ಕನ್ನಡಪ್ರಭ ವಾರ್ತೆ ಇಂಡಿ

ಮಕ್ಕಳಿಗೆ ಮೌಲ್ಯಯುತ ಶಿಕ್ಷಣ ನೀಡಿ ಅವರನ್ನು ಸಮಾಜಕ್ಕೆ ಕೊಡುಗೆಯಾಗಿ ನೀಡಿ ನಿವೃತ್ತಿಯಾಗುವ ಶಿಕ್ಷಕರು ತಮ್ಮ ನಿವೃತ್ತಿ ಜೀವನವನ್ನು ಸಮಾಜಮುಖಿ ಚಿಂತನೆಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ ಬದುಕು ಸಾರ್ಥಕ ಪಡಿಸಿಕೊಳ್ಳಬೇಕು ಎಂದು ಜೆಡಿಎಸ್ ತಾಲೂಕಾಧ್ಯಕ್ಷ ಬಿ.ಡಿ.ಪಾಟೀಲ ಹೇಳಿದರು.

ತಾಲೂಕಿನ ಹಿರೇಬೇವನೂರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡ ನಿವೃತ್ತ ಮುಖ್ಯ ಶಿಕ್ಷಕ ಎ.ಎಲ್.ಬೇವನೂರ ಸನ್ಮಾನ ಸಮಾರಂಭದಲ್ಲಿ ಮಾತನಾಡಿದರು. ಉತ್ತಮ ಸಮಾಜ ನಿರ್ಮಾಣದಲ್ಲಿ ಶಿಕ್ಷಕನ ಪಾತ್ರ ಅತ್ಯಂತ ಮಹತ್ವವಾದುದು. ಒಬ್ಬ ಶಿಕ್ಷಕ ತಮ್ಮ ಜವಾಬ್ದಾರಿಯನ್ನು ಅರಿತು ಕೆಲಸ ಮಾಡಿ ಮಕ್ಕಳ ಭವಿಷ್ಯ ರೂಪಿಸಿದರೆ ಉತ್ತಮ ಸಮಾಜ ನಿರ್ಮಾಣವಾಗುತ್ತದೆ. ಅದೆ, ಒಬ್ಬ ಶಿಕ್ಷಕ ತಮ್ಮ ಜವಾಬ್ದಾರಿಯನ್ನು ಮರೆತು ತಪ್ಪು ಮಾಡಿದರೆ ಮಕ್ಕಳು ತಪ್ಪುದಾರಿ ತುಳಿಯುತ್ತಾರೆ ಎಂಬುದಕ್ಕೆ ಅನೇಕ ಉದಾಹರಣೆಗಳಿವೆ. ನಿವೃತ್ತಿಯಾಗುತ್ತಿರುವ ಎ.ಎಲ್.ಬೇವನೂರ ರವರು ಅತ್ಯಂತ ಶಿಸ್ತಿನ ಶಿಕ್ಷಕರು. ಬೇವನೂರ ಸರ್ ಎಂದರೆ ಮಕ್ಕಳಿಗೆ ಅಚ್ಚುಮೆಚ್ಚು, ಅಲ್ಲದೆ ಸುತ್ತಮುತ್ತಲ ಗ್ರಾಮಗಳಲ್ಲು ಅತ್ಯಂತ ಪ್ರೀತಪಾತ್ರ ಶಿಕ್ಷಕರಾಗಿದ್ದರು ಎಂದು ಶ್ಲಾಘಿಸಿದರು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಶಿಕ್ಷಕ ಎ.ಎಲ್.ಬೇವನೂರ, ಮಕ್ಕಳೊಂದಿಗೆ ಕಳೆದ ದಿನಗಳು, ಅವರನ್ನು ಶೈಕ್ಷಣಿಕವಾಗಿ ಸಾಮಾಜಿಕವಾಗಿ ತಿದ್ದಿ ಬೆಳೆಸಿದ ಸಾರ್ಥಕ ಸೇವೆ ಸಲ್ಲಿಸಿದ ತೃಪ್ತಿ ನನಗಿದೆ ಎಂದು ಸೇವಾ ದಿನಗಳನ್ನು ಸ್ಮರಿಸಿಕೊಂಡರು.

ಶಿಕ್ಷಕರ ಸಂಘದ ಮಾಜಿ ಅಧ್ಯಕ್ಷ ವೈ.ಟಿ.ಪಾಟೀಲ ಮಾತನಾಡಿ, ಎ.ಲ್.ಬೇವನೂರ ಅವರ ಸಮಯಪಾಲನೆ, ಕರ್ತವ್ಯ ನಿಷ್ಟೆ, ಮಕ್ಕಳೊಂದಿಗೆ ಮಧುರ ಬಾಂಧವ್ಯ ಹೊಂದಿ ಜನಾನುರಾಗಿಯಾಗಿದ್ದರು. ಸ್ನೇಹಿತರೊಂದಿಗೆ ಸ್ನೇಹಜೀವಿಯಾಗಿ, ಆಪಾರ ಶಿಷ್ಯಕೋಟಿ ಹೊಂದಿದ್ದಾರೆ. ಇವರ ನಿವೃತ್ತಿ ಜೀವನ ಸುಖಕರವಾಗಿರಲಿ ಎಂದು ಆಶಿಸಿದರು.


ಹಿರೇಬೇವನೂರ ಶ್ರೀಮಠದ ವೇದಮೂರ್ತಿ ದಯಾನಂದ ಹಿರೇಮಠ, ಸಿಆರ್‌ಪಿ ರಮೇಶ ಬಗಲೂರ ಮಾತನಾಡಿದರು.ಈ ಸಂದರ್ಭದಲ್ಲಿ ಶಿಕ್ಷಕ ಬೇವನೂರ ದಂಪತಿಯನ್ನು ಸನ್ಮಾನಿಸಲಾಯಿತು. ನಿವೃತ್ತಿ ಶಿಕ್ಷಕಿ ಬಿ.ಎಸ್.ಬಾಸಗಿ (ಬಿರಾದಾರ), ಎಸ್‌ಡಿಎಂಸಿ ಅಧ್ಯಕ್ಷ ರಾಜು ಪಾತಾಳೆ, ಶಿಕ್ಷಕ ಸಂಘದ ಅಧ್ಯಕ್ಷ ಅಲ್ತಾಪ ಬೋರಾಮಣಿ, ಶಿಕ್ಷಕರಾದ ಜಯರಾಮ ಚವ್ಹಾಣ, ಸುರೇಶ ಚವ್ಹಾಣ, ಉಮೇಶ ಭಜಂತ್ರಿ, ಮುತ್ತು ತಡಲಗಿ, ಪಾರ್ತಿ ವಾಡಿ, ಎಸ್.ಆರ್.ನಾಟೀಕಾರ, ಜಿ.ಎಂ.ಕೊಲೂರ, ಪಿ.ಜಿ.ಕಲ್ಮನಿ, ಎಸ್.ಜಿ.ಹಿರೇಮಠ, ಎಂ.ಎ.ಭಾಸಗಿ, ವಿ.ಜಿ.ಕಲ್ಮನಿ, ಆರ್.ಎಂ.ಪಾಟೀಲ, ರವಿ ಆಳೂರ, ಸಿದ್ದು ಪರಗೊಂಡ, ಮಾಳ್ಳಪ್ಪ ಗುಡ್ಲ, ಯಶವಂತ ಕಡೆಗೊಳ, ದುಂಡು ಬಿರಾದಾರ ಸೇರಿದಂತೆ ಗ್ರಾಮಸ್ಥರು ಇದ್ದರು. ಶಿಕ್ಷಕ ಎ.ಕೌವಲಗಿ ಸ್ವಾಗತಿಸಿ, ವಂದಿಸಿದರು.