ಧಾರವಾಡ:
ಓದಿನಲ್ಲಿ ಯಶಸ್ಸು ಕಾಣದ ಹಿನ್ನೆಲೆಯಲ್ಲಿ ಕಾಲೇಜು ವಿದ್ಯಾರ್ಥಿಯೊಬ್ಬ ಮನನೊಂದು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.ಇಲ್ಲಿಯ ಸಾಧನಕೇರಿ ಮಂಗಳಗಟ್ಟಿ ಪ್ಲಾಟ್ನ ವಿಕಾಸ ನಾಯಕ (20) ಆತ್ಮಹತ್ಯೆ ಮಾಡಿಕೊಂಡ ಯುವಕ.
ಈತ ಫೆ. 6ರಂದೇ ಆತ್ಮಹತ್ಯೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಆತ್ಮಹತ್ಯೆಯ ಕಾರಣವು ಆತನ ಮೊಬೈಲ್ ಪರಿಶೀಲನೆ ವೇಳೆ ಪತ್ತೆಯಾಗಿದೆ. ಸಾವಿನ ನಂತರ ಮೊಬೈಲ್ ಪರಿಶೀಲಿಸಿದ್ದ ಪೊಲೀಸರು ಪಿಯುಸಿಯಲ್ಲಿ ಯಶಸ್ವಿಯಾಗದಿರುವ ಬಗ್ಗೆ ಪಶ್ಚಾತ್ತಾಪ ಪಟ್ಟಿರುವುದು ತಿಳಿದು ಬಂದಿದೆ. ಪಿಯುಸಿ ಸೈನ್ಸ್ ವಿದ್ಯಾರ್ಥಿಯಾಗಿದ್ದ ವಿಕಾಸ್, ಹಲವು ಬಾರಿ ಅನುತ್ತೀರ್ಣ ಹಾಗೂ ಜೆಇಇನಲ್ಲಿ ಉತ್ತಮ ಸಾಧನೆ ಮಾಡಲು ಅಸಾಧ್ಯವಾಗಿದ್ದರ ಬಗ್ಗೆ ತಂದೆ-ತಾಯಿಗೆ ವಾಟ್ಸ್ಆ್ಯಪ್ ಸಂದೇಶ ಕಳುಹಿಸಿದ್ದನು. ಇದರಿಂದ ಇತ್ತೀಚಿಗೆ ಮಾನಸಿಕ ಖಿನ್ನತೆಗೆ ಒಳಗಾಗಿದ್ದನು. ವಿಕಾಸ ನೇಣು ಹಾಕಿಕೊಳ್ಳುವ ಮುಂಚೆ ವಿಷ ಸಹ ಸೇವಿಸಿದ್ದು, ನೋವು ತಡೆಯಲಾಗದೇ ನೇಣಿಗೆ ಶರಣಾಗಿರುವುದನ್ನು ತನ್ನ ಮೆಸೇಜ್ನಲ್ಲಿ ಹೇಳಿಕೊಂಡಿದ್ದಾನೆ.ಈ ಮಧ್ಯೆ ವಿಕಾಸ ಮೊಬೈಲ್ ಗೇಮ್ ಆಡುವ ಹುಚ್ಚಿಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂಬ ಸುದ್ದಿ ಸಹ ಹರಡಿತ್ತು. ಆದರೆ, ಪೊಲೀಸ್ ತನಿಖೆ ನಂತರ ಮಾಹಿತಿ ಪಡೆದು ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ಈ ವಿಷಯವನ್ನು ತಳ್ಳಿ ಹಾಕಿದ್ದಾರೆ. ಧಾರವಾಡ ಉಪನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.