ಉಡುಪಿ: ತಮ್ಮ ಚತುರ್ಥ, ವಿಶ್ವಗೀತಾ ಪರ್ಯಾಯವನ್ನು ಅತ್ಯಂತ ವೈಭವಯುತವಾಗಿ ಪೂರೈಸಿದ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ಮತ್ತು ಕಿರಿಯ ಶ್ರೀ ಸುಶ್ರೀಂದ್ರ ತೀರ್ಥ ಶ್ರೀಪಾದರು ಫೆ. 21ರಂದು ಬೆಂಗಳೂರು ನಗರಕ್ಕೆ ಪುರಪ್ರವೇಶ ಮಾಡುವ ಹಿನ್ನಲೆಯಲ್ಲಿ, ಉಭಯ ಶ್ರೀಗಳಿಗೆ ಅಭಿನಂದನಾ ಸಮಾರಂಭವನ್ನು ಸ್ವಾಗತ ಸಮಿತಿ ವತಿಯಿಂದ ಬಸವನ ಗುಡಿಯ ಗೋವರ್ಧನ ಕ್ಷೇತ್ರದಲ್ಲಿ ಹಮ್ಮಿಕೊಳ್ಳಲಾಗಿದೆ.ಈ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಬೆಂಗಳೂರು ಕೇಂದ್ರ ಸಂಸದ ಪಿ. ಸಿ. ಮೋಹನ್, ಬೆಂಗಳೂರು ಗ್ರಾಮಾಂತರ ಸಂಸದ ಡಾ. ಮಂಜುನಾಥ್ ಎನ್., ವಿದ್ವಾಂಸರಾದ ಡಾ ಶ್ರೀ ವ್ಯಾಸನಕೆರೆ ಪ್ರಭಂಜನಾಚಾರ್ಯ, ಬಸವನಗುಡಿಯ ಶಾಸಕ ಎಸ್. ರವಿ ಸುಬ್ರಹ್ಮಣ್ಯಂ ಬಿಜೆಪಿ ಮುಖಂಡರಾದ ಎನ್. ಆರ್. ರಮೇಶ್, ರಾಜ್ಯ ಸರ್ಕಾರದ ಬ್ರಾಹ್ಮಣ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಸಗೋಡು ಜಯಸಿಂಹ, ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ರಘುನಾಥ್ ಎಸ್., ಬೆಂಗಳೂರು ಗಾಯನ ಸಮಾಜ ಅಧ್ಯಕ್ಷ ಡಾ. ಎಂ. ಆರ್. ವಿ. ಪ್ರಸಾದ್, ಖ್ಯಾತ ಚಿತ್ರನಟ ಮಾಸ್ಟರ್ ಆನಂದ್ ಭಾಗವಹಿಸಲಿದ್ದಾರೆ. ಬೆಂಗಳೂರು ಪೂರ್ಣಪ್ರಜ್ಞ ಸಂಶೋಧನಾ ಕೇಂದ್ರದ ನಿರ್ದೇಶಕ ಡಾ. ವೀರನಾರಾಯಣ ಪಾಂಡುರಂಗಿ ಶುಭಾಶಂಸನೆಗೈಯಲಿದ್ದಾರೆ.
ಅಂದು ಸಂಜೆ 5 ಗಂಟೆಗೆ ಪೂಜ್ಯ ಶ್ರೀಗಳನ್ನು ಗುರು ನರಸಿಂಹ ಸಭಾ ಭವನದಿಂದ ಭವ್ಯ ಮೆರವಣಿಗೆಯ ಮೂಲಕ ಬಸವನಗುಡಿಯ ಶ್ರೀ ಪುತ್ತಿಗೆ ಮಠದ ಗೋವರ್ಧನ ಕ್ಷೇತ್ರಕ್ಕೆ ಬರಮಾಡಿಕೊಳ್ಳಲಾಗುವುದು. ತದನಂತರ 7 ಗಂಟೆಗೆ ಗಣ್ಯರ ಉಪಸ್ಥಿತಿಯಲ್ಲಿ ಅಭಿನಂದನಾ ಕಾರ್ಯಕ್ರಮ ನಡೆಯಲಿದೆ.ಈ ಸಂದರ್ಭ ವಿವಿಧ ಭಜನಮಂಡಳಿಯ ಮಾತೆಯರಿಂದ ಭಗವದ್ಗೀತಾ ಪಾರಾಯಣವೂ ನಡೆಯಲಿದೆ ಮತ್ತು ಶ್ರೀಗಳಿಂದ ಭಕ್ತರಿಗೆ ಕೋಟಿ ಗೀತಾ ಲೇಖನ ಯಜ್ಞದ ದೀಕ್ಷಾ ಸಮಾರಂಭವೂ ನಡೆಯಲಿದೆ ಎಂದು ಸ್ವಾಗತ ಸಮಿತಿ ಅಧ್ಯಕ್ಷ ರಾಮಚಂದ್ರ ಉಪಾಧ್ಯಾಯ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.