ಸಾರಾಂಶ
ಸಂಸ್ಕಾರ ಮತ್ತು ಸಂಸ್ಕೃತಿ ಇರುವ ವ್ಯಕ್ತಿ, ಸಮುದಾಯದ ಜನ, ಮನ ಗೆಲ್ಲುತ್ತಾರೆ ಎಂದು ಆರೋಗ್ಯ ಇಲಾಖೆ ನಿವೃತ್ತ ಅಧಿಕಾರಿ ಜಿ.ಕೆ.ಕುಲಕರ್ಣಿ ಹೇಳಿದರು.
ಸಂವಾದ ಕಾರ್ಯಕ್ರಮ
ಕನ್ನಡಪ್ರಭ ವಾರ್ತೆ ಹರಿಹರಸಂಸ್ಕಾರ ಮತ್ತು ಸಂಸ್ಕೃತಿ ಇರುವ ವ್ಯಕ್ತಿ, ಸಮುದಾಯದ ಜನ, ಮನ ಗೆಲ್ಲುತ್ತಾರೆ ಎಂದು ಆರೋಗ್ಯ ಇಲಾಖೆ ನಿವೃತ್ತ ಅಧಿಕಾರಿ ಜಿ.ಕೆ.ಕುಲಕರ್ಣಿ ಹೇಳಿದರು.
ನಗರದ ಕೋಟೆ ಬಡಾವಣೆಯಲ್ಲಿ ಚಿಂತನ ಪ್ರತಿಷ್ಠಾನ ಮತ್ತು ಪ್ರಗತಿಪರ ಬರಹಗಾರರ ಒಕ್ಕೂಟದಿಂದ ಆಯೋಜಿಸಿದ್ದ, ಸಂವಾದ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದರು.ದೇಶ, ಸಮಾಜ ಪ್ರಗತಿ ಸಾಧಿಸಲು ಸಂಸ್ಕಾರ ಮುಖ್ಯ. ಸಂಸ್ಕಾರದಿಂದ ಸಂಸ್ಕೃತಿ, ಸಾಹಿತ್ಯ ಬೆಳೆಯುತ್ತದೆ ಎಂದು ಹೇಳಿದರು.
ಬಸವಣ್ಣನವರ ವಚನಗಳಲ್ಲಿ ಸಂಸ್ಕಾರ, ಸಂಸ್ಕೃತಿ ಹಾಗೂ ಸಾಹಿತ್ಯವಿತ್ತು. ಡಿವಿಜಿ ಮತ್ತು ಕುವೆಂಪು, ಬೇಂದ್ರೆ ಅವರು ಅದನ್ನು ಕರಗತ ಮಾಡಿಕೊಂಡಿದ್ದರು. ಅವರ ಸಾಹಿತ್ಯದಲ್ಲಿ ಮನುಷ್ಯ ಸಹಜ ಗುಣ ಇದೆ. ಸಮಾಜದಲ್ಲಿ ನೊಂದವರಿಗೆ, ದುರ್ಬಲರಿಗೆ ಸಹಾಯ ಮಾಡುವುದು ಕರ್ತವ್ಯವನ್ನಾಗಿ ಮಾಡಿಕೊಳ್ಳಬೇಕು ಎಂಬ ಸಂಸ್ಕಾರ ಇದೆ. ಮನುಷ್ಯನಿಗೆ ಸಂಸ್ಕಾರ ಸಿಕ್ಕರೆ ಉತ್ತಮ ಮಾನವನಾಗಲು ಸಾಧ್ಯ ಎಂದರು.ಸಂಸ್ಕಾರ ಮತ್ತು ಸಂಸ್ಕೃತಿ ಮತ್ತು ಸಾಹಿತ್ಯದ ಅರಿವು ಇರುವ ವ್ಯಕ್ತಿ ಎತ್ತರಕ್ಕೆ ಏರಬಲ್ಲ ಹಾಗೂ ಜೀವನದಲ್ಲಿ ಏನಾದರೂ ಸಾಧನೆ ಮಾಡಬಲ್ಲ. ಎಲ್ಲರೂ ಹೃದಯವಂತರಾಗಿ ವಿಶಾಲ ಮನೋಭಾವನೆ ಬೆಳಿಸಿಕೊಳ್ಳಿ. ಎಲ್ಲರನ್ನೂ ಪ್ರೀತಿಸಿ ಆರೋಗ್ಯವಂತ, ಸದೃಢ ಸಮಾಜ ಕಟ್ಟಲು ಸಹರಿಸಬೇಕೆಂದರು.
ನಂತರ ಜಿ.ಕೆ.ಕುಲಕರ್ಣಿ ಅವರನ್ನು ಸತ್ಕರಿಸಲಾಯಿತು. ಸೌಮ್ಯ ಪ್ರಾರ್ಥಿಸಿದರು, ಚಿಂತನ ಪ್ರತಿಷ್ಠಾನದ ಸಂಚಾಲಕ ಸುಬ್ರಹ್ಮಣ್ಯ ನಾಡಿಗೇರ್ ಸ್ವಾಗತಿಸಿದರು, ನಾಗರತ್ನ ವಂದಿಸಿದರು, ಕಾರ್ಮಿಕ ಮುಖಂಡ ಎಚ್.ಕೆ.ಕೊಟ್ರಪ್ಪ, ಶಾಮಲಾ, ಮಂಜಮ್ಮ, ರಾಧಾ ಹನುಮಂತಪ್ಪ, ಚಂದನಾ ವೈ.ನೀಲಪ್ಪ ಅವರು ಕವಿತೆ ವಾಚಿಸಿದರು.