ಸಾರಾಂಶ
ಕನ್ನಡಪ್ರಭ ವಾರ್ತೆ ಉಡುಪಿ
ನಾಯಕನಾದವನು ಸವಾಲುಗಳನ್ನು ಎದುರಿಸಿದಾಗ ಮಾತ್ರ ಪ್ರಗತಿಶೀಲನಾಗಿ ಸಮಾಜದಲ್ಲಿ ಬದಲಾವಣೆ ಕಾಣಲು ಸಾಧ್ಯ ಎಂದು ಉಡುಪಿ ಧರ್ಮಪ್ರಾಂತ್ಯದ ಸಾರ್ವಜನಿಕ ಸಂಪರ್ಕಾಧಿಕಾರಿ ವಂ. ಡೆನಿಸ್ ಡೆಸಾ ಹೇಳಿದರು.ಅವರು ಭಾನುವಾರ ಕಕ್ಕುಂಜೆ ಅನುಗ್ರಹ ಪಾಲನಾ ಕೇಂದ್ರದಲ್ಲಿ ಕೆಥೊಲಿಕ್ ಸಭಾ ಉಡುಪಿ ಪ್ರದೇಶ ಇದರ 2023-24ನೇ ಸಾಲಿನ ವಾರ್ಷಿಕ ಮಹಾಸಭೆ ಹಾಗೂ ಸಹಮಿಲನವನ್ನು ಉದ್ಘಾಟಿಸಿ ಮಾತನಾಡಿದರು.ಇಂದಿನ ಸ್ಪರ್ಧಾರ್ತಕ ಜಗತ್ತಿನಲ್ಲಿ ನಾಯಕನ ಆಲೋಚನೆಗಳು ಸಮಾಜದಲ್ಲಿ ಬದಲಾವಣೆಯನ್ನು ಬಯಸುವಂತದ್ದಾಗಿರಬೇಕಾಗಿದ್ದು, ಹೊಸ ಹೊಸ ಪ್ರಯೋಗಗಳು ಮತ್ತು ಆಲೋಚನೆಗಳೊಂದಿಗೆ ಸಂಘಟನೆಯನ್ನು ಮುನ್ನಡೆಸಬೇಕಾಗಿದೆ. ಈ ವೇಳೆ ಬರುವ ಟೀಕೆಗಳನ್ನು ಧನಾತ್ಮಕವಾಗಿ ಸ್ವೀಕರಿಸಿದಾಗ ಉತ್ತಮ ನಾಯಕತ್ವ ಬೆಳೆಯಲು ಸಾಧ್ಯವಾಗುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಅರಣ್ಯ ಸಂರಕ್ಷಾಣಾಧಿಕಾರಿ ಕ್ಲಿಫರ್ಡ್ ಲೋಬೊ ಮಾತನಾಡಿ, ಕ್ರೈಸ್ತ ಸಮುದಾಯ ಸೇವೆಯಲ್ಲಿ ಪ್ರಥಮ ಸ್ಥಾನದಲ್ಲಿದ್ದು ಕೇವಲ ಸೇವೆ ಮಾತ್ರವಲ್ಲದೆ ಮುಂದಿನ ದಿನಗಳಲ್ಲಿ ಹೆಚ್ಚು ಹೆಚ್ಚು ಯುವಕರು ಸರ್ಕಾರಿ ಸೇವೆಗಳತ್ತ ಗಮನ ಹರಿಸಬೇಕು ಎಂಬ ಸಲಹೆ ನೀಡಿದರು.ಸಭೆಯಲ್ಲಿ 2023-24ನೇ ಸಾಲಿನ ವಾರ್ಷಿಕ ವರದಿಯನ್ನು ಕಾರ್ಯದರ್ಶಿ ಓಲಿವಿಯಾ ಡಿಮೆಲ್ಲೊ ಮಂಡಿಸಿದರೆ, ಲೆಕ್ಕಪತ್ರವನ್ನು ಕೋಶಾಧಿಕಾರಿ ಜೆರಾಲ್ಡ್ ರೊಡ್ರಿಗಸ್ ಮಂಡಿಸಿದರು. ಮಾನಸ ಸಂಸ್ಥೆಯ ವರದಿಯನ್ನು ಅಧ್ಯಕ್ಷ ಹೆನ್ರಿ ಮಿನೇಜಸ್, ಸಶಕ್ತ ಸಮುದಾಯ ಸೇವಾ ಟ್ರಸ್ಟಿನ ವರದಿಯನ್ನು ಕಾರ್ಯದರ್ಶಿ ಆಲಿಸ್ ರೊಡ್ರಿಗಸ್ ಮಂಡಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೆಥೊಲಿಕ್ ಸಭಾ ಉಡುಪಿ ಪ್ರದೇಶ ಇದರ ಅಧ್ಯಕ್ಷ ಸಂತೋಷ್ ಕರ್ನೆಲಿಯೋ ವಹಿಸಿದ್ದರು. ಕಾರ್ಯಕ್ರಮದಲ್ಲಿ ಉಡುಪಿ ಜಿಲ್ಲಾ ಸಣ್ಣ ಕೈಗಾರಿಕೆಗಳ ಸಂಘದ ಮಾಜಿ ಅಧ್ಯಕ್ಷ ಜಾನ್ ಡಿಸಿಲ್ವ, ಉಡುಪಿ ಧರ್ಮಪ್ರಾಂತ್ಯದ ವಿಕಾರ್ ಜನರಲ್ ಮೊನ್ಸಿಂಜ್ಞೊರ್ ಫರ್ಡಿನಾಂಡ್ ಗೊನ್ಸಾಲ್ವಿಸ್, ಕೆಥೊಲಿಕ್ ಸಭಾ ಉಡುಪಿ ಪ್ರದೇಶ ಇದರ ನಿಕಟಪೂರ್ವ ಅಧ್ಯಕ್ಷರಾದ ಮೇರಿ ಡಿಸೋಜ, ನಿಯೋಜಿತ ಅಧ್ಯಕ್ಷ ರೊನಾಲ್ಡ್ ಆಲ್ಮೇಡಾ, ಉಪಾಧ್ಯಕ್ಷರಾದ ಸೊಲೊಮನ್ ಆಲ್ವಾರಿಸ್, ಸಹಕಾರ್ಯದರ್ಶ ಲೂಯಿಸ್ ಡಿಸೋಜ, ಲೆಸ್ಲಿ ಕರ್ನೆಲಿಯೋ, ವಲಯ ಅಧ್ಯಕ್ಷರಾದ ರೋಸಿ ಕ್ವಾಡ್ರಸ್, ಜುಲಿಯೆಟ್ ಡಿಸೋಜ, ವಿಲ್ಸನ್ ಡಿ ಆಲ್ಮೇಡಾ, ವಿಲ್ಸನ್ ಮಸ್ಕರೇನಸ್, ಶಾಂತಿ ಪಿರೇರಾ ಉಪಸ್ಥಿತರಿದ್ದರು.ನಿಯೋಜಿತ ಅಧ್ಯಕ್ಷ ರೊನಾಲ್ಡ್ ಆಲ್ಮೇಡಾ ಸ್ವಾಗತಿಸಿದರು. ಕಾರ್ಯದರ್ಶಿ ಓಲಿವಿಯಾ ಡಿಮೆಲ್ಲೊ ವಂದಿಸಿದರು. ಹರ್ಷಿತ್ ಫರ್ನಾಂಡಿಸ್ ಕಾರ್ಯಕ್ರಮ ನಿರೂಪಿಸಿದರು.