ಸಾರಾಂಶ
ಹನೂರು ತಾಲೂಕಿನ ಅಜ್ಜಿಪುರ ರಸ್ತೆಯಲ್ಲಿ ಬರುವ ಹರಕನಹಳ್ಳಿ ಬಳಿ ನೀರು ಕುಡಿಯಲು ಬಂದ ಜಿಂಕೆಯನ್ನು ನಾಯಿಗಳು ಕಚ್ಚಿ ಗಾಯಗೊಳಿಸುತ್ತಿದ್ದಾಗ ಸಾರ್ವಜನಿಕರು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಕನ್ನಡಪ್ರಭ ವಾರ್ತೆ ಹನೂರು
ಬೀದಿ ನಾಯಿಗಳ ದಾಳಿಗೆ ಒಳಗಾಗಿದ್ದ ಜಿಂಕೆಯನ್ನು ಸಾರ್ವಜನಿಕರು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ.ಹನೂರು ಪಟ್ಟಣದ ಅಜ್ಜಿಪುರ ರಸ್ತೆಯ ಮಲೆ ಮಹದೇಶ್ವರ ವನ್ಯಜೀವಿ ವಿಭಾಗದ ಹನೂರು ಬಪ್ಪರ್ ಜೋನ್ ವಲಯದ ಹರಕನಹಳ್ಳಿ ಬಳಿ ಜಿಂಕೆಯೊಂದು ಹಳ್ಳದಲ್ಲಿ ನೀರು ಕುಡಿಯಲು ಬಂದಾಗ ಬೀದಿ ನಾಯಿಗಳು ಸುತ್ತುವರಿದು ಕಚ್ಚಲು ಪ್ರಾರಂಭಿಸಿದಾಗ ಅಲ್ಲೇ ಇದ್ದ ಕೋತಿಗಳ ಚಿರಾಟ ನೋಡಿದ ವಾಹನ ಸವಾರರು ಹಳ್ಳದ ನೀರಿನಲ್ಲಿ ಜಿಂಕೆಯನ್ನು ನಾಯಿಗಳು ಸುತ್ತುವರಿದು ಕಚ್ಚಿ ಗಾಯಗೊಳಿಸುತ್ತಿದ್ದಾಗ ಪಾರಾಗಲು ಜಿಂಕೆ ಸೆಣಸಾಟ ನಡೆಸುತ್ತಿದ್ದನ್ನು ನೋಡಿದ ನಾಗರಿಕರು ಬೀದಿ ನಾಯಿಗಳನ್ನು ಕಲ್ಲಿನಿಂದ ಹೊಡೆದು ಜಿಂಕೆಯನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ .ಬೀದಿ ನಾಯಿಗಳು ಅರಣ್ಯ ಪ್ರದೇಶದಲ್ಲಿ ಪ್ರಾಣಿಗಳ ಬೇಟೆಗೆ ಹೊಂಚು ; ಮಲೆ ಮಹದೇಶ್ವರ ವನ್ಯ ಧಾಮದ ಅರಣ್ಯ ಪ್ರದೇಶದಲ್ಲಿ ಇತ್ತೀಚೆಗೆ ಉತ್ತಮ ಮಳೆಯಾದ ಕಾರಣ ಅಚ್ಚ ಹಸಿರಿನಿಂದ ಕಂಗೊಳಿಸುತ್ತಿರುವ ಅರಣ್ಯ ಪ್ರದೇಶದಲ್ಲಿ ಜಿಂಕೆಗಳು ಹೆಚ್ಚಾಗಿ ಇರುವುದರಿಂದ ಪಟ್ಟಣದಿಂದ ಬೀದಿ ನಾಯಿಗಳು ಗುಂಪಾಗಿ ಅರಣ್ಯ ಪ್ರದೇಶಕ್ಕೆ ತೆರಳಿ, ಅರಣ್ಯದಲ್ಲಿ ಸಿಗುವ ಕಾಡುಪ್ರಾಣಿಗಳ ಮೇಲೆ ದಾಳಿ ನಡೆಸಿ ಹಲವಾರು ಜಿಂಕೆಗಳನ್ನು ಕೊಂದು ತಿಂದಿರುವ ಘಟನೆಯೂ ಸಹ ಜರುಗಿದೆ ಜೊತೆಗೆ ಇತ್ತೀಚೆಗೆ ಮಲೆ ಮಹದೇಶ್ವರ ಕ್ರೀಡಾಂಗಣದ ಬಳಿ ಸಹ ಜಿಂಕೆಯ ಮೇಲೆ ದಾಳಿ ನಡೆಸಿ ಗಾಯಗೊಳಿಸಿದ ಹಿನ್ನೆಲೆಯಲ್ಲಿ ಸಾರ್ವಜನಿಕರು, ಜಿಂಕೆಯನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದರು. ಇದರಿಂದಾಗಿ ಈ ಭಾಗದಲ್ಲಿ ಬೀದಿ ನಾಯಿಗಳು ಅರಣ್ಯ ಪ್ರದೇಶಕ್ಕೆ ನುಗ್ಗಿ ಕಾಡು ಪ್ರಾಣಿಗಳ ಬೇಟೆಗೆ ಹಂಚು ಹಾಕಿ ಇಂತಹ ಘಟನೆಗಳಿಗೆ ಕಾರಣವಾಗುತ್ತಿವೆ.ಪ್ರಾಣಿ ಪ್ರಿಯರ ಆತಂಕ :ವನ್ಯಧಾಮದಲ್ಲಿ ಕಾಡುಪ್ರಾಣಿಗಳ ಉಳಿವಿಗಾಗಿ ಅರಣ್ಯ ಇಲಾಖೆ ಹತ್ತಾರು ಯೋಜನೆಗಳನ್ನು ರೂಪಿಸಿದೆ ಜೊತೆಗೆ ಪಟ್ಟಣದ ಬೀದಿ ನಾಯಿಗಳು ಬೆಳಗ್ಗೆ ಸಂಜೆ ವೇಳೆ ಅರಣ್ಯ ಪ್ರದೇಶಕ್ಕೆ ನುಗ್ಗಿ ಕಾಡು ಪ್ರಾಣಿಗಳ ಬೇಟೆಗೆ ಹೊಂಚು ಹಾಕುತ್ತಿರುವುದು ಇದರ ಬಗ್ಗೆ ಅರಣ್ಯ ಇಲಾಖೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವ ಮೂಲಕ ಅರಣ್ಯ ಪ್ರದೇಶಕ್ಕೆ ಬೀದಿ ನಾಯಿಗಳು ಹೋಗುವುದನ್ನು ತಡೆಗಟ್ಟಲು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.