ಕನ್ನಡಪ್ರಭ ವಾರ್ತೆ ಮೈಸೂರು
ವಿದ್ಯಾರ್ಥಿಗಳಲ್ಲಿ ಅಡಗಿರುವ ಪ್ರತಿಭೆ, ಸೃಜನಶೀಲತೆ ಹಾಗೂ ಬರವಣಿಗೆಯ ಸಾಮರ್ಥ್ಯವನ್ನು ಹೊರತರುವ ಅತ್ಯುತ್ತಮ ವೇದಿಕೆಯೇ ಭಿತ್ತಿಪತ್ರಿಕೆ ಎಂದು ಹುಣಸೂರಿನ ಡಿ. ದೇವರಾಜ ಅರಸು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಇಂಗ್ಲಿಷ್ ವಿಭಾಗದ ಸಹ ಪ್ರಾಧ್ಯಾಪಕಿ ಡಾ. ಸೌಮ್ಯಾ ತಿಳಿಸಿದರು.ನಗರದ ಎಂಎಂಕೆ ಮತ್ತು ಎಸ್ ಡಿಎಂ ಮಹಿಳಾ ಮಹಾವಿದ್ಯಾಲಯದ ಸಾಹಿತ್ಯ ಸಮಿತಿಯು ಆಯೋಜಿಸಿದ್ದ ಭಿತ್ತಿಪತ್ರಿಕೆಗಳ ಪ್ರದರ್ಶನವನ್ನು ಉದ್ಘಾಟಿಸಿ ಮಾತನಾಡಿದ ಅವರು, ಇಂತಹ ಚಟುವಟಿಕೆಗಳು ವಿದ್ಯಾರ್ಥಿಗಳಲ್ಲಿ ಓದುವ ಹವ್ಯಾಸ, ವಿಮರ್ಶಾತ್ಮಕ ಚಿಂತನೆ, ಸಂಶೋಧನಾ ಮನೋಭಾವ ಮತ್ತು ಸೃಜನಾತ್ಮಕ ಬರವಣಿಗೆಯನ್ನು ಬೆಳೆಸುವುದರ ಜೊತೆಗೆ, ಭವಿಷ್ಯದಲ್ಲಿ ಲೇಖಕರು, ಕವಿಗಳು ಹಾಗೂ ಸಂಶೋಧಕರಾಗಿ ಬೆಳೆಯಲು ಪ್ರೇರಣೆ ನೀಡುತ್ತವೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲೆ ಪ್ರೊ.ಎನ್. ಭಾರತಿ ಮಾತನಾಡಿ, ಪಠ್ಯಕ್ರಮದ ಜೊತೆಗೆ ಸಾಹಿತ್ಯ, ಕಲೆ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳು ಸಕ್ರಿಯವಾಗಿ ತೊಡಗಿಸಿಕೊಳ್ಳುವುದು ವ್ಯಕ್ತಿತ್ವ ವಿಕಸನಕ್ಕೆ ಅತ್ಯಗತ್ಯ ಎಂದು ಹೇಳಿದರು.ಕಾಲೇಜಿನ ವಿವಿಧ ವಿಭಾಗಗಳು ಸಿದ್ಧಪಡಿಸಿದ ಭಿತ್ತಿಪತ್ರಿಕೆಗಳಲ್ಲಿ ವಿದ್ಯಾರ್ಥಿಗಳ ಲೇಖನಗಳು, ಕವನಗಳು, ಪ್ರಬಂಧಗಳು, ಚಿತ್ರಕಲೆ, ವೈಜ್ಞಾನಿಕ ಮಾಹಿತಿ, ಸಾಮಾಜಿಕ ಜಾಗೃತಿ ಲೇಖನಗಳು ಹಾಗೂ ಕನ್ನಡ, ಸಂಸ್ಕೃತ ಮತ್ತು ಇಂಗ್ಲಿಷ್ ಭಾಷೆಗಳ ಸಾಹಿತ್ಯ ರಚನೆಗಳು ಆಕರ್ಷಕವಾಗಿ ಪ್ರದರ್ಶನಗೊಂಡು ಎಲ್ಲರ ಪ್ರಶಂಸೆಗೆ ಪಾತ್ರವಾಯಿತು.
ಐಕ್ಯೂಎಸಿ ಸಂಯೋಜಕಿ ಕೆ.ಎಸ್. ಸುಕೃತಾ, ಕಾರ್ಯಕ್ರಮದ ಸಂಯೋಜಕ ಡಾ. ಶ್ರೀನಿವಾಸ್, ಸಮಿತಿಯ ಸದಸ್ಯರಾದ ಉಜ್ವಲಾ ಎಸ್. ಶೆಟ್ಟಿ, ಡಾ.ಕೆ.ಎನ್. ಅರುಣ್ ಕುಮಾರ್, ಆರ್. ವಚನಾ, ಎಂ.ಕೆ. ಸಚಿನ್, ವಿದ್ಯಾರ್ಥಿ ಸಂಯೋಜಕರಾದ ಬಿ.ಎಂ. ತಷ್ಮಾ, ಎಚ್.ಜೆ. ಉಷಾ, ಜಿ. ಸುರಕ್ಷಾ ಇದ್ದರು.