ಸಾರಾಂಶ
ಅಲಗೇರಿ ಕ್ರಾಸ್ ಬಳಿ ಡಿವೈಡರ್ ಹಾಗೂ ಜಿಲ್ಲೆಯಲ್ಲಿ ಸುಸಜ್ಜಿತ ಆಸ್ಪತ್ರೆ ಮತ್ತು ಪ್ರಸೂತಿ ತಜ್ಞೆಯನ್ನು ಕೂಡಲೇ ನೇಮಿಸುವಂತೆ ಒತ್ತಾಯಿಸಿ ಅಲಗೇರಿಯ ನಾಗರಿಕರು ಮಂಗಳವಾರ ಅರೆಬೆತ್ತಲೆ ಮೆರವಣಿಗೆ ನಡೆಸಿದರು.
ಅಂಕೋಲಾ: ಅಲಗೇರಿ ಕ್ರಾಸ್ ಬಳಿ ಡಿವೈಡರ್ ಹಾಗೂ ಜಿಲ್ಲೆಯಲ್ಲಿ ಸುಸಜ್ಜಿತ ಆಸ್ಪತ್ರೆ ಮತ್ತು ಪ್ರಸೂತಿ ತಜ್ಞೆಯನ್ನು ಕೂಡಲೇ ನೇಮಿಸುವಂತೆ ಒತ್ತಾಯಿಸಿ ಅಲಗೇರಿಯ ನಾಗರಿಕರು ಮಂಗಳವಾರ ಅರೆಬೆತ್ತಲೆ ಮೆರವಣಿಗೆ ನಡೆಸಿದರು.
ಚತುಷ್ಪಥ ಹೆದ್ದಾರಿ (೬೬) ಕ್ಕೆ ಹೊಂದಿಕೊಂಡಿರುವ ಅಲಗೇರಿಗೆ ತೆರಳುವ ಮಾರ್ಗಕ್ಕೆ ಡಿವೈಡರ್ ನಿರ್ಮಿಸಿಕೊಡುವಂತೆ ೪ ವರ್ಷಗಳಿಂದ ಮನವಿ ಮಾಡಿದರೂ ಸ್ಪಂದಿಸಿಲ್ಲ. ಜಿಲ್ಲೆಯಲ್ಲಿ ಒಂದು ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ಇಲ್ಲದೆ ಮಣಿಪಾಲ್, ಮಂಗಳೂರು, ಗೋವಾ, ಹುಬ್ಬಳ್ಳಿಗೆ ರೋಗಿಗಳು ತೆರಳುವವರೆಗೆ ಸಾವಿನ ಕದ ಬಡಿಯುವ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ಈ ಕಾರಣಕ್ಕಾಗಿ ಅರೆಬೆತ್ತಲೆ ಮೆರವಣಿಗೆ ಮತ್ತು ಮನವಿ ಅರ್ಪಿಸಿ ಸರ್ಕಾರಕ್ಕೆ ಬಿಸಿ ಮುಟ್ಟಿಸುತ್ತಿದ್ದೇವೆ ಎಂದು ಪ್ರತಿಭಟನಾಕಾರರು ಹೇಳಿದರು.
ತಾಲೂಕಾಸ್ಪತ್ರೆಯಲ್ಲಿ ಪ್ರಸೂತಿ ತಜ್ಞರಿಲ್ಲದೇ ಮಹಿಳೆಯರು ಸಂಕಷ್ಟ ಅನುಭವಿಸುವಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ ಪ್ರತಿಭಟನಾಕಾರರು, ಕೇಂದ್ರ ಹಾಗೂ ರಾಜ್ಯ ಸರ್ಕಾರ ಆಸ್ಪತ್ರೆಗೆ ಎಲ್ಲ ಸೌಕರ್ಯ ಒದಗಿಸಿಕೊಡಬೇಕು. ತಪ್ಪಿದರೆ ತಾಲೂಕಿನ ಜನರು ಒಟ್ಟಾಗಿ ಸೇರಿ ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಅಲಗೇರಿ, ಕಂತ್ರಿ, ಬೆರಡೆ ಸೇರಿದಂತೆ ಇತರೇ ಗ್ರಾಮಗಳಿಂದ ಪ್ರತಿಭಟನಾಕಾರರು ಆಗಮಿಸಿದ್ದರು. ಪಟ್ಟಣದ ಶಾಂತಾದುರ್ಗಾ ದೇಗುಲದಲ್ಲಿ ಸೇರಿ ತಹಸೀಲ್ದಾರ್ ಕಾರ್ಯಾಲಯಕ್ಕೆ ಬಂದು ಸರ್ಕಾರದ ಅವ್ಯವಸ್ಥೆ ಮತ್ತು ಉತ್ತರ ಕನ್ನಡ ಜಿಲ್ಲೆಯ ಕಡೆಗಣನೆ ಕುರಿತಾಗಿ ಹಾಡು ರಚಿಸಿ ವೈಫಲ್ಯದ ಕುರಿತಾಗಿ ಖಂಡಿಸಿದರು.
ಜಾನಪದ ಕಲಾವಿದ ಶಂಕರ ಗೌಡ ಅಗಸೂರು, ವಿನೋದ ಗಾಂವಕರ, ವಿಕ್ರಮ ಪಂಥ, ಅಲಗೇರಿ ಗ್ರಾಪಂ ಅಧ್ಯಕ್ಷ ಸಂತೋಷ ನಾಯ್ಕ, ಜೀವಿತಾ ಗಾಂವಕರ, ಜಿ.ಟಿ. ನಾಯ್ಕ, ಶ್ರೀಕಾಂತ ನಾಯ್ಕ, ಗೌರೀಶ ನಾಯ್ಕ, ಪ್ರಿತೇಶ ನಾಯ್ಕ, ದಿನಕರ ನಾಯ್ಕ, ಅಭಿಷೇಕ ಗುನಗಾ, ಸಚಿನ ಸ್ವಾಮಿ ಉಪಸ್ಥಿತರಿದ್ದರು.
ಮಂತ್ರಿ ಮಹೋದಯರೇ ಕೇವಲ ಖುರ್ಚಿಯ ಮೇಲೆ ಕುಳಿತುಕೊಳ್ಳಬೇಡಿ. ಜಿಲ್ಲೆಯ ಜನರ ಪರಿಸ್ಥಿತಿ ಅರ್ಥೈಸಿಕೊಳ್ಳಿ. ಉತ್ತರ ಕನ್ನಡ ಜಿಲ್ಲೆಗೆ ಕೇಂದ್ರ ಮತ್ತು ರಾಜ್ಯ ಸರ್ಕಾರ ಮಲತಾಯಿ ಧೋರಣೆ ಅನುಸರಿಸಿ ಇಲ್ಲಿಯ ಜನರ ಜೀವದ ಜತೆ ಚೆಲ್ಲಾಟವಾಡುತ್ತಿವೆ ಎಂದು ಹಾಡಿನ ಮೂಲಕ ಅಲಗೇರಿಯ ನಾಗರಿಕರು ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಶಿವಾನಂದ ನಾಯ್ಕ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ ತಹಸೀಲ್ದಾರ್ಗೆ ಮನವಿ ಸಲ್ಲಿಸಿದರು.
ಅವರ್ಸಾದಿಂದ ಬಾಳೆಗುಳಿ ವರೆಗೆ ಸಂಚರಿಸುವಾಗ ಹಲವು ಅಪಘಾತಗಳು ನಡೆದ ಜೀವಹಾನಿಯಾಗಿದೆ. ಸಮರ್ಪಕ ರಸ್ತೆ ಮತ್ತು ಅಲಗೇರಿಗೆ ತೆರಳುವಲ್ಲಿ ಡಿವೈಡರ್ ನಿರ್ಮಿಸುವಂತೆ ೪ ವರ್ಷಗಳಿಂದ ಐಆರ್ಬಿ ಕಂಪನಿಗೆ ಮನವಿ ಮಾಡಿದರೂ ಜನರ ಜೀವದ ಜತೆ ಚೆಲ್ಲಾಟವಾಡುತ್ತಿವೆ. ಇದೇ ಪರಿಸ್ಥಿತಿ ಮುಂದುವರಿದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ಶಿವಾನಂದ ನಾಯ್ಕ ಹೇಳಿದ್ದಾರೆ.