ಸಾರಾಂಶ
ಕನ್ನಡ ಸಾಂಸ್ಕೃತಿಕ ಸಂಸ್ಥೆಯಿಂದ ಕುವೆಂಪುರವರ ೧೨೦ನೇ ಜನ್ಮದಿನಾಚರಣೆ
ಕನ್ನಡಪ್ರಭ ವಾರ್ತೆ ಚಳ್ಳಕೆರೆಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಎಂದೂಮರೆಯಲಾಗದ ಅಮೋಘ ಸಾಹಿತ್ಯ ಸೇವೆಯನ್ನು ನೀಡಿದ ರಾಷ್ಟ್ರಕವಿ ಕುಪ್ಪಳ್ಳಿ ವೆಂಕಪ್ಪ ಪುಟ್ಟಪ್ಪನವರ ೧೨೦ನೇ ಜನ್ಮದಿನದಂದು ನಾವೆಲ್ಲರೂ ಸಾಹಿತ್ಯ ಕ್ಷೇತ್ರವನ್ನು ಮತ್ತಷ್ಟು ಗಟ್ಟಿಯಾಗಿ ಉಳಿಸಿ, ಬೆಳೆಸುವ ಸಂಕಲ್ಪ ಮಾಡೋಣವೆಂದು ನಿವೃತ್ತ ಕೆಎಎಸ್ ಅಧಿಕಾರಿ ಎನ್.ರಘುಮೂರ್ತಿ ಕರೆ ನೀಡಿದರು.
ಭಾನುವಾರ ರೋಟರಿ ಬಾಲಭವನದಲ್ಲಿ ಕರ್ಲಕುಂಟೆ ಕನ್ನಡ ಸಾಂಸ್ಕೃತಿಕ ಸಂಸ್ಥೆ ಹಮ್ಮಿಕೊಂಡಿದ್ದ ಕುವೆಂಪುರವರ ೧೨೦ನೇ ಜನ್ಮದಿನಾಚರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.ಚಳ್ಳಕೆರೆ ತಾಲೂಕಿನ ವಿಶೇಷವೆಂದರೆ ಕುವೆಂಪುರವರ ಸಾಹಿತ್ಯದ ಕೊಡುಗೆಯಲ್ಲಿ ಅವರ ಗುರು ತಳುಕಿನ ವೆಂಕಣಯ್ಯನವರ ಸಾಹಿತ್ಯ ಸೇವೆಯೂ ಅಪಾರವಾಗಿದೆ. ಇಂತಹ ಸಾಹಿತ್ಯದ ಇತಿಹಾಸವನ್ನು ಹೊಂದಿರುವ ತಾಲೂಕಿನಲ್ಲಿ ಕನ್ನಡ ಸಾಹಿತ್ಯವನ್ನು ಮತ್ತಷ್ಟು ಎತ್ತರಕ್ಕೆ ಬೆಳೆಸುವ ಜವಾಬ್ದಾರಿ ಎಲ್ಲರ ಮೇಲಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪತ್ರಕರ್ತ ಕರ್ಲಕುಂಟೆ ತಿಪ್ಪೇಸ್ವಾಮಿ ಮಾತನಾಡಿ, ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಎಂದೂ ಅಚ್ಚಳಿಯದ ಹೆಸರು ಕುವೆಂಪುರವರದ್ದು. ಇಂದಿಗೂ ಸಹ ಕುವೆಂಪು ಸಾಹಿತ್ಯ ಕೃಷಿಯ ಬಗ್ಗೆ ಜನರಲ್ಲಿ ಅಪಾರವಾದ ಮೆಚ್ಚುಗೆ ಇದೆ. ಕನ್ನಡ ಸಾಹಿತ್ಯ ಕ್ಷೇತ್ರ ಇರುವವರೆಗೂ ಕುವೆಂಪು ಹೆಸರು ಅಜರಾಮರವಾಗಿರುತ್ತದೆ ಎಂದರು.ಬುದ್ಧ ವೇದಿಕೆ ಅಧ್ಯಕ್ಷ ಮೈತ್ರಿದ್ಯಾಮಣ್ಣ, ಕೆಪಿಸಿಸಿ ಕರಕುಶಲ ಪರಿಷತ್ ಅಧ್ಯಕ್ಷ ಆರ್.ಪ್ರಸನ್ನಕುಮಾರ್, ಭಿ.ಫರೀದ್ಖಾನ್, ಪಗಡಲಬಂಡೆನಾಗೇಂದ್ರಪ್ಪ, ಒನಕೆ ಓಬವ್ವ ವೇದಿಕೆ ಅಧ್ಯಕ್ಷ ಮಾರುತಿ, ಕವಿಯತ್ರಿ ಶಬ್ರಿನಮಹಮ್ಮದ್ ಆಲಿ, ಎಚ್.ಲಂಕಪ್ಪ, ಬನಶ್ರೀ ಮಂಜುಳಮ್ಮ, ದುಗ್ಗಾವರ ತಿಪ್ಪೇಸ್ವಾಮಿ, ರವಿವರ್ಮ ಮುಂತಾದವರು ಉಪಸ್ಥಿತರಿದ್ದರು.