ಕೃಷಿ ಉತ್ಪನ್ನಗಳ ದರ ನಿಗದಿಗೆ ಕಾನೂನು ಚೌಕಟ್ಟು ಅಗತ್ಯ : ಡಾ.ಟಿ.ಎನ್.ಪ್ರಕಾಶ್ ಕಮ್ಮರಡಿ

| Published : Apr 07 2024, 01:47 AM IST / Updated: Apr 07 2024, 08:12 AM IST

ಕೃಷಿ ಉತ್ಪನ್ನಗಳ ದರ ನಿಗದಿಗೆ ಕಾನೂನು ಚೌಕಟ್ಟು ಅಗತ್ಯ : ಡಾ.ಟಿ.ಎನ್.ಪ್ರಕಾಶ್ ಕಮ್ಮರಡಿ
Share this Article
  • FB
  • TW
  • Linkdin
  • Email

ಸಾರಾಂಶ

ಚುನಾವಣೆ ಹತ್ತಿರವಾಗುತ್ತಿದ್ದಂತೆ ಭಾವನಾತ್ಮಕ ವಿಚಾರಗಳು, ವಿಭಜಕ ನಿರೂಪಣೆಗಳು ಸ್ವಲ್ಪ ಹಿಂದೆ ಸರಿದು ರೈತರ ಗಂಭೀರ ಸಮಸ್ಯೆಗಳು ಮುನ್ನೆಲೆಗೆ ಬರುತ್ತಿರುವುದು ಸ್ವಾಗತಾರ್ಹ. ಆದರೂ, ಅನುಷ್ಠಾನದ ಬಗ್ಗೆ ಸ್ಪಷ್ಟ ಭರವಸೆ ಪಡೆಯುವುದು ಅಗತ್ಯ

 ಚಿಕ್ಕಬಳ್ಳಾಪುರ : ಕೃಷಿ ಉತ್ಪನ್ನಕ್ಕೆ ಲಾಭದಾಯಕ ಧಾರಣೆಯನ್ನು ಕಾನೂನಿನ ಚೌಕಟ್ಟಿಗೆ ತಂದು ಕನಿಷ್ಠ ಬೆಂಬಲ ಬೆಲೆಯನ್ನು ಖಾತ್ರಿಗೊಳಿಸಬೇಕು ಮತ್ತು ಬೆಂಬಲ ಬೆಲೆ ಖಾತರಿಸಿಕೊಳ್ಳುವ ನಿಟ್ಟಿನಲ್ಲಿ ರೈತರು ಜಾಗೃತರಾಗಬೇಕು ಎಂದು ಕೃಷಿ ಆರ್ಥಿಕ ತಜ್ಞ, ಕರ್ನಾಟಕ ಕೃಷಿ ಬೆಲೆ ಆಯೋಗದ ಮಾಜಿ ಅಧ್ಯಕ್ಷ ಡಾ.ಟಿ.ಎನ್. ಪ್ರಕಾಶ್ ಕಮ್ಮರಡಿ ತಿಳಿಸಿದರು.ಶುಕ್ರವಾರ ನಗರದ ಪತ್ರಕರ್ತರ ಭವನದಲ್ಲಿ ರೈತ ಸಂಘದಿಂದ ಏರ್ಪಡಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅ‍ವರು, ಕೃಷಿ ಉತ್ಪನ್ನಕ್ಕೆ ಲಾಭದಾಯಕ ಧಾರಣೆಯನ್ನು ಕಾನೂನು ಚೌಕಟ್ಟಿಗೆ ತಂದು ಕನಿಷ್ಠ ಬೆಂಬಲ ಬೆಲೆಯನ್ನು ಖಾತ್ರಿಗೊಳಿಸಬೇಕು ಎಂಬುದು ರೈತರ ಹಕ್ಕೊತ್ತಾಯ ಎಂದರು.

ಈ ಒತ್ತಾಯಕ್ಕೆ ರಾಷ್ಟ್ರೀಯ ಕಾಂಗ್ರೆಸ್ ಬೆಂಬಲ ನೀಡಿದೆ. ರೈತರಿಂದ ಬೆಂಬಲ ಬೆಲೆಯಲ್ಲೇ ದ್ವಿದಳ ಧಾನ್ಯ, ಜೋಳ, ಹತ್ತಿ ಕೊಳ್ಳಲು ಸಿದ್ಧವಿರುವುದಾಗಿ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ತಿಳಿಸಿದೆ. ಚುನಾವಣೆ ಹತ್ತಿರವಾಗುತ್ತಿದ್ದಂತೆ ಭಾವನಾತ್ಮಕ ವಿಚಾರಗಳು, ವಿಭಜಕ ನಿರೂಪಣೆಗಳು ಸ್ವಲ್ಪ ಹಿಂದೆ ಸರಿದು ರೈತರ ಗಂಭೀರ ಸಮಸ್ಯೆಗಳು ಮುನ್ನೆಲೆಗೆ ಬರುತ್ತಿರುವುದು ಸ್ವಾಗತಾರ್ಹ. ಆದರೂ, ಅನುಷ್ಠಾನದ ಬಗ್ಗೆ ಸ್ಪಷ್ಟ ಭರವಸೆ ಪಡೆಯುವುದು ಅಗತ್ಯ ಎಂದರು.

ಆಹಾರ ಭದ್ರತೆ ಕಾಯ್ದೆ :  ಸರ್ಕಾರದ ಈ ಮಧ್ಯಪ್ರವೇಶದಿಂದಾಗಿ ಮಾರುಕಟ್ಟೆ ವ್ಯವಸ್ಥೆ ದಾರಿ ತಪ್ಪುತ್ತದೆ. ಸರ್ಕಾರದ ಮೇಲೆ ಖರೀದಿಯ ಹೊರೆ ಜಾಸ್ತಿಯಾಗುತ್ತದೆ, ಇತ್ಯಾದಿ ಇಲ್ಲಸಲ್ಲದ ಆತಂಕ ಅನುಮಾನಗಳನ್ನು ಮುಕ್ತ ಮಾರುಕಟ್ಟೆಯ ಅಂಧ ಪ್ರತಿಪಾದಕರು ವ್ಯಕ್ತಪಡಿಸುತ್ತಿರುವರು. ಉದಾರಿಕರಣ, ಜಾಗತೀಕರಣ, ಖಾಸಗಿಕರಣದ ಧಟ್ಟ ವಾತಾವರಣದಲ್ಲಿ ನಮ್ಮ ಕೃಷಿಯ ಮೇಲಿನ ಜಾಗತಿಕ ಮತ್ತು ಪ್ರಾದೇಶಿಕ ಮಟ್ಟದ ವ್ಯಾಪಾರ ಒಪ್ಪಂದಗಳ ದುಷ್ಪರಿಣಾಮಗಳನ್ನು ಮೊದಲು ಸರಿಪಡಿಸಬೇಕಾಗಿದೆ. ಎಲ್ಲಕ್ಕಿಂತ ಮುಖ್ಯವಾಗಿ 2013ರ "ರಾಷ್ಟ್ರೀಯ ಆಹಾರ ಭದ್ರತೆ ಕಾಯ್ದೆ "ಯ ಸದುಪಯೋಗ ಮುಖ್ಯವಾಗಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ರೈತ ಸಂಘ ಹಾಗೂ ಹಸಿರು ಸೇನೆಯ ರಾಜ್ಯಾಧ್ಯಕ್ಷ ಜಿ ಜಿ ಹಳ್ಳಿ ನಾರಾಯಣಸ್ವಾಮಿ, ಜಿ.ವಿ. ಶ್ರೀನಿವಾಸ್, ಹೆಚ್. ಮುನಿವೆಂಕಟರೆಡ್ಡಿ ಇದ್ದರು.