ಸಾರಾಂಶ
ಪಠ್ಯಪುಸ್ತಕದಲ್ಲಿನ ಪಾಠಗಳಿಗಿಂತ ಮಕ್ಕಳು, ಕಣ್ಣಲ್ಲಿ ನೋಡಿ, ಗ್ರಹಿಸಿಕೊಳ್ಳುವ ಸಾಮರ್ಥ್ಯವನ್ನು ಹೆಚ್ಚು ಹೊಂದಿರುತ್ತಾರೆ. ಈ ನಿಟ್ಟಿನಲ್ಲಿ ಚಟುವಟಿಕೆಗಳ ಆಧಾರದಲ್ಲಿ ಅವರನ್ನು ಸಜ್ಜುಗೊಳಿಸಲಾಗಿದ್ದು, ಕಲಿಕಾ ಸಾಮರ್ಥ್ಯವು ವೃದ್ಧಿಯಾಗಿದೆ ಎಂದರು.
ವಿಜಯಪುರ: ಕೋವಿಡ್ ನಂತರ ಮಕ್ಕಳಲ್ಲಿ ಕಲಿಕಾ ಸಾಮರ್ಥ್ಯವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಮಕ್ಕಳು ಕಲಿತಿರುವ ವಿದ್ಯೆಯನ್ನು ಪ್ರತಿಬಿಂಬಿಸುವ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ಕ್ಷೇತ್ರ ಸಂಪನ್ಮೂಲ ವ್ಯಕ್ತಿ ದಿನೇಶ್ ಕುಮಾರ್ ಹೇಳಿದರು.
ಪಟ್ಟಣದ ಸರಕಾರಿ ಮಾದರಿ ಬಾಲಕಿಯರ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಯೋಜನೆ ಮಾಡಲಾಗಿದ್ದ ವಿಜಯಪುರ ಕ್ಲಸ್ಟರ್ ಮಟ್ಟದ ಎಫ್.ಎಲ್.ಎನ್. ಆಧಾರಿತ ಕಲಿಕಾ ಹಬ್ಬ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ಪಠ್ಯಪುಸ್ತಕದಲ್ಲಿನ ಪಾಠಗಳಿಗಿಂತ ಮಕ್ಕಳು, ಕಣ್ಣಲ್ಲಿ ನೋಡಿ, ಗ್ರಹಿಸಿಕೊಳ್ಳುವ ಸಾಮರ್ಥ್ಯವನ್ನು ಹೆಚ್ಚು ಹೊಂದಿರುತ್ತಾರೆ. ಈ ನಿಟ್ಟಿನಲ್ಲಿ ಚಟುವಟಿಕೆಗಳ ಆಧಾರದಲ್ಲಿ ಅವರನ್ನು ಸಜ್ಜುಗೊಳಿಸಲಾಗಿದ್ದು, ಕಲಿಕಾ ಸಾಮರ್ಥ್ಯವು ವೃದ್ಧಿಯಾಗಿದೆ ಎಂದರು.
ಕಲಿಕಾ ಹಬ್ಬದಲ್ಲಿ ಮಕ್ಕಳಿಗೆ ಗಟ್ಟಿಯಾಗಿ ಓದುವುದು, ಬರೆಯುವುದು, ಕಥೆ ಹೇಳುವುದು, ಪೋಷಕರ ಸಹ ಸಂಬಂಧದೊಂದಿಗೆ ಕಥೆ ಕಟ್ಟುವುದು, ರಸಪ್ರಶ್ನೆ, ಜ್ಞಾಪಕ ಪರೀಕ್ಷೆ, ಮೋಜಿನ ಗಣಿತ ಮುಂತಾದ ಸ್ಪರ್ಧೆಗಳನ್ನು ನಡೆಸಲಾಯಿತು. ಸ್ಪರ್ಧೆಗಳಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರಗಳೊಂದಿಗೆ ಬಹುಮಾನಗಳನ್ನು ವಿತರಿಸಲಾಯಿತು. ಒಟ್ಟು ೧೨೦ ಮಂದಿ ವಿದ್ಯಾರ್ಥಿಗಳು ಭಾಗವಹಿಸಿದ್ದರು.ಕ್ಲಸ್ಟರ್ ಮಟ್ಟದ ವಿವಿಧ ಶಾಲೆಗಳ ವಿದ್ಯಾರ್ಥಿಗಳು ಈ ಹಬ್ಬದ ಸಂಭ್ರಮದಲ್ಲಿ ಪಾಲ್ಗೊಂಡಿದ್ದರು. ಶಾಲೆಗಳ ಮುಖ್ಯಶಿಕ್ಷಕರು, ಪೋಷಕರು ಮಕ್ಕಳನ್ನು ಪ್ರೋತ್ಸಾಹಿಸಿದರು. ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಕೃಷ್ಣರಾಮ್, ಮುಖ್ಯಶಿಕ್ಷಕರಾದ ಮನೋಹರ್, ಸುಜಾತಮ್ಮ, ಸುಭಾಷ್ ಬಿ. ದಾಸರ್, ನಾರಾಯಣಸ್ವಾಮಿ, ಮುನಿಪಾಪ, ಶ್ರೀರಾಮ್, ನರಸಿಂಹಮೂರ್ತಿ, ಗುಲ್ಜಾರ್ ಫಾತಿಮಾ, ಎಂ.ವಿನೋದ ಸೇರಿ ಶಿಕ್ಷಕರು ಪೋಷಕರು ಹಾಜರಿದ್ದರು.