ಸಾರಾಂಶ
ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಆರ್ಥಿಕವಾಗಿ ಬಲವುಳ್ಳವರು, ಬಡವರಿಗೆ ಸಾಲವನ್ನು ನೀಡುವ ಮೂಲಕ ಆರ್ಥಿಕ ಸವಾರಿ ಮಾಡುತ್ತಿದ್ದರು. ಇದನ್ನು ತಪ್ಪಿಸುವ ಸಲುವಾಗಿಯೇ ಶತಮಾನಗಳ ಹಿಂದೆ ಉದಯಿಸಿದ ಸಂಘವೇ ಸಹಕಾರಿ ಸಂಘ ಎಂದು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಆರ್.ಎಂ. ಮಂಜುನಾಥಗೌಡ ಹೇಳಿದರು.ನಗರದ ಕುವೆಂಪು ರಂಗಮಂದಿರದಲ್ಲಿ ಶನಿವಾರ ಭಗೀರಥ ಸಹಕಾರ ಸಂಘವನ್ನು ಉದ್ಘಾಟಿಸಿ ಮಾತನಾಡಿದ ಅವರು, 119 ವರ್ಷಗಳ ಹಿಂದೆ ಹಾಲುಮತ ಸಮಾಜದ ಮುಖಂಡರೊಬ್ಬರು ಸಹಕಾರ ಸಂಘವನ್ನು ಸ್ಥಾಪಿ ಸುವ ಮೂಲಕ ಬಡವರಿಗೆ ಹಾಗೂ ಮಧ್ಯಮ ವರ್ಗದವರಿಗೆ ಹಣಕಾಸಿನ ನೆರವಿನ ಹಸ್ತವನ್ನು ಚಾಚಿದರು ಎಂದು ಸಹಕಾರ ಸಂಘದ ಇತಿಹಾಸವನ್ನು ಸ್ಮರಿಸಿದರು.
ವಾಣಿಜ್ಯ ಬ್ಯಾಂಕ್ಗಳೇ ದಿವಾಳಿಯಾಗುವ ಈ ಹೊತ್ತಿನಲ್ಲಿ ದೇಶದ ಆರ್ಥಿಕ ಸ್ಥಿತಿಯನ್ನು ಸೀಮಿತದಲ್ಲಿ ಇಟ್ಟುಕೊಳ್ಳಲು ಸಹಕಾರ ಸಂಘಗಳು ಕಾರಣವಾಗಿವೆ. ಅಷ್ಟೇ ಅಲ್ಲದೇ ಬಡವರಿಗೆ ಆರ್ಥಿಕ ಸಹಾಯ ಮಾಡಿ ಅವರ ಜೀವನ ಬದ್ಧತೆಯನ್ನು ಹೆಚ್ಚಿಸುತ್ತಿವೆ ಎಂದರು.ಕೆಲವು ವರ್ಷಗಳ ಹಿಂದೆ ವಿಶ್ವದಲ್ಲಿ ಆರ್ಥಿಕ ಹಿಂಜರಿಕೆ ಉಂಟಾದ ಸಂದರ್ಭದಲ್ಲಿ ಅನೇಕ ರಾಷ್ಟ್ರಗಳಲ್ಲಿ ಆರ್ಥಿಕ ಸಂಕಷ್ಟ ಉಂಟಾಯಿತು. ಆದರೆ ಭಾರತದಂತಹ ರಾಷ್ಟ್ರದಲ್ಲಿ ಈ ಸಮಸ್ಯೆ ಉಲ್ಬಣಿಸಲಿಲ್ಲ. ಕಾರಣ ಇಲ್ಲಿನ ಸಹಕಾರ ವ್ಯವಸ್ಥೆ ಆರ್ಥಿಕ ಸಂಕಷ್ಟಕ್ಕೆ ಆಸ್ಪದ ನೀಡಲಿಲ್ಲ ಎಂದರು.
ವಾಣಿಜ್ಯ ಬ್ಯಾಂಕ್ಗಳು ಬಂಡವಾಳಶಾಹಿಗಳತ್ತ ಮುಖ ಮಾಡುತ್ತಿವೆ. ಆದರೆ ಸಹಕಾರ ಸಂಘಗಳು ಬಡವರತ್ತ ಸಾಗಿವೆ. ಎನ್. ಮಂಜುನಾಥ್ ಅವರು ತಮ್ಮ ಭಗಿರಥ ಪ್ರಯತ್ನದಿಂದ ಸಹಕಾರ ಸಂಘವನ್ನು ಕಟ್ಟಿದ್ದಾರೆ. ಇದಕ್ಕಾಗಿ ಅವರು ಬಹಳ ಕಷ್ಟ ಪಟ್ಟಿದ್ದಾರೆ. ಒಂದು ಸಹಕಾರ ಸಂಘದ ಉದ್ಘಾಟನಾ ಸಮಾರಂಭಕ್ಕೆ ಇಷ್ಟೊಂದು ಜನರು ಭಾಗವಹಿಸಿರುವುದು ನನ್ನ ಅನುಭವದಲ್ಲಿ ಇದೇ ಮೊದಲಾಗಿದೆ ಎಂದರು.ಪ್ರತಿಭಾ ಪುರಸ್ಕಾರ ನೆರವೇರಿಸಿದ ಶಾಸಕ ಡಾ.ಧನಂಜಯ ಸರ್ಜಿ ಮಾತನಾಡಿ, ಪ್ರತಿಯೊಬ್ಬರೂ ಜೀವನದಲ್ಲಿ ಮುಂದೆ ಬರಬೇಕಾದರೆ ಹಾಗೂ ಯಶಸ್ಸನ್ನು ಸಾಧಿಸಬೇಕಾದರೆ ಭಗೀರಥ ಪ್ರಯತ್ನ ಮಾಡಲೇಬೇಕು ಎಂದರು.
ಲೋಗೋ ಬಿಡುಗಡೆ ಮಾಡಿದ ಶಿವಮೊಗ್ಗ ಶಾಸಕ ಎಸ್.ಎನ್.ಚನ್ನಬಸಪ್ಪ ಮಾತನಾಡಿ, ಆರ್ಥಿಕ ಶಕ್ತಿ ನೀಡುವ ಸಂಸ್ಕೃತಿ ಭಾರತೀಯರ ಪ್ರತೀಕ. ಅನಾದಿಕಾಲದಿಂದಲೂ ನಮ್ಮಲ್ಲಿ ಆರ್ಥಿಕ ಸಹಕಾರವನ್ನು ನೀಡುವಂತಹ ಪದ್ಧತಿ ಇದೆ. ಅದರ ಮುಂದುವರಿದ ಭಾಗವೇ ಸಹಕಾರ ಸಂಘಗಳು ಎಂದು ಹೇಳಿದರು.ಪ್ರಸ್ತುತ ಆರಂಭವಾಗಿರುವ ಭಗೀರಥ ಸಹಕಾರ ಸಂಘ ಶಾಶ್ವತವಾಗಿ ಉಳಿಯಲಿ. ಶತಮಾನೋತ್ಸವವನ್ನು ಕಾಣುವ ನಿಟ್ಟಿ ನಲ್ಲಿ ಸಂಘ ಯಶಸ್ಸಿನ ಹಾದಿಯಲ್ಲಿ ಸಾಗಲಿ ಎಂದು ಹಾರೈಸಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಶ್ರೀ ಭಗೀರಥ ಸಹಕಾರ ಸಂಘದ ಅಧ್ಯಕ್ಷ ಎನ್.ಮಂಜುನಾಥ್ ಸಂಘಟನೆ ಮಾಡುವುದು ಎಷ್ಟೊಂದು ಕಷ್ಟ ಎಂದು ಅರ್ಥವಾಗುತ್ತಿದೆ. ಸಮಾಜದ ಜನರ ಬಹುದಿನದ ಕನಸಾದ ಈ ಸಂಘ ಇಂದು ನನಸಾಗಿದೆ ಎಂದರು.ಆರಂಭದಲ್ಲಿ 471 ಸದಸ್ಯರನ್ನ ಹೊಂದಿದ್ದ ಸಂಘ ಪ್ರಸ್ತುತ 700ಕ್ಕೂ ಹೆಚ್ಚು ಸದಸ್ಯರನ್ನ ಹೊಂದಿ 15 ಲಕ್ಷ ಮೂಲ ಬಂಡವಾಳವನ್ನ ಸಂಗ್ರಹಿಸಿದೆ. 1250 ರು.ಗಳ ಶೇರನ್ನು ಪಡೆಯುವ ಮೂಲಕ ಸಂಘದ ಸದಸ್ಯತ್ವವನ್ನು ಪಡೆದಿದ್ದಾರೆ ಮುಂದಿನ ಎರಡು ವರ್ಷಗಳಲ್ಲಿ 5000 ಕ್ಕೂ ಹೆಚ್ಚು ಸದಸ್ಯರನ್ನ ಮಾಡುವ ಗುರಿ ಹೊಂದಲಾಗಿದೆ ಆರಂಭದ ದಿನಗಳಲ್ಲಿ 25 ಸಾವಿರ ವರೆಗೆ ಜಾಮೀನು ಸಾಲ ಹಾಗೂ ವಾಹನ ಸಾಲವನ್ನು ಕೊಡಲು ಉದ್ದೇಶಿಸಲಾಗಿದೆ ಎಂದು ಹೇಳಿದರು
ಶಿವಮೊಗ್ಗ ಜಿಲ್ಲೆಯಲ್ಲಿ 48 ಹಳ್ಳಿಗಳಿಂದ ಷೇರುದಾರರನ್ನು ಸಹಕಾರ ಸಂಘ ಹೊಂದಿದೆ ಎಂದ ಅವರು, ಅನೇಕ ಕುಟುಂಬಗಳು ಆರ್ಥಿಕವಾಗಿ ಶೈಕ್ಷಣಿಕವಾಗಿ ಹಿಂದುಳಿದಿದ್ದು ಈ ಕುಟುಂಬಗಳಿಗೆ ಆರ್ಥಿಕ ಬಲವನ್ನ ತುಂಬುವ ಸಲುವಾಗಿ ಈ ಸಂಘವನ್ನ ಸ್ಥಾಪಿಸಲಾಗಿದೆ ಎಂದರು.ಸಮಾರಂಭದಲ್ಲಿ ೫೦ವರ್ಷಗಳ ಕಾಲ ವೈವಾಹಿಕ ಜೀವನ ನಡೆಸಿದ ದಂಪತಿಗಳಿಗೆ ಹಾಗೂ ಎಸ್ಎಸ್ಎಲ್ಸಿ ಹಾಗೂ ಪಿಯುಸಿಯಲ್ಲಿ ಶೇ.೯೦ಕ್ಕಿಂತ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಸತ್ಕರಿಸಲಾಯಿತು.
ಕಾರ್ಯಕ್ರಮದಲ್ಲಿ ಶಾಸಕಿ ಶಾರದಾಪೂರ್ಯನಾಯ್ಕ್, ನಿವೃತ್ತ ನ್ಯಾಯಾಧೀಶ ಬಿಲ್ಲಪ್ಪ, ಜಗನ್ನಾಥ್ ಸಾಗರ್, ಸಂಘದ ಉಪಾಧ್ಯಕ್ಷ ವಸಂತ್ ಹೋಬಳಿದಾರ್, ನಿರ್ದೇಶಕರಾದ ಸುಧಾಕರ್, ರವಿ, ಲೋಕೇಶ್, ಹನುಮಂತಪ್ಪ, ವೆಂಕಟೇಶ್, ರಮೇಶ್ , ಶ್ರೀನಿವಾಸ್, ಶಾಂತಮ್ಮ, ಅರ್ಚನ ಉಪಸ್ಥಿತರಿದ್ದರು.