ಸಾರಾಂಶ
ಚಿತ್ರದುರ್ಗ: ದುಶ್ಚಟಗಳಿಂದ ದೂರವಿದ್ದಾಗ ನಾವು ಉತ್ತಮ ಅರೋಗ್ಯ ಜೀವನ ನಡೆಸಲು ಸಾಧ್ಯವಾಗುತ್ತದೆ ಎಂದು ಸಮಾಜ ವಿಜ್ಞಾನ ವಿಷಯ ಪರಿವೀಕ್ಷಕ ಕೆ.ಜಿ.ಪ್ರಶಾಂತ್ ಹೇಳಿದರು.
ತಾಲೂಕಿನ ಐನಹಳ್ಳಿ ಕುರುಬರಹಟ್ಟಿ ಸರ್ಕಾರಿ ಪ್ರೌಢಶಾಲೆಯಲ್ಲಿ ಡಯಟ್ ವತಿಯಿಂದ ಎನ್ ಪಿಇಪಿ(ರಾಷ್ಟಿೀಯ ಜನಸಂಖ್ಯಾ ಶಿಕ್ಷಣ ಯೋಜನೆ)ಅಡಿಯಲ್ಲಿ ಆಯೋಜಿಸಿದ್ದ ವಿಶ್ವ ಮಾದಕ ವಸ್ತುಗಳ ಬಳಕೆ ವಿರೋಧಿ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. ದುಶ್ಚಟಗಳಿಂದ ದೂರವಿದ್ದಾಗ ಸಮಾಜದಲ್ಲಿ ಗೌರವ ದೊರೆಯುತ್ತದೆ. ನಾವು ಉತ್ತಮ ಹವ್ಯಾಸಗಳನ್ನು ಬೆಳೆಸಿಕೊಳ್ಳುವುದರ ಮೂಲಕ ಉತ್ತಮ ಜೀವನ ನಡೆಸಬೇಕು ಎಂದು ತಿಳಿಸಿದರು.
ಎನ್ಪಿಇಪಿ ಜಿಲ್ಲಾ ನೋಡಲ್ ಅಧಿಕಾರಿ ಎಸ್.ಬಸವರಾಜು ಮಾತನಾಡಿ, ಸ್ವಾಸ್ಥ್ಯ ಸಮಾಜ ನಿರ್ಮಾಣದಲ್ಲಿ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸುವುದು ಅಗತ್ಯ. ಒಮ್ಮೆ ಮಾದಕ ವಸ್ತುಗಳಿಗೆ ದಾಸರಾದರೆ ಅದರಿಂದ ಹೊರಬರುವುದು ಕಷ್ಟವಾಗುತ್ತದೆ. ಇದರಿಂದ ನಮ್ಮ ವೈಯಕ್ತಿಕ ಆರೋಗ್ಯಕ್ಕೆ ಹಾನಿಯಾಗುವುದರ ಜತೆಗೆ ಕುಟುಂಬದ ನೆಮ್ಮದಿ ಹಾಳಾಗುತ್ತದೆ. ಮಾದಕವಸ್ತುಗಳಿಗೆ ಕಡಿವಾಣದಿಂದ ನೆಮ್ಮದಿಯಿಂದ ಸುಖ ಜೀವನ ನಡೆಸಲು ಅನುಕೂಲವಾಗುತ್ತದೆ ಎಂದರು.
ಆಂಗ್ಲಭಾಷೆ ವಿಷಯ ಪರಿವೀಕ್ಷಕ ಎಚ್.ಟಿ ಚಂದ್ರಣ್ಣ ಮಾತನಾಡಿ, ವಿದ್ಯಾರ್ಥಿ ಜೀವನದಲ್ಲಿ ಉತ್ತಮ ಹವ್ಯಾಸಗಳನ್ನು ಬೆಳೆಸಿಕೊಳ್ಳಬೇಕು. ಶಿಕ್ಷಕರು ಶಾಲೆಗಳಲ್ಲಿ ಸಾಹಿತ್ಯ, ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳನ್ನು ತೊಡಗಿಸಿಸುವುದರ ಮೂಲಕ ಮಾನವೀಯ ಮೌಲ್ಯಗಳನ್ನು ಬೆಳೆಸಬೇಕು ಎಂದರು.
ಮುಖ್ಯ ಶಿಕ್ಷಕ ಎಚ್.ಎನ್ ಮಂಜಪ್ಪ, ಚಾಪೆ ರೇವಣ್ಣ, ಟಿ.ಎಂ.ಸುಜಾತ, ಮಂಜುಳ ಕಿಲ್ಲೇದಾರ್, ಎಸ್.ಎಸ್.ರೇಖಾ, ಎಂ.ಎಚ್ ಮಂಜುಳ, ವೈ.ಪಾರ್ವತಮ್ಮ, ಆರ್.ಟಿ.ತ್ರಿವೇಣಿ, ಎಂ.ಜೆ.ಕೋಕಿಲಾ, ದ್ವಿದ ಸಹಾಯಕ ಮಲ್ಲಿಕಾರ್ಜುನ ಮತ್ತಿತರರು ಇದ್ದರು.