ಕನ್ನಡಪ್ರಭ ವಾರ್ತೆ ಬೇಲೂರುತಾಲೂಕಿನ ಅರೇಹಳ್ಳಿ ಹೋಬಳಿಯ ಬೊಮ್ಮೇನಹಳ್ಳಿ ಗ್ರಾಮದಲ್ಲಿ ಕಾಡಾನೆಗಳ ಹಿಂಡು ಬೀಡು ಬಿಟ್ಟಿದ್ದು ಸ್ಥಳೀಯರಲ್ಲಿ ಮತ್ತೆ ಆತಂಕ ಶುರುವಾಗಿದೆ. ಶನಿವಾರ ಇಡೀ ರಾತ್ರಿ ಆಹಾರಕ್ಕಾಗಿ ಅಲೆದಾಡಿದ್ದ ಸುಮಾರು ೨೮ ಕಾಡಾನೆಗಳ ಹಿಂಡು ಭಾನುವಾರ ಬೆಳಗ್ಗೆ ಡಿಸಿ ತೋಟದಲ್ಲಿ ವಿಶ್ರಾಂತಿ ಪಡೆದುಕೊಳ್ಳುತ್ತಿದ್ದವು. ಈ ಸಂದರ್ಭದಲ್ಲಿ ಗೌರಿ ಕೆರೆಯಲ್ಲಿ ಸಾಕಷ್ಟು ನೀರು ಕುಡಿಯುವುದರ ಮೂಲಕ ದಾಹ ನೀಗಿಸಿಕೊಂಡು ಮತ್ತದೇ ತೋಟಕ್ಕೆ ವಿಶ್ರಾಂತಿಗೆ ತೆರಳಿದವು. ಇನ್ನೊಂದು ಒಂಟಿ ಕಾಡಾನೆಯು ಕಿತ್ತಾವರ ಎಸ್ಟೇಟ್‌ನ ಬಿ ಬ್ಲಾಕ್‌ನಲ್ಲಿ ಕಾಣಿಸಿಕೊಂಡು ಆತಂಕ ಸೃಷ್ಟಿಸಿವೆ.ಇಟಿಎಫ್ ಸಿಬ್ಬಂದಿ ಕಾಡಾನೆಗಳ ಸಂಚಾರವನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದು ಸ್ಥಳೀಯ ನಿವಾಸಿಗಳಿಗೆ ಎಚ್ಚರಿಕೆಯಿಂದಿರುವಂತೆ ತಿಳಿಸಿ ಆನೆಗಳು ಓಡಾಡಬಹುದಾಗಿರುವ ಸ್ಥಳದಲ್ಲಿ ರಾತ್ರಿ ಸಂಚಾರನ್ನು ಮಾಡಬಾರದೆಂದು ಧ್ವನಿವರ್ಧಕದ ಮೂಲಕ ಸಾರ್ವಜನಿಕರಿಗೆ ಎಚ್ಚರಿಕೆಯ ಸಂದೇಶ ನೀಡುತ್ತಿದ್ದಾರೆ.