ಸಮಾಜದ ಏಳಿಗೆಯಲ್ಲಿ ಮಹಿಳೆಯರ ಪಾತ್ರ ಮಹತ್ತರವಾಗಿದೆ ಎಂದು ಶಾಸಕ ಎ. ಮಂಜು ಹೇಳಿದರು. ಮಹಿಳಾ ದಸರಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಇತಿಹಾಸದುದ್ದಕ್ಕೂ ಮಹಿಳೆಯರ ಕೊಡುಗೆ ಅಪಾರ. ಎಲ್ಲರ ಏಳಿಗೆಗೆ ಹಾಗೂ ಸಮಾಜದ ಬದಲಾವಣೆ ಮಹಿಳೆಯರೇ ಕಾರಣ. ಮಹಿಳೆಯರನ್ನು ಗೌರವಿಸುವ ಪುರುಷ ಸಮಾಜ ಬೆಳವಣಿಗೆ ಹೊಂದಲಿದೆ ಎಂದರು. ಸಿಡಿಪಿಒ ವೆಂಕಟೇಶ್ ಮಾತನಾಡಿ, ತಾಲೂಕಿನಲ್ಲಿ 110 ಅಂಗನವಾಡಿ ಕೇಂದ್ರಗಳಿಗೆ ಸರ್ಕಾರ ಎಲ್ಇಡಿ ಟಿವಿ, ಅಂಗನವಾಡಿ ಕಾರ್ಯಕರ್ತೆಯರಿಗೆ ಮೊಬೈಲ್ ಮತ್ತು ಸಮವಸ್ತ್ರ ನೀಡಿದೆ ಎಂದರು.
ಕನ್ನಡಪ್ರಭ ವಾರ್ತೆ ಅರಕಲಗೂಡು
ಸಮಾಜದ ಏಳಿಗೆಯಲ್ಲಿ ಮಹಿಳೆಯರ ಪಾತ್ರ ಮಹತ್ತರವಾಗಿದೆ ಎಂದು ಶಾಸಕ ಎ. ಮಂಜು ಹೇಳಿದರು.ಪಟ್ಟಣದ ಶಿಕ್ಷಕರ ಭವನದಲ್ಲಿ ಮಹಿಳಾ ಮತ್ತ ಮಕ್ಕಳ ಅಭಿವೃದ್ಧಿ ಇಲಾಖೆ, ಶಿಶು ಅಭಿವೃದ್ಧಿ ಯೋಜನೆ ಹಾಗೂ ಲೋಕೋಪಯೋಗಿ ಇಲಾಖೆ ಸಹಯೋಗದಲ್ಲಿ ಅರಕಲಗೂಡು ದಸರಾ ಅಂಗವಾಗಿ ಆಯೋಜಿಸಿದ್ದ ಮಹಿಳಾ ದಸರಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಇತಿಹಾಸದುದ್ದಕ್ಕೂ ಮಹಿಳೆಯರ ಕೊಡುಗೆ ಅಪಾರ. ಎಲ್ಲರ ಏಳಿಗೆಗೆ ಹಾಗೂ ಸಮಾಜದ ಬದಲಾವಣೆ ಮಹಿಳೆಯರೇ ಕಾರಣ. ಮಹಿಳೆಯರನ್ನು ಗೌರವಿಸುವ ಪುರುಷ ಸಮಾಜ ಬೆಳವಣಿಗೆ ಹೊಂದಲಿದೆ ಎಂದರು.
ಡಿವೈಎಸ್ಪಿ ಶಾಲು ಮಾತನಾಡಿ, ಸಮಾಜಕ್ಕೆ ನಮ್ಮ ಪಾತ್ರ ಏನು ಎಂಬುದನ್ನು ಅರಿತು ಧರ್ಮ ಮತ್ತು ನ್ಯಾಯದ ಹಾದಿಯಲ್ಲಿ ಸಾಗಬೇಕು. ಮಹಿಳೆಯರು ಕಡ್ಡಾಯವಾಗಿ ಶಿಕ್ಷಣ ಗಳಿಸಬೇಕು. ಅಪ್ರಾಪ್ತ ವಯಸ್ಸಿನಲ್ಲಿ ಮದುವೆಯಾಗುವುದನ್ನು ತಡೆಗಟ್ಟಬೇಕು ಎಂದರು.ಜಿಲ್ಲಾ ಪ್ರಸೂತಿ ತಜ್ಞೆ ಡಾ. ಸಾವಿತ್ರಿ ಮಾತನಾಡಿ, ದೇಶದಲ್ಲಿ ಪ್ರತಿ ನಾಲ್ಕು ನಿಮಿಷಕ್ಕೆ ಒಬ್ಬರಿಗೆ ಸ್ತನ ಕ್ಯಾನ್ಸರ್ ಪತ್ತೆಯಾಗುತ್ತಿದೆ. ಇದನ್ನು ಪ್ರಾಥಮಿಕ ಹಂತದಲ್ಲೇ ಪತ್ತೆ ಹಚ್ಚಿದರೆ ಮುಂದಾಗುವ ಸಾವು ನೋವಿನ ಅಪಾಯದಿಂದ ಪಾರಾಗಬಹುದು. ವೈದ್ಯರ ಸಲಹೆ ಮೇರೆಗೆ ಮಹಿಳೆಯರು ಗರ್ಭ ನಿರೋಧಕ ನಿಯಮಗಳನ್ನು ಸರಿಯಾಗಿ ಪಾಲಿಸಬೇಕು ಎಂದು ತಿಳಿಸಿದರು.
ಸಿಡಿಪಿಒ ವೆಂಕಟೇಶ್ ಮಾತನಾಡಿ, ತಾಲೂಕಿನಲ್ಲಿ 110 ಅಂಗನವಾಡಿ ಕೇಂದ್ರಗಳಿಗೆ ಸರ್ಕಾರ ಎಲ್ಇಡಿ ಟಿವಿ, ಅಂಗನವಾಡಿ ಕಾರ್ಯಕರ್ತೆಯರಿಗೆ ಮೊಬೈಲ್ ಮತ್ತು ಸಮವಸ್ತ್ರ ನೀಡಿದೆ ಎಂದರು.ಚಿಲುಮೆ ಮಠದ ಶ್ರೀ ಜಯದೇವ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ಮಹಿಳಾ ಮತ್ತ ಮಕ್ಕಳ ಅಭಿವೃದ್ಧಿ ಇಲಾಖೆ ಜಿಲ್ಲಾ ಉಪ ನಿರ್ದೇಶಕ ಧರಣಿ ಕುಮಾರ್, ಗ್ರೇಡ್- 2 ತಹಸೀಲ್ದಾರ್ ಸಿ. ಸ್ವಾಮಿ, ಲೋಕೋಪಯೋಗಿ ಇಲಾಖೆ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಬಿಂಧು, ಸಬ್ ಇನ್ಸ್ಪೆಕ್ಟರ್ ಕಾವ್ಯ, ತಾಲೂಕು ಆರೋಗ್ಯಾಧಿಕಾರಿ ಡಾ. ಪುಷ್ಪಲತಾ, ತಾಲೂಕು ಮಹಿಳಾ ಒಕ್ಕಲಿಗರ ಸಂಘದ ಅಧ್ಯಕ್ಷೆ ರಶ್ಮಿ, ಮಹಿಳಾ ಒಕ್ಕೂಟದ ಸದಸ್ಯೆ ಭಾರತಿ, ಪವಿತ್ರ ಇತರರಿದ್ದರು. ಕೇರಳಾಪುರ ಅಂಗನವಾಡಿ ಕೇಂದ್ರದ ಕಾರ್ಯಕರ್ತೆ ನೇತ್ರವಾತಿ ಸ್ಯಾಕ್ಸೋ ವಾದನ ನುಡಿಸಿದರು. ಕಾರ್ಯಕ್ರಮಕ್ಕೆ ಕಳಸ ಹೊತ್ತು ಮೆರವಣಿಗೆಯಲ್ಲಿ ಸಾಗಿದ ಮಹಿಳೆಯರು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು.