ಸಾರಾಂಶ
ಕನ್ನಡ ಪ್ರಭ ವಾರ್ತೆ ಮುಧೋಳ
ಉತ್ತಮ ಹವ್ಯಾಸಗಳು, ಏಕಾಗ್ರತೆ ಮತ್ತು ಆಸಕ್ತಿ ವ್ಯಕ್ತಿತ್ವ ವಿಕಸನಕ್ಕೆ ಭದ್ರ ಬುನಾದಿ ಆಗುತ್ತವೆ, ವಿದ್ಯಾರ್ಥಿಗಳು ಹದಿಹರೆಯದ ಮನೋದೈಹಿಕ ಸಮಸ್ಯೆಗಳಿಂದ ಹೊರಬಂದು ಶೈಕ್ಷಣಿಕ ಸಾಧನೆ ಕಡೆಗೆ ಗಮನಹರಿಸಿ ದೈಹಿಕ ಮತ್ತು ಮಾನಸಿಕ ಆರೋಗ್ಯ ಕಾಪಾಡಿಕೊಳ್ಳಬೇಕು. ಶ್ರದ್ಧೆ, ಕರ್ತವ್ಯ ಪ್ರಜ್ಞೆ, ಬೋಧನಾ ಶೈಲಿ, ಸಮಾಜಮುಖಿ ವ್ಯಕ್ತಿತ್ವವನ್ನು ನಾವೆಲ್ಲರೂ ಮೈಗೂಡಿಸಿಕೊಳ್ಳಬೇಕೆಂದು ಬೆಂಗಳೂರಿನ ಖ್ಯಾತ ಮನೋವೈದ್ಯ ಡಾ.ಸಿ.ಆರ್. ಚಂದ್ರಶೇಖರ ಹೇಳಿದರು.ಭಾರತೀಯ ವೈದ್ಯಕೀಯ ಸಂಘ, ಕನ್ನಡ ವೈದ್ಯ ಬರಹಗಾರರ ಸಮಿತಿ, ಬಿವಿವಿ ಸಂಘದ ಮುಧೋಳ ಎಸ್.ಆರ್.ಕಂಠಿ ಮಹಾವಿದ್ಯಾಲಯದ ಹಳೆಯ (ಹಿರಿಯ) ವಿದ್ಯಾರ್ಥಿಗಳ ಹಾಗೂ ಪಾಲಕರ ಸಂಘದ ಸಂಯುಕ್ತಾಶ್ರಯದಲ್ಲಿ ಶುಕ್ರವಾರ ಕಾಲೇಜಿನ ಸಭಾಭವನದಲ್ಲಿ ಹಮ್ಮಿಕೊಂಡಿದ್ದ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಕಲಿಕೆ, ಸ್ಮರಣೆ ಮತ್ತು ಪರೀಕ್ಷಾ ನಿರ್ವಹಣೆ ಕುರಿತು ಉಪನ್ಯಾಸ ನೀಡಿದ ಅವರು, ವಿದ್ಯಾರ್ಥಿಗಳು ಓದಿದ್ದನ್ನು, ಕೇಳಿದ್ದನ್ನು ಮನನ ಮಾಡಿಕೊಳ್ಳಬೇಕು, ಸಾಧನೆಯ ಗುರಿ ತಲುಪಬೇಕಾದರೆ ಆತ್ಮವಿಶ್ವಾಸ ಮತ್ತು ಆಶಾ ಭಾವನೆ ಹೊಂದಬೇಕೆಂದರು.
ಆರೋಗ್ಯ ಭಾಗ್ಯ ಸಕಲ ಭಾಗ್ಯಗಳಲ್ಲಿ ಮೀಗಿಲಾದದ್ದು. ಉತ್ತಮ ಆರೋಗ್ಯ ಹೊಂದಲು ದೇಹ, ಮನಸ್ಸು, ಇಂದ್ರೀಯ ಮತ್ತು ಆತ್ಮ ಪ್ರಸನ್ನವಾಗಿರಬೇಕು. ಸ್ವಾಸ್ಥ್ಯ ಬದುಕಿನ ಸೂತ್ರಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಸಧೃಢವಾದ ದೇಹದಲಿ ಸಧೃಢ ಮನಸ್ಸು ಇರುತ್ತದೆ. ನಮ್ಮ ಬದುಕಿನಲ್ಲಿ ದೇಹ ಮತ್ತು ಮನಸ್ಸಿನ ಸಮತೋಲನ ತುಂಬಾ ಮುಖ್ಯ. ಯುವಜನಾಂಗ ಋಣಾತ್ಮಕ ಆಲೋಚನೆ ಬಿಟ್ಟು ಸಕರಾತ್ಮಕ ಆಲೋಚನೆ ಬೆಳೆಸಿಕೊಳ್ಳಬೇಕೆಂದರು.ಕುಲಬುರ್ಗಿಯ ಸಿ.ಆರ್. ಚಂದ್ರಶೇಖರ ಸ್ನೇಹ ಬಳಗದ ಸಂಯೋಜಕ, ಕಾರ್ಯದರ್ಶಿ ಎಸ್.ಎಸ್. ಹಿರೇಮಠ ಮುಖ್ಯ ಅತಿಥಿ ಸ್ಥಾನವಹಿಸಿ ಸಾಂದರ್ಭಿಕವಾಗಿ ಮಾತನಾಡಿದರು. ಪ್ರಾಚಾರ್ಯ ಪ್ರೊ.ಎಂ.ವಿ. ಜಿಗಬಡ್ಡಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕನ್ನಡ ವೈದ್ಯ ಬರಹಗಾರರ ಸಮಿತಿ ನಿಕಟಪೂರ್ವ ಅಧ್ಯಕ್ಷ, ದತ್ತಿ ದಾನಿಗಳಾದ ಡಾ.ಶಿವಾನಂದ ಕುಬಸದ ಪ್ರಾಸ್ತಾವಿಕವಾಗಿ ಮಾತನಾಡಿದರು.
ದತ್ತಿದಾನಿಗಳಾದ ವೈದ್ಯ ಡಾ.ಅನೂಪ ಶಿ.ಕುಬಸದ ಹಾಗೂ ಕಮಲಾ ಶಿ. ಕುಬಸದ ದಂಪತಿ, ಹಳೆಯ ವಿದ್ಯಾರ್ಥಿಗಳು ಹಾಗೂ ಪಾಲಕರ ಸಂಘದ ವತಿಯಿಂದ ಡಾ.ಸಿ.ಆರ್.ಚಂದ್ರಶೇಖರ ಅವರನ್ನು ಸನ್ಮಾನಿಸಿ, ಗೌರವಿಸಲಾಯಿತು.ಹಳೆಯ ವಿದ್ಯಾರ್ಥಿಗಳ ಹಾಗೂ ಪಾಲಕರ ಸಂಘದ ಕಾಲೇಜು ಕಮಿಟಿ ಚೇರ್ಮನ್ ಪ್ರೊ.ವಿಶ್ವನಾಥ ಮುನವಳ್ಳಿ ಹಾಗೂ ಕಾರ್ಯದರ್ಶಿ ಡಾ.ಎಂ.ಎಚ್. ಜೋಗಿ ಅತಿಥಿಗಳನ್ನು ಪರಿಚಯಿಸಿದರು. ಐಕ್ಯೂಎಸಿ ಸಂಯೋಜಕಿ ಪ್ರೊ.ಎಸ್.ಎಸ್. ಬಿರಾದಾರ ಸ್ವಾಗತಿಸಿದರು. ಪ್ರೊ.ಆರ್.ಆರ್. ಮಾಲಿಪಾಟೀಲ ನಿರೂಪಿಸಿದರು. ಪ್ರೊ.ಪಿ.ಡಿ. ಕುಂಬಾರ ವಂದಿಸಿದರು. ವಿದ್ಯಾರ್ಥಿಗಳು ನಾಡಗೀತೆ ಹಾಡಿದರು.