ಧಾರವಾಡ:

ನಾಟಕಗಳು ಬರೀ ಮನರಂಜನೆ ಅಲ್ಲ, ಬದಲಾಗಿ ಶಿಕ್ಷಣ ಮೌಲ್ಯ ಮತ್ತು ಸಾಮಾಜಿಕ ಸಂದೇಶಗಳನ್ನು ಜನರಿಗೆ ತಲುಪಿಸುವ ಪ್ರಮುಖ ಮಾಧ್ಯಮ ಎಂದು ಮಕ್ಕಳ ವೈದ್ಯ ಡಾ. ರಾಜನ್‌ ದೇಶಪಾಂಡೆ ಹೇಳಿದರು.

ಡೆ. ಚೆನ್ನಬಸಪ್ಪ ಪ್ರಾಥಮಿಕ ಶಿಕ್ಷಣ ಪ್ರತಿಷ್ಠಾನ, ಡಾ. ಎಚ್.ಎಫ್. ಕಟ್ಟಿಮನಿ ಪ್ರೌಢ ಶಿಕ್ಷಣ ಪ್ರತಿಷ್ಠಾನ, ರಂಗಾಯಣದ ಸಹಯೋಗದೊಂದಿಗೆ ನಡೆದ ನಾಟಕೋತ್ಸವದಲ್ಲಿ ಮಾತನಾಡಿದ ಅವರು, ನಾಟಕ ಸಮಾಜದ ಕನ್ನಡಿ, ನಾಟಕಗಳು ಸಮಾಜದ ವಾಸ್ತವಿಕ ವಿದ್ಯಮಾನ, ಸಂಕಷ್ಟ ಮತ್ತು ತಪ್ಪುಗಳನ್ನು ಎತ್ತಿ ತೋರಿಸುವ ಮೂಲಕ ಸಮಾಜ ತಿದ್ದುವ ಸಾಧನವಾಗಿ ಕಾರ್ಯನಿರ್ವಹಿಸುತ್ತವೆ. ನಾಟಕಗಳಲ್ಲಿ ಭಾಗವಹಿಸುವುದರಿಂದ ವ್ಯಕ್ತಿತ್ವ ವಿಕಸನ, ಆತ್ಮವಿಶ್ವಾಸ ಕೌಶಲ ಮತ್ತು ಸೃಜನಶೀಲತೆ ಹೆಚ್ಚಾಗುತ್ತದೆ ಎಂದರು.

ನಾಟಕಗಳು ಪೌರಾಣಿಕ ಇತಿಹಾಸ ಮತ್ತು ಸಾಮಾಜಿಕ ವೈಜ್ಞಾನಿಕ ವಿಷಯಗಳ ಮೂಲಕ ಜನರ ಜ್ಞಾನ ವಿಸ್ತರಿಸುತ್ತವೆ ಎಂದು ವಿಶ್ರಾಂತ ಶಿಕ್ಷಣಾಧಿಕಾರಿ ಸಿದ್ದರಾಮ ಮನಹಳ್ಳಿ ಹೇಳಿದರು. ಗಿರೀಶ ಪದಕಿ ಅಧ್ಯಕ್ಷತೆ ವಹಿಸಿದ್ದರು. ಸಂಯೋಜಕ ಕೆ.ಎಚ್. ನಾಯಕ, ಎಂ.ಎಂ. ಚಿಕ್ಕಮಠ ಇದ್ದರು. ರೋಹಿಣಿ ದಾನಿ ಇದ್ದರು. ತಾರಿಹಾಳ ಸರ್ಕಾರಿ ಶಾಲೆಯ ಮಕ್ಕಳು ಪ್ರದರ್ಶಿಸಿದ ಭೂತ ಬೆನ್ನಟ್ಟಿದೆ ಎಚ್ಚರ! ಎಚ್ಚರ! ಪ್ರಥಮ, ಮುರಕಟ್ಟಿಯ ಸರ್ಕಾರಿ ಶಾಲೆಯ ಮಕ್ಕಳು ಪ್ರದರ್ಶಿಸಿದ ವೀರ ಅಭಿಮನ್ಯು ನಾಟಕ ದ್ವಿತೀಯ, ದುರ್ಗಾ ಕಾಲನಿ ಸರ್ಕಾರಿ ಶಾಲೆಯ ಮಕ್ಕಳ ಬೆಳದಿಂಗಳ ಊಟ ತೃತೀಯ ಸ್ಥಾನ ಪಡೆದವು. ಕಲಗೇರಿ ಸಂಗೀತ ಶಾಲೆ ಡಾ. ಸರ್ವಪಲ್ಲಿ ರಾಧಾಕೃಷ್ಣನ್‌ ನಾಟಕ ಸಮಾಧಾನಕರ ಬಹುಮಾನ ಪಡೆಯಿತು. ಪಂಚಕಚೇರಿ ಶಾಲೆಯ ನಾಟಕಕ್ಕೆ ಉತ್ತಮ ನಿರ್ದೇಶನ, ಉತ್ತಮ ಸಾಹಿತ್ಯಕ್ಕೆ ಕಿರೇಸೂರ ಶಾಲೆ, ಉತ್ತಮ ನಟನಗೆ ಸತ್ತೂರ ಶಾಲೆಯ ನಾಟಕ, ಉತ್ತಮ ನಟಿ ಎಂದು ನೂಲ್ವಿ ಶಾಲೆ ನಾಟಕ, ಉತ್ತಮ ಸಂಗೀತವೆಂದು ದೇವರಗುಡಿಹಾಳ ಶಾಲೆ ಹಾಗೂ ಉತ್ತಮ ಪ್ರಸಾಧನನ ಎಂದು ಕಣವಿ ಹೊನ್ನಾಪೂರ ಶಾಲೆಗೆ ಬಹುಮಾನ ನೀಡಲಾಯಿತು.