ಸಾರಾಂಶ
ಕನ್ನಡಪ್ರಭ ವಾರ್ತೆ ಕೊಲ್ಹಾರ
ಕಳೇದ 24-25 ವರ್ಷಗಳ ಹಿಂದೆ ಗ್ರಾಮದಿಂದ ಏಕಾಏಕಿ ನಾಪತ್ತೆಯಾಗಿದ್ದ ವ್ಯಕ್ತಿ ಕಾಶಿಯ ಗಂಗಾ ನದಿಯಲ್ಲಿ ಸ್ನಾನ ಮಾಡುವಾಗ ಗ್ರಾಮಸ್ಥರ ಮುಂದೆ ಪ್ರತ್ಯಕವಾಗುವ ಮೂಲಕ ಅಚ್ಚರಿ ಮೂಡಿಸಿದ್ದಾನೆ. ಈ ಮೂಲಕ ಪ್ರಯಾಗರಾಜ್ನ ಮಹಾ ಕುಂಭಮೇಳ ಆ ವ್ಯಕ್ತಿಯ ಕುಟುಂಬಕ್ಕೆ ಸಂತಸ ಮೂಡಿಸಿದೆ.ತಾಲೂಕಿನ ಮೂಲತಃ ಬಳೂತಿ ಗ್ರಾಮದ ರಮೇಶ ಚೌಧರಿ(42) 24 ವರ್ಷಗಳ ಬಳಿಕ ಪತ್ತೆಯಾಗಿ ಅಚ್ಚರಿ ಮೂಡಿಸಿರುವ ವ್ಯಕ್ತಿ. ಹೌದು, ರಮೇಶ ಚೌದರಿ
ಕಳೇದ 2001ರಲ್ಲಿ ಮನೆಯಿಂದ ಏಕಾಏಕಿಯಾಗಿ ಮನೆಯಲ್ಲಿ ಹೇಳದೆ ಕೇಳದೇ ನಾಪತ್ತೆಯಾಗಿದ್ದ ರಮೇಶ, ನಂತರ ಮನೆಯವರಿಗೆ ಸಿಕ್ಕಿರಲಿಲ್ಲ. ಇತ್ತೀಚೆಗೆ ಪ್ರಯಾಗ್ ರಾಜ್ಗೆ ತೆರಳಿದ್ದ ಬಳೂತಿ ಗ್ರಾಮದ ಮಲ್ಲನಗೌಡ ಪಾಟೀಲ್ ಸೇರಿದಂತೆ ಇತರರು ಮಹಾಕುಂಭ ಮೇಳದಲ್ಲಿ ಭಾಗಿಯಾಗಿ ಕಾಶಿಗೆ ತೆರಳಿದ್ದರು. ಅಲ್ಲಿ ಸಾಧು ವೇಷದಲ್ಲಿದ್ದ ರಮೇಶ ಚೌಧರಿ ಮಲ್ಲನಗೌಡ ಪಾಟೀಲ್ ಕಣ್ಣಿಗೆ ಬಿದ್ದಿದ್ದಾನೆ. ಆಗ ಮಲ್ಲನಗೌಡರು ರಮೇಶನನ್ನು ಕನ್ನಡದಲ್ಲಿ ಮಾತನಾಡಿಸಿದಾಗ ಆತ ಕನ್ನಡದಲ್ಲಿಯೇ ತನ್ನ ಪೂರ್ವಾಪರ, ತಂದೆ, ತಾಯಿ ಹಾಗೂ ಕುಟುಂಬಸ್ಥರ ಹೆಸರುಗಳನ್ನು ಹೇಳಿದ್ದಾನೆ. ಅಲ್ಲದೇ, ಕೆಲವುದಿನಗಳ ಕಾಲ ಮನೆ ಬಿಟ್ಟು ಬಿಹಾರದ ಪಾಟ್ನಾದಲ್ಲಿ ಎಚ್ಪಿಎಸ್ ಕಂಪನಿಯಲ್ಲಿ ಡಾಂಬರೀಕರಣ ಕೆಲಸ ಮಾಡುತ್ತಿದ್ದನಂತೆ. ಕಳೆದೆ ಒಂದೆರಡು ಬಾರಿ ಊರು ನೆನಪಾಗಿ ವಾಪಸ್ ಬರೋ ವಿಫಲ ಪ್ರಯತ್ನ ಮಾಡಿದ್ದನಂತೆ, ಆದರೆ, ಅದು ಸಾಧ್ಯವಾಗದೇ ಬಂದಿರಲಿಲ್ಲ. ಭಯ ಒತ್ತಡದ ಕಾರಣ ವಾಪಸ್ ಬರೋಕೆ ಆಗಿರಲಿಲ್ಲವಂತೆ ಎಂದು ಹೇಳಿಕೊಂಡಿದ್ದಾನೆ. ರಮೇಶ ಚೌದರಿ ಸಿಕ್ಕ ಬಳಿಕ ಮಲ್ಲನಗೌಡರು ಆತನ ಮನೆಯವರಿಗೆ ವಿಡಿಯೋ ಕಾಲ್ ಮಾಡಿ ಕುಟುಂಬಸ್ಥರ ಜೊತೆಗೆ ಮಾತನಾಡಿಸಿದ್ದಾರೆ. ಬಳಿಕ, ತಮ್ಮ ವಾಹನದಲ್ಲೇ ವಾಪಸ್ ಬಳೂತಿ ಗ್ರಾಮಕ್ಕೆ ರಮೇಶನನ್ನು ಕರೆದುಕೊಂಡು ಬಂದಿದ್ದಾರ. ತವರಿಗೆ ಆಗಮಿಸಿದ ಆತನನ್ನು ಗ್ರಾಮಸ್ಥರು ಹಾಗೂ ಕುಟುಂಬದವರು ಸಂಭ್ರಮಿಂದಲೇ ಬರಮಾಡಿಕೊಂಡಿದ್ದಾರೆ. ನಾಪತ್ತೆಯಾಗಿದ್ದ ಮಗ ಮರಳಿ ಮನೆಗೆ ಸೇರುವಂತೆ ಮಾಡಿದ್ದೆ ಕುಂಭಮೇಳ ಎಂದು ಕುಟುಂಬದವರು ಸಂತಸಪಟ್ಟಿದ್ದಾರೆ.ರಮೇಶ ಚೌದರಿ, ಸಂಗಪ್ಪ ಚೌದರಿ ಸೇರಿ ಮೂವರು ಸಹೋದರರು. ಈ ಪೈಕಿ ಓರ್ವ ಸಹೋದರ ಮೃತಪಟ್ಟಿದ್ದು, ಬಳೂತಿಯಲ್ಲಿಯೇ ವಾಸವಾಗಿದ್ದಾರೆ. ರಮೇಶ ಚೌದರಿ ಗ್ರಾಮವನ್ನು ತೊರೆಯುವ ಮುನ್ನ ಗ್ರಾಮದ ಬಳಿ ಮುಳವಾಡ ಏತ ನೀರಾವರಿ ಯೋಜನೆಯ ಕಾಮಗಾರಿ ನಡೆಯುತ್ತಿತ್ತು. ಎಚ್ಪಿಎಸ್ ಕಂಪನಿ ಯೋಜನೆಯ ಕಾಮಗಾರಿ ನಡೆಸುತ್ತಿಲ್ಲದೇ, ಈತ ಕಂಪನಿಯ ಕಾರ್ ಚಾಲಕನಾಗಿ ಕೆಲಸ ಮಾಡುತ್ತಿದ್ದ. ಮೇಲಾಗಿ ಕಂಪನಿ ಅಧಿಕಾರಿಗಳ ನಂಬಿಕೆ ಗಳಿಸಿದ್ದ. ಕಾಮಗಾರಿ ಮುಗಿದ ಬಳಿಕ 2001 ರಲ್ಲಿ ಕಂಪನಿ ಬೇರೆ ರಾಜ್ಯಕ್ಕೆ ತೆರಳಿದಾಗ ಅವರು ಈತನನ್ನು ಜೊತೆಗೆ ಕರೆದುಕೊಂಡು ಹೋಗಿದ್ದರು. ಆಗ ಈತ ಮನೆಯಲ್ಲಿ ಹೇಳದೇ ಅವರ ಜೊತೆಗೆಯೇ ಹೋಗಿದ್ದಾನೆ. ಮನೆಯವರು ಹುಡುಕಿದರೂ ಈತ ಸಿಕ್ಕಿರಲಿಲ್ಲ. ಆದರೆ, ಈಗ ಅಚಾನಕ್ ಆಗಿ ಕುಂಭಮೇಳಕ್ಕೆ ತೆರಳಿದ್ದ ಗ್ರಾಮಸ್ಥರ ಕೈಗೆ ಸಿಕ್ಕು ಮತ್ತೆ ಗೂಡು ಸೇರಿದ್ದಾನೆ.
ಕೋಟ್ಆಗ ರಮೇಶ ಚಿಕ್ಕವನಿದ್ದ ಕಂಪನಿಯಲ್ಲಿ ಚಾಲಕನಾಗಿ ಕೆಲಸ ಮಾಡುತ್ತಿದ್ದ. ಸಣ್ಣವರಿದ್ದಾಗ ಆತ ಹೇಳದೇ ಕೇಳದೇ ಹೋಗಿದ್ದ, ಎಚ್ಪಿಎಸ್ ಕಂಪನಿಯ ಅಧಿಕಾರಿಗಳೊಂದಿಗೆ ಅವಿನಾಭಾವ ಸಂಬಂಧವಿದ್ದರಿಂದ ಅವರೇ ಕರೆದುಕೊಂಡು ಹೋಗಿರಬಹುದು. ಆತ ಇಲ್ಲ ಅಂತ ಅಂದುಕೊಂಡಿದ್ದೇವು. ಭಗವಂತನ ಪುಣ್ಯ ಮತ್ತೆ ಸಿಕ್ಕಿದ್ದಾನೆ. ಆತ ಕಾಶಿಯಲ್ಲಿ ಸಿಕ್ಕ ವಿಷಯ ಗೊತ್ತಾಗಿ ಸಂತೋಷವಾಯಿತು. ಹೀಗಾಗಿ, ಆತನನ್ನು ಕರೆದುಕೊಂಡು ಬರುವಂತೆ ಹೇಳಿದೇವು.
ಸಂಗಪ್ಪ ಚೌಧರಿ, ರಮೇಶ ಸಹೋದರ