ಕನ್ನಡಪ್ರಭ ವಾರ್ತೆ ಕಮತಗಿ

ಮಹಿಳೆಯರಿಗೆ ಉಡಿ ತುಂಬುವ ಸಂಪ್ರದಾಯ ಭಾರತೀಯ ಸಂಸ್ಕತಿಯ ಪ್ರತೀಕವಾಗಿದ್ದು, ಈ ಸಂಪ್ರದಾಯ ಉತ್ತರ ಕರ್ನಾಟಕದ ಮಠಮಾನ್ಯಗಳಲ್ಲಿ ಮತ್ತು ದೇವಸ್ಥಾನಗಳಲ್ಲಿ ಆಯೋಜಿಸಲಾಗುವ ಪ್ರಮುಖ ಧಾರ್ಮಿಕ ಆಚರಣೆಯಾಗಿದೆ ಎಂದು ಅಮೀನಗಡ ಪ್ರಭುಶಂಕರೇಶ್ವರ ಮಠದ ಶಂಕರರಾಜೇಂದ್ರ ಸ್ವಾಮೀಜಿ ಹೇಳಿದರು.

ಪಟ್ಟಣದಲ್ಲಿನ ಹುಚ್ಚೇಶ್ವರ ರಥಬೀದಿ ಆವರಣದಲ್ಲಿ ಹೊಳೆ ಹುಚ್ಚೇಶ್ವರ ಜಾತ್ರಾ ಮಹೋತ್ಸವ ಹಾಗೂ ಕಮತಪುರ ಉತ್ಸವ ನಿಮಿತ್ತ ಭಾನುವಾರ ಹಮ್ಮಿಕೊಂಡಿದ್ದ ಮಹಿಳಾ ಉತ್ಸವ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು.

ಮಹಿಳೆಯರಿಗೆ ಉಡಿ ತುಂಬುವ ಸಂಪ್ರದಾಯ ಹಿಂದೂ ಸಂಸ್ಕೃತಿಯಲ್ಲಿ ಸಮೃದ್ಧಿ, ಸೌಭಾಗ್ಯ ಮತ್ತು ದೇವಿಯ ಆಶೀರ್ವಾದ ಕೋರುವ ಸಾಂಪ್ರದಾಯಿಕ ಆಚರಣೆಯಾಗಿದ್ದು, ಇಂತಹ ಸಂಪ್ರದಾಯವನ್ನು ಹೊಳೆ ಹುಚ್ಚೇಶ್ವರ ಜಾತ್ರಾಮಹೋತ್ಸವ ಸಂದರ್ಭದಲ್ಲಿ ಪ್ರತಿ ವರ್ಷ ಸಾವಿರಾರು ಮಹಿಳೆಯರಿಗೆ ಉಡಿ ತುಂಬುವ ಕಾರ್ಯ ಮಾಡುವುತ್ತಿರುವುದು ಶ್ಲಾಘನೀಯ ಎಂದು ಹೇಳಿದರು.

ಕಮತಗಿ ಹೊಳೆ ಹುಚ್ಚೇಶ್ವರ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಮಾತನಾಡಿ, ಕಮತಪುರ ನಾಡಿನ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಜನರ ಸಹಕಾರದೊಂದಿಗೆ ಪ್ರತಿ ವರ್ಷ ಜಾತ್ರಾಮಹೋತ್ಸವ ಹಾಗೂ ಕಮತಪುರ ಉತ್ಸವ ಆಚರಣೆ ಮಾಡುವ ಮೂಲಕ ನಾಡಿನಲ್ಲಿ ಪ್ರಸಿದ್ಧಿಗೊಳಿಸಿರುವ ಕೀರ್ತಿ ಭಕ್ತ ಸಮೂಹಕ್ಕೆ ಸಲ್ಲುತ್ತದೆ ಎಂದರು.ಕಮತಪುರ ಉತ್ಸವಕ್ಕೆ ತೆರೆ


ಪಟ್ಟಣದ ಹೊಳೆ ಹುಚ್ಚೇಶ್ವರ ಜಾತ್ರಾಮಹೋತ್ಸವ ನಿಮಿತ್ತ ಎರಡು ದಿನಗಳಿಂದ ನಡೆದ ಕಮತಪುರ ಉತ್ಸವ 2026ದಲ್ಲಿ ಜಾನಪದ ಕಲಾ ಉತ್ಸವ ಪ್ರಕಾಶ ಚಂದ್ರಣ್ಣವರ ಕಲಾ ತಂಡ, ವಿಜಯಸಿಂಗ್‌ ಶೆಟ್ಟಿ ಡಿಕೆಡಿ ಸೀಸನ್-5 ವಿಜಯ ಡಾನ್ಸ್, ಸರಿಗಮಪ ಎಂಟರ್ಟೈನ್ಮೆಂಟ್ ತಂಡದಿಂದ ಸಂಗೀತ ಹಾಗೂ ಹಾಸ್ಯ ಕಾರ್ಯಕ್ರಮ ನಡೆದವು.

ಹುನಗುಂದ ಗಚ್ಚಿನಮಠ ಅಮರೇಶ್ವರ ದೇವರು, ಮಾತೋಶ್ರೀ ಬಸವಣ್ಣೆಮ್ಮತಾಯಿ ಬಸರಕೋಡ ಸೇರಿದಂತೆ ಪಟ್ಟಣದ ಗಣ್ಯರು, ಗುರು ಹಿರಿಯರು, ಯುವಕರು, ಮಹಿಳೆಯರು ಹಾಗೂ ಸುತ್ತಮುತ್ತಲಿನ ಗ್ರಾಮಗಳ ಜನರು ಇದ್ದರು.

ಸನ್ಮಾನ : ಸೇನೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ಯೋಧ ಲಕ್ಷ್ಮಣ ಪೂಜಾರಿ ಅವರಿಗೆ ಹೊಳೆ ಹುಚ್ಚೇಶ್ವರ ಸಂಸ್ಥಾನ ಮಠದ ವತಿಯಿಂದ ಹುಚ್ಚೇಶ್ವರ ಶ್ರೀಗಳು ಸನ್ಮಾನಿಸಿ ಗೌರವಿಸಿದರು.