ಸಾರಾಂಶ
ಅರಸು ಮುಖ್ಯಮಂತ್ರಿಯಾಗಿದ್ದ ವೇಳೆ ಕೇಂದ್ರ ಸರ್ಕಾರದ 20 ಅಂಶಗಳ ಯೋಜನೆಯನ್ನು ಹಲವು ವಿರೋಧಗಳ ನಡುವೆ ಪ್ರಾಮಾಣಿಕವಾಗಿ ಜಾರಿಗೆ ತಂದ ಮಹಾನ್ ಚೇತನ, ಅಸ್ಪೃಶ್ಯತೆ, ಅಸಮಾನತೆ, ಹಾಗೂ ಅಪಮಾನಗಳಿಗೆ ಬಲಿಯಾದವರ ಬಗೆ ಅಪಾರ ಕಾಳಜಿ ಹೊಂದಿದ್ದ ಸಮಾಜ ಸುಧಾರಕರಾಗಿದ್ದರು.
ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ
ಸಮಾಜ ಸುಧಾರಣೆ ಹೊಸ ದಿಕ್ಕು ತೋರುವಂತೆ ಮಾಡಿದ ಕೀರ್ತಿ ಮಾಜಿ ಮುಖ್ಯಮಂತ್ರಿ ದಿ.ಡಿ.ದೇವರಾಜ ಅರಸು ಅವರಿಗೆ ಸಲ್ಲುತ್ತದೆ ಎಂದು ಶಾಸಕ ಹಾಗೂ ಚೆಸ್ಕ್ ಅಧ್ಯಕ್ಷ ರಮೇಶ ಬಂಡಿಸಿದ್ದೇಗೌಡ ಹೇಳಿದರು.ಪಟ್ಟಣದ ಮಿನಿ ವಿಧಾನಸೌಧದ ಕಚೇರಿ ಆವರಣದಲ್ಲಿ ತಾಲೂಕು ಆಡಳಿತದಿಂದ ಮಾಜಿ ಸಿಎಂ ದಿ.ದೇವರಾಜ ಅರಸು ಅವರ 109ನೇ ಜನ್ಮದಿನಾಚರಣೆಯಲ್ಲಿ ಅರಸು ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿ, ಭವಿಷ್ಯದ ಜನಾಂಗವನ್ನು ದೃಷ್ಟಿಯಲ್ಲಿಟ್ಟುಕೊಂಡು ವಿವಿಧ ಯೋಜನೆ ಜಾರಿಗೆ ತಂದ ಮಹಾನ್ ಚೇತನ, ಭೂ ಸುಧಾರಣೆ ಮೂಲಕ ಎಲ್ಲರಿಗೂ ಸಮಾನತೆ ಹಂಚಿಕೆಗೆ ಕಾರಣರಾಗಿದ್ದಾರೆ ಎಂದರು.
ಅರಸು ಮುಖ್ಯಮಂತ್ರಿಯಾಗಿದ್ದ ವೇಳೆ ಕೇಂದ್ರ ಸರ್ಕಾರದ 20 ಅಂಶಗಳ ಯೋಜನೆಯನ್ನು ಹಲವು ವಿರೋಧಗಳ ನಡುವೆ ಪ್ರಾಮಾಣಿಕವಾಗಿ ಜಾರಿಗೆ ತಂದ ಮಹಾನ್ ಚೇತನ, ಅಸ್ಪೃಶ್ಯತೆ, ಅಸಮಾನತೆ, ಹಾಗೂ ಅಪಮಾನಗಳಿಗೆ ಬಲಿಯಾದವರ ಬಗೆ ಅಪಾರ ಕಾಳಜಿ ಹೊಂದಿದ್ದ ಸಮಾಜ ಸುಧಾರಕರಾಗಿದ್ದರು ಎಂದರು.ತಹಸೀಲ್ದಾರ್ ಪರಶುರಾಮ್ ಸತ್ತಿಗೇರಿ ಮಾತನಾಡಿ, ಅಧಿಕಾರ, ಸಂಪತ್ತು ಮತ್ತು ಅವಕಾಶದ ಹೊರತಾಗಿ ಅಭಿವೃದ್ಧಿ ಕಾಣಲು ಸಾಧ್ಯವಿಲ್ಲ ಎಂದು ಬಲವಾಗಿ ನಂಬಿದ್ದವರು. ಎಲ್ಲಾ ಧರ್ಮ ಮತ್ತು ಸಮುದಾಯದ ನಾಯಕರನ್ನು ಗುರುತಿಸಿ ಅವಕಾಶಕೊಟ್ಟು ರಾಜಕೀಯವಾಗಿ ಬೆಳೆಸಿದ್ದರು ಎಂದರು.
ಈ ವೇಳೆ ತಾಪಂ ಇಒ ವೇಣು, ಬಿಇಒ ಆರ್.ಪಿ.ಮಹೇಶ್, ಹಿಂದುಳಿದ ವರ್ಗಗಳ ಕಲ್ಯಾಣ ಅಧಿಕಾರಿ ಪುಷ್ಪ, ಕನ್ನಡ ರಕ್ಷಣಾ ವೇದಿಕೆ ಅಧ್ಯಕ್ಷ ಚಂದಗಾಲು ಶಂಕರ್, ಸವಿತಾ ಸಮಾಜದ ಮುಖಂಡ ಮಂಜುನಾಥ್, ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕ ಕುಬೇರಪ್ಪ, ಮುಖಂಡರಾದ ಗಂಗಾಧರ್, ಬಿಸಿಎಂ ಸಿಬ್ಬಂದಿಗಳಾದ ಮಂಜುನಾಥ್, ಶಿವಕುಮಾರ್, ಅಶೋಕ್, ಲೋಕೇಶ್ ಸೇರಿದಂತೆ ವಿವಿಧ ಇಲಾಖೆಯ ತಾಲೂಕು ಮಟ್ಟದ ಅಧಿಕಾರಿಗಳು ಹಾಜರಿದ್ದರು.