ಕನ್ನಡಪ್ರಭ ವಾರ್ತೆ ಬೇಲೂರು

ತಾಲೂಕಿನ ಬಿಕ್ಕೋಡು ಹೋಬಳಿಯ ಚಳ್ಳೇನಹಳ್ಳಿ ಗ್ರಾಮದ ಐತಿಹಾಸಿಕ ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾದ ಶ್ರೀಗುರು ಶನೇಶ್ವರ ಸ್ವಾಮಿ ದೇಗುಲದಲ್ಲಿ ಶ್ರೀಯವರ 31ನೇ ವರ್ಷದ ಕೆಂಡೋತ್ಸವ, ಅಡ್ಡ ಪಲ್ಲಕ್ಕಿ ಉತ್ಸವ ಹಾಗೂ ಶ್ರೀಯವರ ದಿವ್ಯರಥೋತ್ಸವ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಸಂಪನ್ನಗೊಂಡಿತು.

ದೇಗುಲದ ಪ್ರಧಾನ ಅರ್ಚಕ ಸಂದೀಪ್ ಸ್ವಾಮಿ ಅವರ ನೇತೃತ್ವದಲ್ಲಿ ವಿರಕ್ತ ಮಠದ ಬಳಿಯಿಂದ ಹುಸ್ಕೂರು ಚಿಕ್ಕ ಬಿಕ್ಕೋಡು ಹಾಗೂ ಕೆಳ ಬಿಕ್ಕೋಡು ಗ್ರಾಮಸ್ಥರು ಕಾಕಾ ವಾಹನನ ಅಡ್ಡ ಪಲ್ಲಕ್ಕಿ ಹೊತ್ತು ತಂದ ನಂತರ ಸ್ವಾಮಿಯವರ ಕೆಂಡೋತ್ಸವ ಜರುಗಿತು. ಪ್ರತಿವರ್ಷದಂತೆ ಬಕ್ರವಳ್ಳಿ ಕುಮಾರಯ್ಯ ಶಾಸ್ತ್ರಿಗಳ ಮಾರ್ಗದರ್ಶನದಲ್ಲಿ ದೇಗುಲದಲ್ಲಿ ವಿವಿಧ ರೀತಿಯ ಪೂಜಾ ಕೈಂಕರ್ಯ ನಡೆದವು. ಮಧ್ಯಾಹ್ನ ಮಧಘಟ್ಟ ವೃತ್ತದಿಂದ ಶ್ರೀಯವರ ದಿವ್ಯ ರಥೋತ್ಸವ ಆರಂಭಗೊಂಡಿತು. ಸಾವಿರಾರು ಭಕ್ತಾದಿಗಳು ರಥವನ್ನು ಎಳೆದು ತಮ್ಮ ಭಕ್ತಿ ಭಾವವನ್ನು ಸಮರ್ಪಿಸಿದರು. ಕಾರ್ಯಕ್ರಮದ ಅಂಗವಾಗಿ ಕೃಷ್ಣಾಪುರ ಗ್ರಾಮಸ್ಥರು ಏರ್ಪಡಿಸಿದ್ದ ರಾಜಾ ಸತ್ಯವೃತ ಅಥವಾ ಶನಿ ಪ್ರಭಾವ ಪೌರಾಣಿಕ ನಾಟಕ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಶಾಸಕ ಎಚ್ ಕೆ ಸುರೇಶ್‌, ಭಕ್ತಿ ಇದ್ದಲ್ಲಿ ಮಾತ್ರ ನಾವು ಭಗವಂತನನ್ನು ಕಾಣಲು ಸಾಧ್ಯವಾಗಿದೆ. ಈ ಶನೇಶ್ವರ ದೇಗುಲವು ಹಲವು ವರ್ಷಗಳಿಂದ ಈ ಭಾಗದ ಭಕ್ತರಲ್ಲಿ ಧಾರ್ಮಿಕ ಭಾವನೆ ಮೂಡಿಸುವುದಲ್ಲದೆ ಜನರ ಇಷ್ಟಾರ್ಥವನ್ನು ನೆರವೇರಿಸುವ ಶಕ್ತಿ ಕೇಂದ್ರವಾಗಿದ್ದು, ಕ್ಷೇತ್ರದ ಅಭಿವೃದ್ಧಿ ಕಾಮಗಾರಿಗಳಿಗೆ ಹಂತಹಂತವಾಗಿ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು. ಪೌರಾಣಿಕ ನಾಟಕಗಳು ಇಂದಿನಿಂದಲೂ ಗ್ರಾಮೀಣ ಭಾಗದ ಜನರ ಜೀವನಾಡಿಯಾಗಿದ್ದು ಜಾನಪದ ಸಂಸ್ಕೃತಿ ಮಾಯವಾಗುತ್ತಿರುವ ಸಂದರ್ಭದಲ್ಲಿ ನಾಟಕ ಸಂಸ್ಕೃತಿ ಉಳಿವಿಗಾಗಿ ಬಣ್ಣ ಹಚ್ಚುವವನೆ ನಿಜವಾದ ಕಲಾವಿದರಾಗಿದ್ದು ಅಂತವರಿಗೆ ಪ್ರೋತ್ಸಾಹ ನೀಡಬೇಕು ಎಂದರು.ಈ ಸಂದರ್ಭದಲ್ಲಿ ದೇಗುಲ ಸಮಿತಿ ಅಧ್ಯಕ್ಷ ಅಪ್ಪಣ್ಣ, ಪುರಸಭೆ ಮಾಜಿ ಅಧ್ಯಕ್ಷ ಸಿ ಎನ್ ದಾನಿ ಬಿಜೆಪಿ ತಾಲೂಕು ಅಧ್ಯಕ್ಷ ಸಂಜು ಕೌರಿ. ಬಿಕ್ಕೋಡುಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಭರತ್ ಮುಖಂಡರಾದ ಬಸವರಾಜು ನಟರಾಜು ಹರೀಶ್ ಮೇಕೆದಾಟು ಹೂವೇಶ್, ಮಲ್ಲೇಶ್, ಎಚ್ ಡಿ ರಾಜು, ಈರಪ್ಪ, ಕಾಳರಾಜು, ಸುರೇಶ್, ತೆಂಡೇಕೆರೆ ರಮೇಶ್ ಕುಮಾರ್, ಕೌರಿ ಉಮೇಶ್ ಇತರರು ಹಾಜರಿದ್ದರು.