶಿಕ್ಷಕರಾದ ಗೋಪಾಲಕೃಷ್ಣ, ಭವಾನಿ, ಸುಗುಣಾ, ಶ್ವೇತಾ, ಫರೀದಾ, ರಮಾದೇವಿ, ಚಂದ್ರಶೇಖರ್, ಶ್ರೀನಿವಾಸಲು ಇದ್ದರು.