ಸಾರಾಂಶ
ನಗರಸಭೆ ವಿರುದ್ಧ ಮನೆ ಮಾಲೀಕರ ಆಕ್ರೋಶ । ಕಮ್ಮರುನಿಸಿಯಾ ಅಂಜುಂ ಅಳಲು । ನ್ಯಾಯ ದೊರಕಿಸಿಕೊಡಲು ಆಗ್ರಹ
ಕನ್ನಡಪ್ರಭ ವಾರ್ತೆ ಹಾಸನಕಾನೂನುಬದ್ಧವಾಗಿ ಹಕ್ಕುಪತ್ರ ಇರುವ ಮನೆ ಜಾಗದಲ್ಲಿ ಶೆಡ್ ನಿರ್ಮಿಸಿದ್ದನ್ನು ನಗರಸಭೆ ಅಧಿಕಾರಿಗಳು ಯಾವ ನೋಟಿಸ್ ನೀಡದೇ ಮನೆಯಲ್ಲಿ ಯಾರೂ ಇಲ್ಲದ ವೇಳೆ ಜೆಸಿಬಿ ಮೂಲಕ ಧ್ವಂಸ ಮಾಡಲಾಗಿದೆ. ಇದಕ್ಕೆ ನ್ಯಾಯ ಕೊಡಬೇಕು ಎಂದು ಕಮ್ಮರುನಿಸಿಯಾ ಅಂಜುಂ ಅಳಲು ತೋಡಿಕೊಂಡರು.
ನಗರದ ಚಿಪ್ಪಿನಕಟ್ಟೆ, ೮೦ ಫೀಟ್ ರಸ್ತೆ ಬಳಿ ಕಳೆದ ೨೫ ವರ್ಷಗಳ ಹಿಂದೆ ಮನೆ ನಿರ್ಮಿಸಿಕೊಂಡು ಜೀವನ ಸಾಗಿಸುತ್ತಿರುವ ಕಮ್ಮರುನಿಸಿಯಾ ಅಂಜುಂ ವಸತಿ ಇಲಾಖೆ ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿಯಿಂದ ಈ ಜಾಗ ಪಡೆಯಲಾಗಿದ್ದು, ಸುಮಾರು ೨೫ ವರ್ಷಗಳಿಂದಲೂ ಈ ಜಾಗದಲ್ಲೆ ಮನೆ ನಿರ್ಮಿಸಿ ಜೀವನ ನಡೆಸುತ್ತಿದ್ದರು. ಕೆಲ ದಿನಗಳ ಹಿಂದೆ ಹಕ್ಕುಪತ್ರ ಇರುವ ಜಾಗದಲ್ಲೆ ಒಂದು ಶೆಡ್ ನಿರ್ಮಿಸಿಕೊಂಡು ವರ್ಕ್ಸ್ ಶಾಪ್ ಮಾಡಲು ಮುಂದಾಗಿದ್ದರು. ಮನೆಯಲ್ಲಿ ಗರ್ಭಿಣಿ ಮಗಳು ಇದ್ದರು. ಈ ವೇಳೆ ಜೆಸಿಬಿ ಮೂಲಕ ಶೆಡ್ ಬೀಳಿಸಿದ್ದಾರೆ. ಇದನ್ನು ಖಂಡಿಸಿ ಅಂಜುಂ ಕುಟುಂಬ ಸದಸ್ಯರು ಪ್ರತಿಭಟನೆ ನಡೆಸಿ ತಮ್ಮ ದುಃಖ ತೋಡಿಕೊಂಡರು.ಕಮ್ಮರುನಿಸಿಯಾ ಅಂಜುಂ ಮಾಧ್ಯಮದೊಂದಿಗೆ ಮಾತನಾಡಿ, ‘ನನಗೆ ಅಂದು ಮನೆ ಇರಲಿಲ್ಲ. ಸಚಿವರಿಗೆ ಹೇಳಿ ಶ್ರೀಕಂಠಯ್ಯರ ಕಾಲದಲ್ಲಿ ೨೫ ವರ್ಷಗಳ ಹಿಂದೆ ಇದೇ ಮನೆಯಲ್ಲಿ ಸೀಟು ಹಾಕಿಕೊಂಡು ಜೀವನ ನಡೆಸುತ್ತಿದ್ದೆವು. ಮಗನಿಗೆ ವರ್ಕ್ ಶಾಪ್ ಮಾಡಿಕೊಡಲೆಂದು ಮನೆಯ ಜಾಗದಲ್ಲೆ ಶೆಡ್ ಹಾಕಲಾಗಿತ್ತು. ಅಪಘಾತವಾಗಿ ನನ್ನ ಮಗನಿಗೆ ಆಪರೇಶನ್ ಆಗಿದ್ದು, ಆತನನ್ನು ನೋಡಲೆಂದು ಪ್ರಯಾಣ ಬೆಳೆಸಿದ ವೇಳೆ ಉಪಾಯೋಗಿಸಿಕೊಂಡು ಇರುವ ಮನೆಯನ್ನು ಕೆಡವಿದ್ದು, ಗರ್ಭಿಣಿ ಮಗಳು ಮನೆಯಲ್ಲಿ ಇದ್ದಳು. ಈ ವೇಳೆ ಅನೇಕ ಬಾರಿ ಮನವಿ ಮಾಡಿದರೂ ಲೆಕ್ಕಿಸದೆ ನಗರಸಭೆಯವರು ಜೆಸಿಬಿ ಮೂಲಕ ಕೆಡವಿದ್ದಾರೆ’ ಎಂದು ದೂರಿದರು. ಹಾಸನ ನಗರದ ಚಿಪ್ಪಿನಕಟ್ಟೆ, ೮೦ ಫೀಟ್ ರಸ್ತೆ ಬಳಿ ಮನೆ ಜಾಗದಲ್ಲಿ ನಿರ್ಮಿಸಿದ್ದ ಶೆಡ್ ಅನ್ನು ನಗರಸಭೆ ಅಧಿಕಾರಿಗಳು ಧ್ವಂಸ ಮಾಡಿರುವುದನ್ನು ಮನೆಯ ಮಾಲೀಕರು ಖಂಡಿಸಿ ಪ್ರತಿಭಟಿಸಿದರು.