ಸಾರಾಂಶ
ಕನ್ನಡಪ್ರಭ ವಾರ್ತೆ ತಿಕೋಟಾ ಆರೋಗ್ಯವಂತ ದೇಹದಲ್ಲಿ ಮಾತ್ರ ಆರೋಗ್ಯವಂತ ಮನಸ್ಸಿರುತ್ತದೆ. ಯೋಗ ಮಾಡಿ, ಆರೋಗ್ಯಯುತ ಜೀವನ ನಡೆಸುವಂತೆ ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಬಸವಂತರಾಯಗೌಡ ಬಿರಾದಾರ ಹೇಳಿದರು.
ಕನ್ನಡಪ್ರಭ ವಾರ್ತೆ ತಿಕೋಟಾ
ಆರೋಗ್ಯವಂತ ದೇಹದಲ್ಲಿ ಮಾತ್ರ ಆರೋಗ್ಯವಂತ ಮನಸ್ಸಿರುತ್ತದೆ. ಯೋಗ ಮಾಡಿ, ಆರೋಗ್ಯಯುತ ಜೀವನ ನಡೆಸುವಂತೆ ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಬಸವಂತರಾಯಗೌಡ ಬಿರಾದಾರ ಹೇಳಿದರು.ತಿಕೋಟಾ ತಾಲೂಕಿನ ಸಿದ್ದಾಪೂರ.ಕೆ ಗ್ರಾಮ ಪಂಚಾಯತಿಯ ಧನ್ನರ್ಗಿ ಗ್ರಾಮದಲ್ಲಿ ಅಮೃತ ಸರೋವರದ ಆವರಣದಲ್ಲಿ ತಾಲೂಕು ಪಂಚಾಯತಿ ಹಾಗೂ ಗ್ರಾಮ ಪಂಚಾಯತಿ ಸಹಯೋಗದಲ್ಲಿ ಯೋಗ ದಿನಾಚರಣೆ ಆಚರಿಸಲಾಯಿತು. ಈ ವೇಳೆ ಮಾತನಾಡಿದ ಅವರು, ಯೋಗದ ಮಹತ್ವವನ್ನು ಜನರಿಗೆ ತಲುಪಿಸುವುದು ಈ ದಿನಾಚರಣೆಯ ಮುಖ್ಯ ಉದ್ದೇಶ. ಜೊತೆಗೆ ಉತ್ತಮ ದೈಹಿಕ, ಮಾನಸಿಕ ಆರೋಗ್ಯಕ್ಕಾಗಿ ನಾವೆಲ್ಲರೂ ಪ್ರತಿದಿನ ಯೋಗಾಭ್ಯಾಸ ಮಾಡುವ ಪ್ರತಿಜ್ಞೆ ಮಾಡೋಣ ಎಂದು ಹೇಳಿದರು.
ಪಿಡಿಒ ಪದ್ಮಿನಿ ಬಿರಾದಾರ ಮಾತನಾಡಿ, ಯೋಗವು ವಿಶ್ವಕ್ಕೆ ಭಾರತ ಕೊಟ್ಟ ಅತ್ಯದ್ಭುತವಾದ ಕಲೆಯಾಗಿದೆ. ಇದು ಜೀವನವನ್ನು ಉನ್ನತ ಮಟ್ಟಕ್ಕೆ ತೆಗೆದುಕೊಂಡು ಹೋಗುವ ಮಾರ್ಗವಾಗಿದೆ. ನಮ್ಮನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಲು ಯೋಗವು ಅತ್ಯಂತ ಸಹಕಾರಿಯಾಗಿದೆ. ನಮ್ಮ ಸರೋವರದ ಆವರಣವು ಯೋಗ, ವ್ಯಾಯಾಮಕ್ಕೆ ಸೂಕ್ತ ಸ್ಥಳವಾಗಿದ್ದು ಗ್ರಾಮಸ್ಥರು ಇದರ ಲಾಭ ಪಡೆಯಬೇಕು ಎಂದರು.ದೈಹಿಕ ಶಿಕ್ಷಕ ಬಿ.ಎನ್.ಹಿರೇಮಠ ಮಾತನಾಡಿ, ಯೋಗದಿಂದ ದೈಹಿಕ, ಮಾನಸಿಕ ಸದೃಢತೆಯನ್ನು ಸಾಧಿಸಿ ಸುಂದರ ಹಾಗೂ ಸರಳ ಬದುಕನ್ನು ಕಟ್ಟಿಕೊಳ್ಳಬಹುದಾಗಿದೆ. ಎಲ್ಲರೂ ತಮ್ಮ ದೈನಂದಿನ ಬದುಕಿನಲ್ಲಿ ಯೋಗ ಅಭ್ಯಾಸವನ್ನು ಅಳವಡಿಸಿಕೊಳ್ಳಬೇಕೆಂದು ಕರೆ ನೀಡಿದರು. ನಾವು ಆಹಾರವನ್ನು ಔಷಧದಂತೆ ಸೇವಿಸುವುದರ ಬದಲು ಔಷಧವನ್ನೆ ಆಹಾರವನ್ನಾಗಿ ಸ್ವೀಕರಿಸುತ್ತಿದ್ದೇವೆ. ಇದನ್ನು ಹೋಗಲಾಡಿಸುವ ಏಕೈಕ ಮಾರ್ಗ ಎಂದರೆ ಅದು ಯೋಗ ಎಂದು ವಿವರಿಸಿದರು.ಈ ಸಂದರ್ಭದಲ್ಲಿ ತಾಲೂಕು ಐಇಸಿ ಸಂಯೋಜಕ ಕಲ್ಲಪ್ಪ ನಂದರಗಿ, ಗ್ರಾಮ ಪಂಚಾಯತಿ ಸದಸ್ಯರಾದ ಸುರೇಶ ಅವಟಿ, ಬಾಲಕೃಷ್ಣ ಕದಂ, ಮಾರುತಿ ವಡ್ಡರ, ಗ್ರಾಪಂ ಕಾರ್ಯದರ್ಶಿ ಎಮ್.ಎಮ್.ಕೋಳಿ, ಗ್ರಾಮ ಪಂಚಾಯತಿ ಸಿಬ್ಬಂದಿ ರವಿ ಪವಾರ, ಶ್ರೀಶೈಲ ಶೆಡಬಾಳ, ಸುರೇಶ ಸಪ್ತಾಳಕರ, ಕಾಯಕ ಮಿತ್ರ ಸಂಗೀತಾ ಸಪ್ತಾಳಕರ, ಎಂಬಿಕೆ ಶೈಲಾ ಪಾಂಚಾಳ ಸೇರಿ ಇತರರು ಹಾಜರಿದ್ದರು.ಗ್ರಾಪಂಗಳಲ್ಲಿ ಯೋಗ ದಿನ:
ಇಷ್ಟೆ ಅಲ್ಲದೇ, ತಾಲೂಕಿನ ಬಿಜ್ಜರಗಿ, ಕನಮಡಿ, ಹೊನವಾಡ, ಬಾಬಾನಗರ, ಲೋಹಗಾಂವ ಹಾಗೂ ಟಕ್ಕಳಕಿ ಗ್ರಾಮದ ಅಮೃತ ಸರೋವರದಲ್ಲಿಯೂ ಯೋಗ ದಿನದ ಸಂಭ್ರಮ ಕಂಡು ಬಂದಿತು. ಕನಮಡಿ ಗ್ರಾಮದಲ್ಲಿ ಜರುಗಿದ ಕಾರ್ಯಕ್ರಮವನ್ನು ಪಿಡಿಒ ಮಹೇಶ ಕಗ್ಗೊಡದವರ, ಬಿಜ್ಜರಗಿಯಲ್ಲಿ ಕಾರ್ಯದರ್ಶಿ ಶ್ರೀಶೈಲ ಜಾಲಗೇರಿ, ಬಾಬಾನಗರದಲ್ಲಿ ಪಿಡಿಒ ರೇಣುಕಾ ಸೋಲಾಪುರ, ಲೋಹಗಾಂವ ಗ್ರಾಮ ಪಂಚಾಯತಿ ವ್ಯಾಪ್ತಿಯ ಇಟ್ಟಂಗಿಹಾಳದಲ್ಲಿ ಕಾರ್ಯದರ್ಶಿ ಕಾಸು ತಳವಾರ, ಟಕ್ಕಳಕಿಯಲ್ಲಿ ಪಿಡಿಒ ಅಕ್ಕಮಹಾದೇವಿ ಪವಾರ ಹಾಗೂ ಹೊನವಾಡ ಗ್ರಾಮದಲ್ಲಿ ಪಿಡಿಒ ಶೋಭಕ್ಕ ಶಿಳೀನ ನೇತೃತ್ವ ವಹಿಸಿಕೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.ಈ ವೇಳೆ ಆಯಾ ಗ್ರಾಮ ಪಂಚಾಯತಿಯ ಅಧ್ಯಕ್ಷರು, ಚುನಾಯಿತ ಸದಸ್ಯರು, ಗ್ರಾಮದ ಮುಖಂಡರು, ಶಾಲಾ ಮಕ್ಕಳು ಸೇರಿದಂತೆ ಇತರರು ಹಾಜರಿದ್ದು ಯೋಗ ದಿನವನ್ನು ಯಶಸ್ವಿಗೊಳಿಸಿದರು. ಸರ್ಕಾರ ಹಾಗೂ ಜಿಲ್ಲಾ ಪಂಚಾಯತಿ ಅಧಿಕಾರಿಗಳ ಸೂಚನೆಯಂತೆ ತಿಕೋಟಾ ತಾಲೂಕಿನಲ್ಲಿ ಗ್ರಾಮ ಪಂಚಾಯತಿ ವತಿಯಿಂದ ಮನರೇಗಾ ಯೋಜನೆಯಡಿ ಕೈಗೊಂಡ ಎಲ್ಲ ಅಮೃತ ಸರೋವರಗಳಲ್ಲಿ ಯೋಗ ದಿನವನ್ನು ಯಶಸ್ವಿಯಾಗಿ ಆಚರಣೆ ಮಾಡಲಾಯಿತು.