ಸಾರಾಂಶ
ಎಸ್ಎಸ್ಎಲ್ಸಿ ಫಲಿತಾಂಶ ಸುಧಾರಣೆಗಾಗಿ ಧಾರವಾಡ ಜಿಲ್ಲಾಡಳಿತಕ್ಕೆ ಪೂರಕವಾಗಿ ಸುಭೋದ ಶಿಕ್ಷಣ ಸಮಿತಿಯು ಶಿಕ್ಷಣ ಇಲಾಖೆ ಸಹಕಾರ ಹಾಗೂ ಧಾರವಾಡ ಟುಟ್ಯೋರಿಯಲ್ ಅಸೋಸಿಯೇಶನ್ ಜತೆಗೂಡಿ ಜ. 17 ಹಾಗೂ 18ರಂದು ಕರ್ನಾಟಕ ಇತಿಹಾಸ ಸಂಶೋಧನಾ ಮಂಡಲದಲ್ಲಿ, ಜ. 28 ಹಾಗೂ 29ರಂದು ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ವಿಶೇಷ ಕಾರ್ಯಾಗಾರ ಮಾಡಿವೆ.
ಧಾರವಾಡ:
ಈ ಬಾರಿ ವಿದ್ಯಾಕಾಶಿ ಖ್ಯಾತಿ ಧಾರವಾಡದ ಎಸ್ಸೆಸ್ಸೆಲ್ಸಿ ಫಲಿತಾಂಶ ಹೆಚ್ಚಿಸಲು ಮಿಶನ್ ವಿದ್ಯಾಕಾಶಿ ಗುರಿ ಹೊತ್ತು ಪ್ರಯತ್ನಿಸುತ್ತಿರುವ ಜಿಲ್ಲಾಡಳಿತಕ್ಕೆ ಪೂರಕವಾಗಿ ಸುಭೋದ ಶಿಕ್ಷಣ ಸಮಿತಿಯು ಶಿಕ್ಷಣ ಇಲಾಖೆ ಸಹಕಾರ ಹಾಗೂ ಧಾರವಾಡ ಟುಟ್ಯೋರಿಯಲ್ ಅಸೋಸಿಯೇಶನ್ ಜತೆಗೂಡಿ ವಿಶೇಷ ಪ್ರಯತ್ನವೊಂದನ್ನು ಮಾಡಿದೆ.ಜ. 17 ಹಾಗೂ 18ರಂದು ಕರ್ನಾಟಕ ಇತಿಹಾಸ ಸಂಶೋಧನಾ ಮಂಡಲದಲ್ಲಿ, ಜ. 28 ಹಾಗೂ 29ರಂದು ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ವಿಶೇಷ ಕಾರ್ಯಾಗಾರ ಮಾಡಿವೆ. ಮೊದಲ ಕಾರ್ಯಾಗಾರದಲ್ಲಿ ಎಸ್ಸೆಸ್ಸೆಲ್ಸಿಯ ಆಯ್ದ 65 ವಿದ್ಯಾರ್ಥಿಗಳನ್ನು ಗುರುತಿಸಿ ಮಿಶನ್ 625 ಎಂಬ ಶೀರ್ಷಿಕೆ ಅಡಿ ನುರಿತ ಶಿಕ್ಷಕರ ಸಹಕಾರದೊಂದಿಗೆ ಗಣಿತ, ವಿಜ್ಞಾನ ಹಾಗೂ ಇಂಗ್ಲಿಷ್ ವಿಷಯಗಳ ಮೇಲೆ ಮನಮುಟ್ಟುವ ಹಾಗೂ 625 ಅಂಕ ಪಡೆಯುವ ರೀತಿಯಲ್ಲಿ ತರಬೇತಿ ನೀಡಲಾಗಿದೆ. ಸಣ್ಣ-ಸಣ್ಣ ಸಮಸ್ಯೆಗಳಿಗೆ ಪರಿಹಾರ, ಆರೋಗ್ಯದ ಕಾಳಜಿ, ಸಮಯ ಪ್ರಜ್ಞೆಯ ಮಹತ್ವ ತಿಳಿಸಲಾಯಿತು. ಗಣಿತದ ಬಗ್ಗೆ ಅನಿಲ ಕದಂ, ಇಂಗ್ಲಿಷ್ ಬಗ್ಗೆ ಅರ್ಜುನ ಜಾಧವ ಹಾಗೂ ವಿಜ್ಞಾನದ ಬಗ್ಗೆ ಸೂರ್ಯಕಾಂತ ತರಬೇತಿ ನೀಡಿದರು.
ಜ. 28,29ರಂದು ಜೆಎಸ್ಸೆಸ್ ಸಂಸ್ಥೆಯಲ್ಲಿ 162 ಪ್ರಯತ್ನಶೀಲ (ಕಲಿಕೆಯಲ್ಲಿ ಸುಧಾರಣೆ ಆಗುತ್ತಿರುವ) ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಕಾರ್ಯಾಗಾರ ನಡೆಯಿತು. ರಾಜ್ಯ ಪ್ರಶಸ್ತಿ ವಿಜೇತ ಎಸ್.ವಿ. ಬುರ್ಲಿ ಗಣಿತ ಹಾಗೂ ವಿಜ್ಞಾನ ವಿಷಯದ ಪರಿಣಿತ ರಾಘವೇಂದ್ರ ಮೀಸಾಳೆ ಅವರು ಪ್ರಯೋಗಗಳ ಮೂಲಕ ವಿಜ್ಞಾನ ಹೇಳಿದರು. ಬಸವರಾಜ್ ಚಿಕ್ಕೂರ್ ಸಮಾಜ ವಿಜ್ಞಾನ ತಿಳಿಸಿಕೊಟ್ಟರು. ಸಿದ್ದಪ್ಪ ಟಿ.ವಿ. ಇಂಗ್ಲಿಷ್ ವಿಷಯ ತೆಗೆದುಕೊಂಡರು. ಸುಧೀಂದ್ರ ದೇಶಪಾಂಡೆ ಮಕ್ಕಳಿಗೆ ಪರೀಕ್ಷಾ ಭಯ ನಿವಾರಣೆ ಮಾಡಿದರು. ಎರಡೂ ಕಾರ್ಯಾಗಾರವನ್ನು ಸಂಚಾಲಕ ವಿನಾಯಕ ಜೋಶಿ ನಿರ್ವಹಿಸಿದರು.ಡಾ. ಅಜಿತ ಪ್ರಸಾದ, ವಕೀಲ ಅರುಣ ಜೋಶಿ, ನಾಗೇಶ ಅಣ್ಣಿಗೇರಿ, ಬಿಶೊಓ ಅಶೋಕ ಸಿಂದಗಿ, ಮಹಾವೀರ ಉಪಾಧ್ಯಾಯ ಮತ್ತಿತರರು ಇದ್ದರು.