ಅರಸು ಅವರು ನಮ್ಮನ್ನು ಅಗಲಿ 44 ವರ್ಷಗಳಾದರೂ ಇಂದಿಗೂ ಪ್ರಸ್ತುತವಾಗಿದ್ದಾರೆಂದರೆ ಅದಕ್ಕೆ ಕಾರಣ ಅವರಲ್ಲಿನ ಆಡಳಿತ ಬದ್ಧತೆ, ದೂರದೃಷ್ಟಿ ಮತ್ತು ಮಾನವೀಯತೆಯ ತೀರ್ಮಾನಗಳು ಎಂದ ಅವರು, ಜನಪ್ರತಿನಿಧಿಗಳು ಎಷ್ಟು ದಿವಸ ಅಧಿಕಾರದಲ್ಲಿರುತ್ತಾರೆ ಎಂಬುದಕ್ಕಿಂತ ಜನರ ಮನಸ್ಸಿನಲ್ಲಿ ಎಷ್ಟು ಕಾಲ ಉಳಿಯುತ್ತಾರೆ ಎಂಬುದು ಮುಖ್ಯವಾದದ್ದು.
ಕನ್ನಡಪ್ರಭ ವಾರ್ತೆ ಮಂಡ್ಯ
ಕೃಷಿಕರು, ಶ್ರಮಿಕರು ಮತ್ತು ಅಸಹಾಯಕರ ಬದುಕಿಗೆ ಆಸರೆಯಾದ ಡಿ.ದೇವರಾಜ ಅರಸು ಅವರ ಆಡಳಿತ ಇಂದಿನ ಸರ್ಕಾರ ಮತ್ತು ಜನಪ್ರತಿನಿಧಿಗಳಿಗೆ ಮಾದರಿ ಎಂದು ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ವೇದಿಕೆ ಅಧ್ಯಕ್ಷ ಎಲ್. ಸಂದೇಶ್ ಬಣ್ಣಿಸಿದರು.ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ವೇದಿಕೆಯಿಂದ ನಗರದ ಜೆ.ಸಿ.ವೃತ್ತದಲ್ಲಿ ಸಾಮಾಜಿಕ ಪರಿವರ್ತನೆಯ ಹರಿಕಾರ ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸು ಅವರ 44ನೇ ಪುಣ್ಯ ಸ್ಮರಣೆ ಕಾರ್ಯಕ್ರಮದಲ್ಲಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ನೆರವೇರಿಸಿ ಮಾತನಾಡಿದರು.
ಅರಸು ಅವರು ನಮ್ಮನ್ನು ಅಗಲಿ 44 ವರ್ಷಗಳಾದರೂ ಇಂದಿಗೂ ಪ್ರಸ್ತುತವಾಗಿದ್ದಾರೆಂದರೆ ಅದಕ್ಕೆ ಕಾರಣ ಅವರಲ್ಲಿನ ಆಡಳಿತ ಬದ್ಧತೆ, ದೂರದೃಷ್ಟಿ ಮತ್ತು ಮಾನವೀಯತೆಯ ತೀರ್ಮಾನಗಳು ಎಂದ ಅವರು, ಜನಪ್ರತಿನಿಧಿಗಳು ಎಷ್ಟು ದಿವಸ ಅಧಿಕಾರದಲ್ಲಿರುತ್ತಾರೆ ಎಂಬುದಕ್ಕಿಂತ ಜನರ ಮನಸ್ಸಿನಲ್ಲಿ ಎಷ್ಟು ಕಾಲ ಉಳಿಯುತ್ತಾರೆ ಎಂಬುದು ಮುಖ್ಯವಾದದ್ದು. ಆ ಮೂಲಕ ಅವರ ಆಡಳಿತವನ್ನು ನಿರ್ಧರಿಸಲಾಗುತ್ತದೆ ಎಂದು ವಿಶ್ಲೇಷಿಸಿದರು.ನಾಲ್ವಡಿ ಕೃಷ್ಣರಾಜ ಒಡೆಯರ್ ಮಿಲ್ಲರ್ ಆಯೋಗದ ಮೂಲಕ ಎಲ್ಲ ವರ್ಗದವರಿಗೆ ಶೇ.75ರ ಮೀಸಲಾತಿಯನ್ನು ಜಾರಿಗೊಳಿಸಿದಂತೆ ಡಿ.ದೇವರಾಜ ಅರಸು ಹಾವನೂರು ವರದಿಯನ್ನು ಅನುಷ್ಠಾನಗೊಳಿಸಿ ಹಿಂದುಳಿದವರಿಗೆ ಉದ್ಯೋಗ ಮತ್ತು ಶಿಕ್ಷಣದಲ್ಲಿ ಮೀಸಲಾತಿಯನ್ನು ಕಲ್ಪಿಸಿದರು. ಅಂದಿನಿಂದ ಇಂದಿನವರೆಗೂ ಹಲವು ಆಯೋಗಗಳು ರಚನೆಯಾದರೂ, ಅವುಗಳ ವರದಿಯನ್ನು ಅನುಷ್ಠಾನಗೊಳಿಸುವ ಪ್ರಕ್ರಿಯೆ ನಡೆಸಿಲ್ಲ. ಇದು ಸಾಮಾಜಿಕ ನ್ಯಾಯಕ್ಕೆ ಎಸಗಿದ ಅಪಮಾನವಾಗಿದೆ. ಇತ್ತೀಚೆಗೆ ಸ್ವೀಕಾರಗೊಂಡಿರುವ ಮಧುಸೂಧನ್ ನಾಯಕ್ ಸಮಿತಿಯ ವರದಿಯನ್ನು ಅನುಷ್ಠಾನಗೊಳಿಸಬೇಕು ಎಂದು ಆಗ್ರಹಿಸಿದರು.
ಅರಸು ಅವರು ಅತಿ ಹಿಂದುಳಿದ ಸಮುದಾಯಗಳಿಗೆ ರಾಜಕೀಯ ನ್ಯಾಯ ಕಲ್ಪಿಸಿದ್ದರು. 65ಕ್ಕೂ ಹೆಚ್ಚು ಶಾಸಕರು ಅರಸು ಅವಧಿಯಲ್ಲಿ ಅಧಿಕಾರದಲ್ಲಿದ್ದರು. ಆದರೆ ಇತ್ತೀಚೆಗೆ ಹಿಂದುಳಿದ ವರ್ಗಗಳ ರಾಜಕೀಯ ಪ್ರಾಬಲ್ಯ ಕುಗ್ಗುತ್ತಿದ್ದು, ಜನಸಂಖ್ಯೆಗೆ ಅನುಗುಣವಾಗಿ ಲೋಕಸಭೆ ಮತ್ತು ವಿಧಾನ ಸಭೆಯಲ್ಲಿ ಅವಕಾಶಗಳು ಸಿಗುತ್ತಿಲ್ಲ ಎಂದು ವಿಷಾದಿಸಿದ ಅವರು, ಮೀಸಲಾತಿಯ ಮೂಲಕ ಹಿಂದುಳಿದ ವರ್ಗಗಳಿಗೆ ರಾಜಕೀಯ ನ್ಯಾಯ ಕಲ್ಪಿಸಬೇಕು ಎಂದು ಆಶಿಸಿದರು.ಜೈಕರ್ನಾಟಕ ಪರಿಷತ್ ಅಧ್ಯಕ್ಷ ಎಸ್. ನಾರಾಯಣ್ ಮಾತನಾಡಿ, ಡಿ. ದೇವರಾಜ ಅರಸು ಅವರು ಸಮಾಜದ ಸುಧಾರಣೆಗೆ ಶ್ರಮಿಸಿದಂತವರು. ಹಳೇ ಮೈಸೂರು ರಾಜ್ಯವನ್ನು ಕರ್ನಾಟಕವೆಂದು ನಾಮಕರಣ ಮಾಡುವ ಮೂಲಕ ಅಖಂಡತೆಯನ್ನು ಪ್ರದರ್ಶಿಸಿದರು. ಅವರ ಆಡಳಿತ ಇಂದಿಗೂ ಪ್ರಸ್ತುತವಾಗಿದೆ ಎಂದು ಬಣ್ಣಿಸಿದರು.
ವೇದಿಕೆಯ ಪ್ರಧಾನ ಕಾರ್ಯದರ್ಶಿ ಎಂ.ಕೃಷ್ಣ, ಕರವೇ ಜಿಲ್ಲಾಧ್ಯಕ್ಷ ಎಚ್.ಡಿ.ಜಯರಾಂ, ಮುಖಂಡರಾದ ಉಮ್ಮಡಹಳ್ಳಿ ನಾಗೇಶ್, ಎನ್.ದೊಡ್ಡಯ್ಯ, ಡಿ. ರಮೇಶ್, ಸಿ.ಸಿದ್ದಶೆಟ್ಟಿ, ಅಮ್ಜದ್ಪಾಷ, ಪ್ರದೀಪ್, ಜವರೇಗೌಡ, ಎನ್ವೈಕೆ ಬಸವರಾಜು, ಎಸ್.ಪಿ.ನಾರಾಯಣಸ್ವಾಮಿ, ಹುರುಗಲವಾಡಿ ರಾಮಯ್ಯ, ಕಲಾವಿದ ಪ್ರಕಾಶ್, ಎಂ.ಎಸ್.ರಾಜಣ್ಣ, ಅನಿಲ್ಕುಮಾರ್, ಕಾಂತರಾಜು, ಗುಡಿಗೇನಹಳ್ಳಿ ಚಂದ್ರಶೇಖರ್ ಆರಾಧ್ಯ, ಕಟ್ಟೆ ಕೃಷ್ಣಸ್ವಾಮಿ, ಶಿವಮಾದು, ಜಯರಾಂ ಇತರರಿದ್ದರು.ಡಿ.ದೇವರಾಜು ಅರಸು ಪುಣ್ಯ ಸ್ಮರಣೆ ಭಾವಚಿತ್ರಕ್ಕೆ ಪುಷ್ಪಾರ್ಚನೆಕನ್ನಡಪ್ರಭ ವಾರ್ತೆ ಮದ್ದೂರುಪಟ್ಟಣದ ಶ್ರೀನರಸಿಂಹ ಸ್ವಾಮಿ ದೇವಸ್ಥಾನದ ಆವರಣದಲ್ಲಿ ಅಹಿಂದ ಸಂರಕ್ಷಣಾ ವೇದಿಕೆಯಿಂದ ಹಿಂದುಳಿದ ವರ್ಗಗಳ ನೇತಾರ ಡಿ.ದೇವರಾಜು ಅರಸು ಅವರ ಪುಣ್ಯ ಸ್ಮರಣೆಯಲ್ಲಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಲಾಯಿತು.
ನಂತರ ಮಾತನಾಡಿದ ಡಿ.ದೇವರಾಜು ಹಿಂದುಳಿದ ವರ್ಗಗಳ ವೇದಿಕೆ ಜಿಲ್ಲಾಧ್ಯಕ್ಷ ಎಲ್.ಸಂದೇಶ್ ಅವರು, ರಾಜ್ಯದಲ್ಲಿ ಡಿ. ದೇವರಾಜು ಅರಸು ಮುಖ್ಯಮಂತ್ರಿಯಾಗಿದ್ದಾಗ ಉಳುವವನೇ ಭೂಮಿ ಒಡೆಯ ಎಂಬ ಕಾನೂನನ್ನು ಜಾರಿಗೆ ತಂದ ಪರಿಣಾಮವೇ ಇವತ್ತು ಶೋಷಿತ ವರ್ಗಗಳು ಒಂದಷ್ಟು ಭೂಮಿ ಹೊಂದಲು ಸಾಧ್ಯವಾಯಿತು ಎಂದು ತಿಳಿಸಿದರು.ಅಂಬೇಡ್ಕರ್ ರವರ ಆಶಯದಂತೆ ನಾವೆಲ್ಲರೂ ಸಮಾನತೆ ಹೊಂದಬೇಕಾದರೆ ಸಾವಿರಾರು ಎಕರೆ ಭೂಮಿ ಹೊಂದಿರುವಂತಹವರು ಭೂಮಿ ಇಲ್ಲದವರಿಗೆ ಹಂಚಿಕೆ ಮಾಡಬೇಕು. ಅಗಷ್ಟೆ ನಮ್ಮ ದೇಶ ಅಭಿವೃದ್ಧಿ ಹೊಂದಲು ಸಾಧ್ಯ ಎಂದರು.ಕಾರ್ಯಕ್ರಮದಲ್ಲಿ ಅಹಿಂದ ಸಂರಕ್ಷಣಾ ವೇದಿಕೆ ದಾಕ್ಷಾಯಿಣಿ, ಚಿಕ್ಕಮ್ಮ, ಸಂಘಟನಾ ಕಾರ್ಯದರ್ಶಿ ಶಶಿಕುಮಾರ್ ಪಿ, ಸಂಚಾಲಕರಾದ ಆಶಿಷ್ ಪಾಷಾ, ದಲಿತ ಸಾಹಿತ್ಯ ಪರಿಷತ್ ಅಧ್ಯಕ್ಷ ಕೆ ಟಿ.ಶಿವಕುಮಾರ್, ಸಹಕಾರ್ಯದರ್ಶಿ ರಾಚಯ್ಯ, ಚಂದ್ರಶೇಖರ್ ,ಧನಂಜಯ ,ಚಿಕ್ಕನಂಜಚಾರಿ, ಮೋಹನ್, ವೆಂಕಟೇಶ್,ಜೋಗಿ,ಅರ್ ಮಂಗಮ್, ದೇವು ಉಮೇಶ್, ಹಾಗೂ ಇತರರು ಇದ್ದರು.