ಶತಮಾನದ ಇತಿಹಾಸ ಇರುವ ಕಸಾಪಗೆ ಉತ್ತರ ಕನ್ನಡದಲ್ಲಿ ಕಟ್ಟಡ ಇಲ್ಲ ಎನ್ನುವುದು ದುರಂತ.

ಹೊನ್ನಾವರ ತಾಲೂಕಾ ೧೨ನೇ ಕನ್ನಡ ಸಾಹಿತ್ಯ ಸಮ್ಮೇಳನ

ಕನ್ನಡ ಪ್ರಭ ವಾರ್ತೆ ಹೊನ್ನಾವರ

ಶತಮಾನದ ಇತಿಹಾಸ ಇರುವ ಕಸಾಪಗೆ ಉತ್ತರ ಕನ್ನಡದಲ್ಲಿ ಕಟ್ಟಡ ಇಲ್ಲ ಎನ್ನುವುದು ದುರಂತ. ರಾಜಕಾರಣಿಗಳ ಬೆನ್ನತ್ತಿ ಆದ್ಯತೆ ಮೇಲೆ ಭವನ ಮಾಡಿಕೊಳ್ಳಿ. ಗ್ರಂಥಾಲಯಗಳಿಗೆ ಪುಸ್ತಕ ಬರುತ್ತಿಲ್ಲ. ಜನಪ್ರತಿನಿಧಿಗಳಿಗೆ ಹೇಳುವ ದಾರ್ಶ್ಟ್ಯ ತೋರಬೇಕು ಎಂದು ಸಾಹಿತಿ ಡಾ. ವಸಂತಕುಮಾರ್ ಪೆರ್ಲ ಹೇಳಿದರು.

ತಾಲೂಕಿನ‌ ಅರೇಅಂಗಡಿಯ ಎಸ್.ಎಸ್.ಕೆ.ಪಿ. ಶಿಕ್ಷಣ ಸಂಸ್ಥೆಯ ಆವಾರದಲ್ಲಿ ನಡೆದ ಹೊನ್ನಾವರ ತಾಲೂಕಾ ೧೨ನೇ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು.

ಸಾಹಿತ್ಯ ಕ್ಷೇತ್ರ ಈಗ ಎಲ್ಲರಿಂದ ಅನಾದರಕ್ಕೆ‌ ಒಳಗಾಗಿದೆ. ಶಾಲೆಗಳಲ್ಲಿ ಶಿಕ್ಷಕರ ನೇಮಕ ಆಗುತ್ತಿಲ್ಲ. ಇಂಗ್ಲಿಷ್ ಮಾಧ್ಯಮ ಶಾಲೆಯ ವ್ಯಾಮೋಹ ಯಾಕೆ ಬೇಕು.‌ ಅದರಿಂದ ಲಾಭ ಇಲ್ಲ ಎಂದಾದರೆ ಬಿಡಬೇಕು ಎಂದು ನುಡಿದರು. ನಮ್ಮ ಆಡುನುಡಿಯನ್ನು ಬೆಳೆಸಲು ಪ್ರಯತ್ನಿಸುತ್ತಿಲ್ಲ. ಪತ್ರಿಕೆಗಳು ಕನ್ನಡ ಉಳಿಸಲು ಹೆಚ್ಚು ಪ್ರಚಾರ ಮಾಡುತ್ತಿವೆ ಇದು ಶ್ಲಾಘನೀಯ. ನಾವು ಮಕ್ಕಳಿಗೆ ನಮ್ಮ ಸಂಸ್ಕೃತಿಯ ಬಗ್ಗೆ ತಿಳಿಸುತ್ತಿಲ್ಲ. ನಮ್ಮ ಬದುಕಿನ ಬಗ್ಗೆ ತಿಳಿಸಲು ಆಗದ ಹಂತದಲ್ಲಿದ್ದೇವೆ. ಇದರ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದರು.ಶಾಸಕ ದಿನಕರ ಶೆಟ್ಟಿ ಪುಸ್ತಕ ಮಳಿಗೆ ಉದ್ಘಾಟಿಸಿ ಮಾತನಾಡಿ, ಮುಂದಿನ ಅಧಿವೇಶನದಲ್ಲಿ ಕಸಾಪದ ಸಮಸ್ಯೆಗಳ ಬಗ್ಗೆ ಧ್ವನಿ ಎತ್ತುತ್ತೇನೆ. ಸರ್ಕಾರ ಕನ್ನಡ ಸಮ್ಮೇಳನವನ್ನು ನಡೆಸಲು ಹಣ ನೀಡಬೇಕು.ಈ ಬಗ್ಗೆ ಧ್ವನಿ ಎತ್ತಲಿದ್ದೇನೆ ಹಾಗೂ ಹೊನ್ನಾವರದಲ್ಲಿ ಸಾಹಿತ್ಯ ಭವನ ಮಾಡಿಕೊಡುತ್ತೇನೆ ಎಂಬ ಭರವಸೆ ನೀಡಿದರು. ಕನ್ನಡಿಗರು ನತದೃಷ್ಟವಂತರು. ನಾವು ಕನ್ನಡ‌ಭಾಷೆ ಉಳಿಸಿಕೊಳ್ಳುವ ಅನಿವಾರ್ಯತೆಯಲ್ಲಿದ್ದೇವೆ. ಕನ್ನಡ ಮಾತನಾಡಲು ಹಿಂಜರಿಯಬಾರದು. ಕನ್ನಡದ ಮೇಲೆ ಅಭಿಮಾನ ಇಟ್ಟುಕೊಳ್ಳಿ ಎಂದು ಹೇಳಿದರು. ಸಮ್ಮೇಳನಾಧ್ಯಕ್ಷ ಸುರೇಶ್ ನಾಯ್ಕ ಮಾತನಾಡಿ, ಹೊನ್ನಾವರಕ್ಕೆ ಹಲವು ಐತಿಹ್ಯವಿದೆ. ತಾಲೂಕಿನ‌ ಪ್ರವಾಸಿ ತಾಣ, ಕಲೆ, ಸಂಸ್ಕೃತಿಯ ಬಗ್ಗೆ ವಿಸ್ತಾರವಾಗಿ ಮಾತನಾಡಿದರು. ಸಾಹಿತ್ಯ ಲೋಕವು ಜನರಲ್ಲಿ ಆಸಕ್ತಿ ಬೆಳಸಬೇಕು. ಗ್ರಂಥಾಲಯದ ಬಗ್ಗೆ ಒಲವು ಮೂಡಿಸಬೇಕು. ತಾಲೂಕಿನ ೨೯ ಗ್ರಾಪಂಗಳಲ್ಲಿ ಗ್ರಂಥಾಲಯ ಬಂದಿದೆ. ಓದುವ ಹವ್ಯಾಸ ಜನರಲ್ಲಿ ಹೆಚ್ಚಾಗಬೇಕು. ಅಲ್ಲದೆ ಜಾತಿ, ಧರ್ಮ ಮೀರಿ ಸಾಹಿತಿಗಳು ಸಾಹಿತ್ಯ ರಚಿಸುವಂತಾಗಬೇಕು ಎಂದರು.

ಸುಮುಖಾನಂದ ಜಲವಳ್ಳಿಯವರ ಎಳೆಮಿಂಚು ಕವನ ಸಂಕಲನ, ಅಪ್ಪಂದ್ ಮಕ್ಳೆ ಕೇಳಿ ಪದಗಳು, ಇಡಗುಂಜಿ ಪ್ರೌಢಶಾಲೆಯ ೯ನೇ ತರಗತಿ ವಿದ್ಯಾರ್ಥಿ ನಿಶಾಂತ್ ನಾಯ್ಕ ಮಹಿಮೆ ಬರೆದ ನನ್ನ ನೆಲದ ಕಥೆ, ರಾಮಗೊಂಡ ಅವರ ಕ್ರಾಂತಿವೀರ ಕಾನೂರು ಕೋಟೆಯ ಚೆನ್ನಗೊಂಡ ಪುಸ್ತಕ ಬಿಡುಗಡೆಗೊಳಿಸಲಾಯಿತು. ಉಪನ್ಯಾಸಕ ಪ್ರಶಾಂತ್ ಹೆಗಡೆ ಮೂಡಲಮನೆ ಪುಸ್ತಕ ಪರಿಚಯಿಸಿದರು. ನಿಕಟಪೂರ್ವ ಸಮ್ಮೇಳನಾಧ್ಯಕ್ಷ ಹೊನ್ನಪ್ಪಯ್ಯ ಗುನಗಾ, ಜಿಲ್ಲಾ ಗೌರವ ಕಸಾಪ ಕಾರ್ಯದರ್ಶಿ ಪಿ.ಆರ್. ನಾಯ್ಕ, ಜಿಲ್ಲಾ ಗೌರವ ಕಸಾಪ ಕೋಶಾಧ್ಯಕ್ಷ ಮುರ್ತುಜಾ ಹುಸೇನ್, ಕಾರ್ಯನಿರ್ವಾಹಕ ಅಧಿಕಾರಿ ತಾಪಂ ಹೊನ್ನಾವರ ಪುಟ್ಟೇಗೌಡ, ಸ.ಪ್ರಾ.ಶಾ.ಶಿ ಅಧ್ಯಕ್ಷ ಎಂ.ಜಿ. ನಾಯ್ಕ, ತಾಲೂಕು ಗ್ಯಾರಂಟಿ ಯೋಜನೆ ಅಧ್ಯಕ್ಷ ಅಣ್ಣಪ್ಪ ನಾಯ್ಕ, ಕರವೇ ತಾಲೂಕಾಧ್ಯಕ್ಷ ಮಂಜುನಾಥ್ ಗೌಡ, ವಿನೋದ್ ಅಣ್ವೇಕರ್ ಶುಭ ಹಾರೈಸಿದರು. ಹೊಸಾಕುಳಿ ಗ್ರಾಪಂ ಅಧ್ಯಕ್ಷ ಸುರೇಶ್ ಶೆಟ್ಟಿ, ಸಾಹಿತಿ ರೋಹಿದಾಸ ನಾಯ್ಕ, ಕ್ಷೇತ್ರ ಶಿಕ್ಷಣಾಧಿಕಾರಿ ವಿನಾಯಕ ಅವಧಾನಿ, ತಾ.ಕಾ.ನಿ.ಪತ್ರಕರ್ತರ ಸಂಘದ ಅಧ್ಯಕ್ಷ ವಿನಾಯಕ ಮೇಸ್ತ, ತಾಲೂಕು ಶಿಕ್ಷಣ ಸಮನ್ವಯಾಧಿಕಾರಿ ಜಯಶ್ರೀ ನಾಯ್ಕ ಮೇಲೆ ಉಪಸ್ಥಿತರಿದ್ದರು.ಎಸ್ಎಸ್‌ಕೆಪಿ ಶಾಲಾ ವಿದ್ಯಾರ್ಥಿನಿಯರು ನಾಡಗೀತೆ ಹಾಡಿದರು. ಕಸಾಪ ತಾಲೂಕಾಧ್ಯಕ್ಷ ಎಸ್.ಎಚ್. ಗೌಡ ಸ್ವಾಗತಿಸಿದರು. ಕಸಾಪ ಜಿಲ್ಲಾಧ್ಯಕ್ಷ ಬಿ.ಎನ್. ವಾಸರೆ ಆಶಯ ನುಡಿಗಳನ್ನಾಡಿದರು. ಸುಧೀಶ್ ನಾಯ್ಕ‌ ನಿರೂಪಿಸಿದರು. ಗಜಾನನ ನಾಯ್ಕ ವಂದಿಸಿದರು.