ಸಾರಾಂಶ
ಕನ್ನಡಪ್ರಭ ವಾರ್ತೆ ಹಾಸನ
ನಗರದ ಸಿಟಿ ಬಸ್ ನಿಲ್ದಾಣ ರಸ್ತೆ ಬಳಿ ಇರುವ ಪೆಂಡಾಲ್ ಗಣಪತಿಯ 71ನೇ ವರ್ಷದ ಪ್ರತಿಷಾಪನಾ ಮಹೋತ್ಸವಕ್ಕೆ ಗಣ್ಯರ ಮತ್ತು ಭಕ್ತರ ಎದುರು ಬುಧವಾರ ಮಧ್ಯಾಹ್ನ ಸುಮಾರು ೧೨:೩೫ರ ವೇಳೆಗೆ ಮಹಾಮಂಗಳಾರತಿಯೊಂದಿಗೆ ಅದ್ಧೂರಿಯಾಗಿ ಚಾಲನೆ ದೊರಕಿತು.ಕ್ಷೇತ್ರದ ಶಾಸಕ ಎಚ್.ಪಿ. ಸ್ವರೂಪ್ ಮಾಧ್ಯಮದೊಂದಿಗೆ ಮಾತನಾಡಿ, ನಾಡಿನ ಸಮಸ್ತ ಜನತೆಗೆ ಮೊದಲು ಗೌರಿ ಗಣೇಶ ಹಬ್ಬದ ಶುಭಾಶಯಗಳನ್ನು ಕೋರುತ್ತೇನೆ. ಎಲ್ಲರಿಗೂ ಆರೋಗ್ಯ, ಆಯಸ್ಸು ನೀಡಿ ಕಾಪಾಡಲಿ, ಮಳೆ, ಬೆಳೆ, ಸುಖ, ಶಾಂತಿಯನ್ನು ಹಾಸನದ ಜನತೆಗೆ ಕೊಡಲೆಂದು ಗಣೇಶನಲ್ಲಿ ಪ್ರಾರ್ಥಿಸಲಾಗಿದೆ ಎಂದರು. ಬಹಳ ಇತಿಹಾಸವಿರುವ ಪೆಂಡಾಲ್ ಗಣಪತಿ ಸೇವಾ ಸಮಿತಿಗೆ ೭೧ನೇ ವರ್ಷದ ಗಣೇಶ ಪ್ರತಿಷ್ಠಾಪನೆ ನೆರವೇರಿದೆ. ೨೪ ದಿನಗಳ ಕಾಲ ಪ್ರತಿದಿನ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿದೆ. ಸಾರ್ವಜನಿಕರು ಪ್ರತಿದಿನ ಆಗಮಿಸಿ ಈ ಕಾರ್ಯಕ್ರಮಗಳನ್ನು ಯಶಸ್ವಿಗೊಳಿಸುವಂತೆ ಮನವಿ ಮಾಡಿದರು.
ಶ್ರೀ ಗಣಪತಿ ಸೇವಾ ಸಮಿತಿ ಅಧ್ಯಕ್ಷ ಡಾ. ಎಚ್. ನಾಗರಾಜು ಮಾತನಾಡಿ, ಹಬ್ಬದ ಶುಭಾಶಯ ಕೋರಿದರು. ಹಾಸನ ನಗರದ ಸಿಟಿ ಬಸ್ ನಿಲ್ದಾಣ ಬಳಿ ಇರುವ ಶ್ರೀ ಗಣಪತಿ ಸೇವಾ ಸಮಿತಿ ೭೧ನೇ ವರ್ಷದ ಗಣೇಶ ಪ್ರತಿಷ್ಠಾಪನೆ ಆಗಿದೆ. ಸೆಪ್ಟಂಬರ್ ೧೯ರ ಶುಕ್ರವಾರದವರೆಗೂ ಗಣೇಶ ಮೂರ್ತಿ ಇಡಲಾಗುತ್ತದೆ. ಈ ವರ್ಷ ೧೦ ಅಡಿಯ ಇಲಿ ಮೇಲೆ ಕುಳಿತಿರುವ ಮಹಾಗಣಪತಿಯ ಪ್ರತಿಷ್ಠಾಪಿಸಲಾಗಿದೆ. ಪ್ರತಿದಿನ ಸಾಂಸ್ಕೃತಿಕ, ಧಾರ್ಮಿಕ, ಸಾಮಾಜಿಕ ಹಾಗೂ ಸಾರ್ವಜನಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಪ್ರತಿ ದಿನ ಮಧ್ಯಾಹ್ನ ೧೨:೩೦ಕ್ಕೆ ಮಹಾಮಂಗಳಾರತಿ ಪ್ರಸಾದ ವಿನಿಯೋಗ ಇರುತ್ತದೆ. ಬಸ್ ನಿಲ್ದಾಣದ ಗಣಪತಿ ಇತಿಹಾಸವುಳ್ಳದ್ದಾಗಿದ್ದು, ಹಾಸನ ತಾಲೂಕು ಎಲ್ಲಾ ಕಡೆ ಉತ್ತಮ ಮಳೆಯಾಗಿ ರೈತರು ಸೇರಿದಂತೆ ಎಲ್ಲರೂ ಸಂತೋಷದಿಂದ ಬದುಕಬೇಕೆಂದು ಗಣಪತಿ ಬಳಿ ಪ್ರಾರ್ಥಿಸಲಾಗಿದೆ. ಈ ಗಣಪತಿ ವೀಕ್ಷಣೆ ಮಾಡಲು ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಲು ಸ್ಥಳಿಯ ಗ್ರಾಮೀಣ ಪ್ರದೇಶ ಮತ್ತು ನೆರೆಹೊರೆಯ ಜಿಲ್ಲೆಗಳಿಂದ ಬರುತ್ತಾರೆ. ಹೆಣ್ಣು ಮಕ್ಕಳಿಗೆ ರಂಗೋಲಿ ಸ್ಪರ್ಧೆ, ವಿವಿಧ ಸಾಂಸ್ಕೃತಿಕ ಚಟುವಟಿಕೆಗಳಿರಬಹುದು, ವೇಷಭೂಷಣ ಸ್ಪರ್ಧೆ, ಸಂಗೀತ, ನಾಟಕ, ಜನಪದ ಗೀತೆ, ಭಜನೆ ಕಾರ್ಯಕ್ರಮ ಸೇರಿದಂತೆ ವಿವಿಧ ಕಲೆಗಳ ಪ್ರದರ್ಶನ ಮಾಡಿ ಉತ್ತಮ ಪ್ರದರ್ಶನಕ್ಕೆ ಬಹುಮಾನ ವಿತರಣೆ ಕಾರ್ಯಕ್ರಮವನ್ನು ಕೂಡ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.ಕೊನೆ ದಿನ ಬೆಳಿಗ್ಗೆ ೧೦ ಗಂಟೆಗೆ ಶ್ರೀ ಮಹಾಗಣಪತಿಯ ಮತ್ತು ಶ್ರೀ ಸ್ವರ್ಣಗೌರಿಯವರ ಉತ್ಸವವು ಪ್ರಾರಂಭವಾಗಿ ಸ್ಥಳೀಯ ಹಾಗೂ ಪರಸ್ಥಳಗಳಿಂದ ಆಗಮಿಸುವ ಸಾಂಸ್ಕೃತಿಕ, ಜಾನಪದ ಕಲಾತಂಡಗಳೊಂದಿಗೆ ಪ್ರತಿ ವರ್ಷದಂತೆ ಈ ವರ್ಷವು ಕೂಡ ಪ್ರಮುಖ ರಾಜಬೀದಿಗಳಲ್ಲಿ ಸಂಚರಿಸಿ ಸಂಜೆ ೬:೩೦ಕ್ಕೆ ದೇವಿಗೆರೆ ತಲುಪಲಿದೆ. ರಾತ್ರಿ ೮ ಗಂಟೆ ಸುಮಾರಿಗೆ ದೇವಿಗೆರೆಯಲ್ಲಿ ತೆಪ್ಪೋತ್ಸವದೊಂದಿಗೆ ವಿಸರ್ಜಿಸಲಾಗುತ್ತದೆ. ಸೆಪ್ಟೆಂಬರ್ ೨೩ರಂದು ಮಂಗಳವಾರ ೧೨.೩೦ಕ್ಕೆ ಮಹಾಗಣಪತಿ ಮಹೋತ್ಸವದ ಅಂಗವಾಗಿ ಪ್ರಸಾದ ರೂಪದ ಅನ್ನಸಂತರ್ಪಣೆಯನ್ನು ನಡೆಸಲಾಗುವುದು ಎಂದು ತಿಳಿಸಿದರು.
ಮಹಾನಗರ ಪಾಲಿಕೆ ಮೇಯರ್ ಹೇಮಲತಾ ಕಮಲ್ ಕುಮಾರ್ ಮಾತನಾಡಿ, ಗೌರಿಗಣೇಶ ಹಬ್ಬವನ್ನು ಎಲ್ಲರೂ ಸಂತೋಷ, ಭಕ್ತಿಯಿಂದ ಆಚರಿಸಲಿ ಎಂದು ಶುಭಾಶಯ ಕೋರುತ್ತೇನೆ. ನಗರದ ಅಭಿವೃದ್ಧಿಗೆ ನನ್ನ ಅವಧಿಯಲ್ಲಿ ಸಾಧ್ಯವಾದಷ್ಟು ಪ್ರಯತ್ನ ಪಡುತ್ತೇನೆ ಎಂದರು.ಇದೇ ವೇಳೆ ಶ್ರೀ ಗಣಪತಿ ಸೇವಾ ಸಮಿತಿ ಕಾರ್ಯದರ್ಶಿ ಚನ್ನವೀರಪ್ಪ, ಎಚ್.ಎಂ. ಸುರೇಶ್, ಲೀಲಾಕುಮಾರ್, ವೈ.ಎಸ್. ಮುರುಗೇಂದ್ರ, ಎಚ್.ಟಿ. ಶೇಖರ್, ಗಿರೀಶ್ ಚನ್ನವೀರಪ್ಪ, ಎಚ್.ಎಸ್. ಅನಂತನಾರಾಯಣ, ಎನ್.ಎಸ್. ಶಂಕರರಾವ್, ಎಚ್.ಪಿ. ಕಿರಣ್, ಎಂ.ಕೆ. ಕಮಲ್ ಕುಮಾರ್, ಸಿ.ಆರ್. ಶಂಕರ್, ಎಚ್.ಡಿ. ದೀಪಕ್, ಕಸಾಪ ಮಾಜಿ ಅಧ್ಯಕ್ಷ ರವಿನಾಕಲಗೂಡು, ನಗರಸಭೆ ಮಾಜಿ ಅಧ್ಯಕ್ಷೆ ನೇತ್ರಾವತಿ ಗಿರೀಶ್, ಕಾಂಗ್ರೆಸ್ ಮುಖಂಡ ಗೌಡಗೆರೆ ಪ್ರಕಾಶ್ ಇತರರು ಉಪಸ್ಥಿತರಿದ್ದರು.