ಸಾರಾಂಶ
ಕೊಪ್ಪಳ:
ನಗರದ ಬಿಜೆಪಿ ಜಿಲ್ಲಾ ಕಚೇರಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ೧೧ ವರ್ಷದ ಸಾಧನೆಯ ಮೈಲುಗಲ್ಲು ಮೆಲುಕು ಹಾಗೂ ನರಸಿಂಗರಾವ್ ಕುಲಕರ್ಣಿ ಅವರ ಸಂತಾಪ ಸಭೆ ಜರುಗಿತು.ಈ ವೇಳೆ ಮಾತನಾಡಿದ ವಿಧಾನಸಭೆ ವಿರೋಧ ಪಕ್ಷದ ಮುಖ್ಯ ಸಚೇತಕ ದೊಡ್ಡನಗೌಡ ಪಾಟೀಲ್, ವಿಪ ಸದಸ್ಯೆ ಹೇಮಲತಾ ನಾಯಕ, ಮಾಜಿ ಸಚಿವ ಹಾಲಪ್ಪ ಆಚಾರ್ ಸೇರಿದಂತೆ, ಮೋದಿ ನೇತ್ವತ್ವದಲ್ಲಿ 60 ವರ್ಷದಲ್ಲಿ ಆಗದ ಅಭಿವೃದ್ಧಿ ಕೆಲಸಗಳನ್ನು 11 ವರ್ಷದಲ್ಲಿ ಮಾಡಲಾಗಿದೆ. ‘ಸಬ್ ಕಾ ಸಾಥ್ ಸಬ್ ಕಾ ವಿಕಾಸ್'''' ಘೋಷಣೆಯೊಂದಿಗೆ ದೇಶದ ೨೫ ಕೋಟಿಗೂ ಅಧಿಕ ಜನರನ್ನು ಬಡತನದಿಂದ ಹೊರ ಬರುವಂತೆ ಮಾಡಲಾಗಿದೆ. ಜನರಿಗೆ ಮೂಲಸೌಕರ್ಯ ಸೇರಿದಂತೆ ವಿವಿಧ ಕ್ಷೇತ್ರಗಳಿಗೆ ಹೆಚ್ಚಿನ ಒತ್ತು ನೀಡಲಾಗಿದೆ. ದೇಶದ ಭದ್ರತೆ ಹಾಗೂ ರಕ್ಷಣೆ ವಿಚಾರದಲ್ಲಿ ಹಿಂದೆದೂ ಕಾಣದ ರೀತಿ ದಿಟ್ಟ ನಿರ್ಧಾರ ಕೈಗೊಂಡು ಸಶಕ್ತ ಭಾರತ ನಿರ್ಮಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದರು.
ರಾಷ್ಟ್ರೀಯ ಹೆದ್ದಾರಿ, ರೈಲ್ವೆ ಮೇಲ್ಸೇತುವೆ, ಹೊಸ ರೈಲು ಮಾರ್ಗ, ಹೊಸ ರೈಲು, ರೈಲು ನಿಲ್ದಾಣಗಳ ಮೇಲ್ದರ್ಜೆಗೆ, ವಾಣಿಜ್ಯ ಉದ್ದೇಶಕ್ಕಾಗಿ ಸರಕು ಸಾಗಾಣಿಕೆ ರೈಲುಗಳ ಹೆಚ್ಚಿಸುವಲ್ಲಿ ಮೋದಿ ಶ್ರಮಿಸಿದ್ದಾರೆ. ಇಎಸ್ಐ ಆಸ್ಪತ್ರೆ, ವಿಭಾಗೀಯ ಅಂಚೆ ಕಚೇರಿ, ಪಾಸ್ಪೋರ್ಟ್ ಸೇವಾ ಕೇಂದ್ರ, ತಾಲೂಕು ಮಟ್ಟದಲ್ಲಿ ೨೦೧೮ರಲ್ಲಿ ಗಂಗಾವತಿ, ೨೦೨೫ ರಲ್ಲಿ ಸಿಂಧನೂರಿನಲ್ಲಿ ಪಿಎಂ ಕೇಂದ್ರಿಯ ವಿದ್ಯಾಲಯಗಳ ಆರಂಭ, ಕುಷ್ಟಗಿಯಲ್ಲಿ ಕೇಂದ್ರಿಯ ವಿದ್ಯಾಲಯ ಆರಂಭಕ್ಕೆ ಅನುಮೋದನೆಗೆ ಒತ್ತು ನೀಡಿದ್ದು ಗಮನಾರ್ಹ ಸಂಗತಿ ಎಂದು ನಾಯಕರು ಸರ್ಕಾರದ ಸಾಧನೆ ಶ್ಲಾಘಿಸಿದ್ದಾರೆ.ಈ ವೇಳೆ ಬಿಜೆಪಿ ಜಿಲ್ಲಾಧ್ಯಕ್ಷ ಬಸವರಾಜ ದಢೇಸುಗೂರು, ಬಳ್ಳಾರಿ ಸಹ ಪ್ರಭಾರಿ ಚಂದ್ರಶೇಖರ ಪಾಟೀಲ್ ಹಲಗೇರಿ, ಜಿಲ್ಲಾ ಸಂಚಾಲಕ ಶ್ರೀಧರ ಕೆಸರಟ್ಟಿ, ಸುನೀಲ್ ಹೆಸರೂರು, ಮಹೇಶ ಅಂಗಡಿ ಸೇರಿ ಹಲವರು ಪಾಲ್ಗೊಂಡಿದ್ದರು.ಬಿಜೆಪಿಗೆ ಸುದೀರ್ಘವಾಗಿ ಸೇವೆ ಸಲ್ಲಿಸಿ ಇತ್ತೀಚೆಗೆ ನಿಧನರಾದ ನರಸಿಂಗರಾವ್ ಕುಲಕರ್ಣಿಕ್ಕೆ ಕಾರ್ಯಕ್ರಮದಲ್ಲಿ ಮುಖಂಡರು ಕಂಬಿನಿ ಮಿಡಿದರು, ಅವರು ನಿಸ್ವಾರ್ಥ ಸೇವೆ ಸಲ್ಲಿಸಿ ಪಕ್ಷ ಕಟ್ಟಿ ಬೆಳೆಸಿದ್ದಾರೆ. ಅವರ ಅಗಲಿಕೆ ಪಕ್ಷಕ್ಕೆ ನಷ್ಟವನ್ನುಂಟು ಮಾಡಿದೆ ಎಂದು ಸಂತಾಪ ವ್ಯಕ್ತಪಡಿಸಿ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಲಾಯಿತು.