ಜಮೀನಿನ ಬದುವಿನ ವಿಚಾರಕ್ಕೆ ದಾಯಾದಿಗಳ ಮಧ್ಯೆ ಮಾರಾಮಾರಿ

| Published : Jun 09 2024, 01:38 AM IST

ಜಮೀನಿನ ಬದುವಿನ ವಿಚಾರಕ್ಕೆ ದಾಯಾದಿಗಳ ಮಧ್ಯೆ ಮಾರಾಮಾರಿ
Share this Article
  • FB
  • TW
  • Linkdin
  • Email

ಸಾರಾಂಶ

ಎರಡು ದಾಯಾದಿ ಕುಟುಂಬದ ಸದಸ್ಯರ ಮಧ್ಯೆ ಎದ್ದ ಜಮೀನಿನ ಬದುವಿನ ವಿಚಾರದ ಕಲಹ ವಿಕೋಪಕ್ಕೆ ತಿರುಗಿ ಪರಸ್ಪರ ಬಡಿದಾಡಿಕೊಂಡಿದ್ದಾರಲ್ಲದೆ, ಜಮೀನಿನ ಬದುವಿನ ವಿಚಾರದ ದಾಯಾದಿ ಕಲಹದಲ್ಲಿ ಎರಡು ಕುಟುಂಬದ ಸದಸ್ಯರು ಹೊಡೆದಾಡಿಕೊಂಡಿದ್ದು, ಘಟನೆಯಲ್ಲಿ ಟ್ರ್ಯಾಕ್ಟರ್‌ ಜಖಂಗೊಂಡಿದೆ.

ಕನ್ನಡಪ್ರಭ ವಾರ್ತೆ, ದಾವಣಗೆರೆ

ಜಮೀನಿನ ಬದುವಿನ ವಿಚಾರದ ದಾಯಾದಿ ಕಲಹದಲ್ಲಿ ಎರಡು ಕುಟುಂಬದ ಸದಸ್ಯರು ಹೊಡೆದಾಡಿಕೊಂಡಿದ್ದು, ಘಟನೆಯಲ್ಲಿ ಟ್ರ್ಯಾಕ್ಟರನ್ನು ಜಖಂಗೊಳಿಸಿ, ಇಬ್ಬರು ಯುವಕರನ್ನು ಕಲ್ಲು, ದೊಣ್ಣೆಗಳಿಂದ ತೀವ್ರವಾಗಿ ಹೊಡೆದ ಘಟನೆ ನ್ಯಾಮತಿ ತಾಲೂಕಿನ ಸೋಗಿಲು ಗ್ರಾಮದಲ್ಲಿ ವರದಿಯಾಗಿದೆ.

ನ್ಯಾಮತಿ ತಾಲೂಕಿನ ಸೋಗಿಲು ಗ್ರಾಮದ ಗಿರೀಶ ನಾಯ್ಕ, ಹರೀಶ ನಾಯ್ಕ ಎಂಬುವರ ಮೇಲೆ ಕಲ್ಲು, ದೊಣ್ಣೆಗಳಿಂದ ಮಾರಣಾಂತಿಕವಾಗಿ ಹಲ್ಲೆ ಮಾಡಲಾಗಿದೆ. ಗಾಯಾಳುಗಳ ಸಂಬಂಧಿಗಳಾದ ಶ್ರೀಧರ ನಾಯ್ಕ, ಚಿನ್ನ ನಾಯ್ಕ, ಶೈನಾ ನಾಯ್ಕ ಹಲ್ಲೆ ಮಾಡಿದ್ದಾರೆಂದು ದೂರಲಾಗಿದೆ.

ಅಣ್ಣ-ತಮ್ಮಂದಿರ ಮಕ್ಕಳಾದ ಹಲ್ಲೆ ಮಾಡಿದವರು, ಹಲ್ಲೆಗೊಳಗಾದವರ ಮಧ್ಯೆ ಜಮೀನಿನ ಬದುವಿನ ವಿಚಾರಕ್ಕೆ ಜಗಳ ಶುರುವಾಗಿದೆ. ಪರಸ್ಪರರ ಮಧ್ಯೆ ಮಾತಿಗೆ ಮಾತು ಬೆಳೆದು, ಅದು ತೀವ್ರ ಸ್ವರೂಪ ಪಡೆದಿದ್ದೆ. ಕಲ್ಲು, ದೊಣ್ಣೆಗಳಿಂದ ಗಿರೀಶ ನಾಯ್ಕ, ಹರೀಶ ನಾಯ್ಕನ ಮೇಲೆ ಶ್ರೀಧರ ನಾಯ್ಕ, ಚಿನ್ನನಾಯ್ಕ, ಶೈನಾ ನಾಯ್ಕ ಹಲ್ಲೆ ಮಾಡಿದ್ದಾರೆಂದು ಹೇಳಲಾಗಿದೆ.

ಗಿರೀಶ ನಾಯ್ಕ, ಹರೀಶ ನಾಯ್ಕರನ್ನು ಹಿಡಿದುಕೊಂಡು, ಗುಂಪಿನಲ್ಲಿದ್ದವರು ಚೆನ್ನಾಗಿ ಥಳಿಸಿದ್ದಾರೆ. ಜಗಳ ವಿಕೋಪಕ್ಕೆ ಹೋಗಿದ್ದರಿಂದ ಕಲ್ಲು, ದೊಣ್ಣೆಗಳಿಂದ ಹಲ್ಲೆ ಮಾಡಿದ್ದಾರೆ. ಈ ಎಲ್ಲಾ ಘಟನೆಯನ್ನು ಸ್ಥಳದಲ್ಲಿದ್ದವರು ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದಾರೆ. ದಾಯಾದಿ ಕಲಹವು ಕಲ್ಲು, ದೊಣ್ಣೆ ಹಿಡಿದು ಹೊಡೆದಾಡಿದ್ದನ್ನು ಕಂಡು ಗ್ರಾಮಸ್ಥರು ತೀವ್ರ ಗಾಬರಿ ಗೊಂಡಿದ್ದಾರೆ. ಘಟನೆಯಲ್ಲಿ ಗಿರೀಶ ನಾಯ್ಕರ ಟ್ರ್ಯಾಕ್ಟರ್‌ ಸಹ ಧ್ವಂಸಗೊಳಿಸಲಾಗಿದೆ.

ಘಟನೆಯಲ್ಲಿ ತೀವ್ರವಾಗಿ ಗಾಯಗೊಂಡ ಹರೀಶ ನಾಯ್ಕಗೆ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ಕರೆದೊಯ್ದು, ದಾಖಲಿಸಲಾಗಿದೆ. ಆತನ ಸ್ಥಿತಿ ಗಂಭೀರವಾಗಿದೆ ಎಂದು ಹೇಳಲಾ ಗಿದೆ. ಹಲ್ಲೆ ಮಾಡಿದವರ ವಿರುದ್ಧ ಸೂಕ್ತ ಕ್ರಮಕೈಗೊಳ್ಳುವಂತೆ ಗಾಯಾಳುಗಳ ಕುಟುಂಬವು ನ್ಯಾಮತಿ ಪೊಲೀಸ್ ಠಾಣೆಗೆ ದೂರು ನೀಡಿದೆ.ಮದರಸಾ ಬಳಿ ಯುವಕಗೆ ಹಲ್ಲೆ ಪ್ರಕರಣದಲ್ಲಿ ನಾಲ್ವರ ಬಂಧನ

ದಾವಣಗೆರೆ: ಮದರಸಾ ಮುಂದಿನ ಖಾಲಿ ಕೊಠಡಿಗೆ ವ್ಯಕ್ತಿಯೊಬ್ಬನನ್ನು ಕರೆದೊಯ್ದು, ಕೈ-ಕಾಲುಗಳಿಂದ ಹಲ್ಲೆ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ 4 ಜನ ಆರೋಪಿಗಳನ್ನು ಹರಿಹರ ನಗರ ಪೊಲೀಸರು ಬಂಧಿಸಿದ್ದು, ಉಳಿದವರಿಗೆ ಶೋಧ ಕೈಗೊಂಡಿದ್ದಾರೆ.

ಹರಿಹರದ ಮೊಹಮ್ಮದ್ ಅಲಿ ಅಲಿಯಾಸ್ ಮೊಹಮ್ಮದ್ ಅಜ್ಗರ್ (26 ವರ್ಷ) ಎಂಬಾತ ಮೇ 31ರ ರಾತ್ರಿ 8ರ ವೇಳೆ ತನ್ನ ಮನೆಯಲ್ಲಿದ್ದ ವೇಳೆ ಕೆಲವರು ಕರೆದೊಯ್ದಿದ್ದರು. ಹರಿಹರದ ಬೆಂಕಿ ನಗರದ ಮದರಸಾ ಮುಂದಿನ ಖಾಲಿ ಕೊಠಡಿಯೊಂದಕ್ಕೆ ಮೊಹಮ್ಮದ್ ಅಲಿಯನ್ನು ಕರೆದೊಯ್ದು, ಆತನಿಗೆ ಕೂಡಿ ಹಾಕಿದ್ದರು. ಅಲ್ಲಿ ಕೈ-ಕಾಲುಗಳಿಂದ ಹಲ್ಲೆ ಮಾಡಿದ್ದ ವೀಡಿಯೋಗಳು ಇತ್ತೀಚೆಗೆ ಸೋಷಿಯಲ್ ಮೀಡಿಯಾಗಳಲ್ಲಿ ಹರಿದಾಡಿದ್ದವು.

ವೀಡಿಯೋವನ್ನು ಪರಿಶೀಲಿಸಿದಾಗ ಅದು ಹರಿಹರದ ಕಾಳಿದಾಸ ನಗರದ ಮೊಹಮ್ಮದ್ ಅಲಿ ಅಲಿಯಾಸ್‌ ಮೊಹಮ್ಮದ್ ಅಜ್ಗರ್ ಮೇಲೆ ಹಲ್ಲೆ ಮಾಡಿದ್ದ ಹರಿಹರದ ವಾಸಿಗಳಾದ ಆಸೀಫ್ (25 ವರ್ಷ), ಗೌಸ್‌, ತೌಫೀಕ್‌, ಸೈಯದ್, ದಾದು, ಚೋಟು, ಫೈರೋಜ್‌ ಹಾಗೂ ಇತರರು ಕೈ-ಕಾಲುಗಳಿಂದ ತೀವ್ರ ಹಲ್ಲೆ ಮಾಡಿದ್ದರು. ಈ ಬಗ್ಗೆ ಮೊಹ್ಮದ್ ಅಲಿ ನೀಡಿದ ದೂರಿನ ಮೇರೆಗೆ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು, ಉಳಿದವರಿಗೆ ಶೋಧ ನಡೆಸಿದ್ದಾರೆ.

ಆರೋಪಿಗಳ ಪತ್ತೆಗಾಗಿ ಹರಿಹರ ನಗರ ಪೊಲೀಸ್ ಠಾಣೆ ಪೊಲೀಸ್ ನಿರೀಕ್ಷಕ ಎಸ್.ದೇವಾನಂದ ನೇತೃತ್ವದಲ್ಲಿ ತಂಡ ರಚಿಸಲಾಗಿತ್ತು. ತಂಡವು ಜೂ.8ರಂದು ಮೊಹಮ್ಮದ್ ಅಲಿ ಅಲಿಯಾಸ್‌ ಮೊಹಮ್ಮದ್‌ ಅಜ್ಗರ್‌ ಮೇಲಿನ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ ವಿಡಿಯೋ ಆಧರಿಸಿ ನಾಲ್ವರು ಆರೋಪಿಗಳನ್ನು ವಶಕ್ಕೆ ಪಡೆದಿದ್ದು, ಉಳಿದ ಆರೋಪಿಗಳಿಗೆ ಶೋಧ ಕೈಗೊಂಡಿದ್ದಾರೆ.