ತೆಲುಗು ಪ್ರಭಾವದ ನಡುವೆ ಕನ್ನಡದ ಕಂಪು

| Published : Feb 21 2025, 12:45 AM IST

ಸಾರಾಂಶ

ತೆಲುಗು ಪ್ರಾಬಲ್ಯವಿರುವ ಈ ಭಾಗದಲ್ಲಿ ಕನ್ನಡದ ಅಸ್ಮಿತೆಗಾಗಿ ಹಲವಾರು ಕನ್ನಡಪರ ಸಂಘಟನೆ,ಸಂಘ ಸಂಸ್ಥೆಗಳು ತಮ್ಮದೇ ಆದ ರೀತಿಯಲ್ಲಿ ಶ್ರಮಿಸುತ್ತಿವೆ. 70ರ ದಶಕದಲ್ಲಿ ಹೋಟೆಲ್ ಸುಬ್ರಮಣ್ಯರವರ ನೇತೃತ್ವದಲ್ಲಿ ಸಾಂಸ್ಕೃತಿಕವಾಗಿ ಆರಂಭವಾದ ಕನ್ನಡದ ಕೆಲಸಗಳು ನಂತರ ದಿನಗಳಲ್ಲಿ ನಾಡು, ನುಡು,ಭಾಷೆ,ನೆಲ,ಜಲಗಳಿಗಾಗಿ ನಿರಂತರವಾಗಿ ನಡೆಯುತ್ತಿವೆ.

ಕನ್ನಡಪ್ರಭ ವಾರ್ತೆ ಬಾಗೇಪಲ್ಲಿ

ತೆಲುಗು ಭಾಷೆ ಪ್ರಭಾವವಿರುವ ಈ ಭಾಗದಲ್ಲಿ ಕನ್ನಡ ಭಾಷೆಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಕನ್ನಡ ನಾಡು ನುಡಿ, ಜಲ,ಭಾಷೆ ಬಗ್ಗೆ ಅರಿವು ಮೂಡಿಸುವಂತಹ ಹೆಚ್ಚು ಹೆಚ್ಚು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕಾದ ಅಗತ್ಯವಿದೆ ಎಂದು ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಅಭಿಪ್ರಾಯ ವ್ಯಕ್ತಪಡಿಸಿದರು.

ತಾಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಪಟ್ಟಣದ ಸರ್ಕಾರಿ ಬಾಲಕಿಯರ ಶಾಲಾಸಂರ್ಕೀಣದಲ್ಲಿನ ಡಾ.ಎಚ್.ನರಸಿಹಯ್ಯ ಶತಮಾನೋತ್ಸವ ವೇಧಿಕೆಯಲ್ಲಿ ಆಯೋಜಿಸಲಾಗಿದ್ದ 7ನೇ ಬಾಗೇಪಲ್ಲಿ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಬಾಗೇಪಲ್ಲಿ ನೆರೆಯ ಆಂಧ್ರಪ್ರದೇಶದ ಗಡಿಗೆ ಹೊಂದಿಕೊಂಡಿರುವ ಹಿನ್ನಲೆಯಲ್ಲಿ ತೆಲುಗು ಪ್ರಭಾವ ಹೆಚ್ಚಾಗಿದೆಯಾದರೂ ಸಹ ಕನ್ನಡ ಭಾಷೆಯ ಮೇಲಿನ ಪ್ರೀತಿ ಪ್ರೇಮಕ್ಕೆ ಮಾತ್ರ ಯಾವುದೇ ಕೊರತೆ ಇಲ್ಲ, ಕನ್ನಡಕ್ಕೆ ಮೊದಲ ಆದ್ಯತೆ ನೀಡಬೇಕು ಜತೆಗೆ ಇತರ ಭಾಷೆಗಳ ಬಗ್ಗೆಯೂ ಗೌರವ ಇರಲಿ ಎಂದರು.

ಸಮ್ಮೇಳನಾಧ್ಯಕ್ಷ ಶಾಂತಮೂರ್ತಿ ಮಾತನಾಡಿ, ತೆಲುಗು ಪ್ರಾಬಲ್ಯವಿರುವ ಈ ಭಾಗದಲ್ಲಿ ಕನ್ನಡದ ಅಸ್ಮಿತೆಗಾಗಿ ಹಲವಾರು ಕನ್ನಡಪರ ಸಂಘಟನೆ,ಸಂಘ ಸಂಸ್ಥೆಗಳು ತಮ್ಮದೇ ಆದ ರೀತಿಯಲ್ಲಿ ಶ್ರಮಿಸುತ್ತಿವೆ. 70ರ ದಶಕದಲ್ಲಿ ಹೋಟೆಲ್ ಸುಬ್ರಮಣ್ಯರವರ ನೇತೃತ್ವದಲ್ಲಿ ಸಾಂಸ್ಕೃತಿಕವಾಗಿ ಆರಂಭವಾದ ಕನ್ನಡದ ಕೆಲಸಗಳು ನಂತರ ದಿನಗಳಲ್ಲಿ ನಾಡು, ನುಡು,ಭಾಷೆ,ನೆಲ,ಜಲಗಳಿಗಾಗಿ ನಿರಂತರವಾಗಿ ಹೋರಾಟಗಳನ್ನು ರೂಪಿಸುವ ಮೂಲಕ ಕನ್ನಡದ ಕಂಪನ್ನು ಎಲ್ಲೆಡೆ ಪಸರಿಸಲು ಪ್ರಯತ್ನಗಳು ನಡೆಯುತ್ತಿವೆ ಎಂದರು. ಈ ಭಾಗದಲ್ಲಿ ಯುವ ಜನತೆ ತಮ್ಮ ಬದುಕನ್ನು ಕಟ್ಟಿಕೊಳ್ಳಲು ನಗರಗಳಿಗೆ ವಲಸೆ ಹೋಗುವಂತಹ ಪರಿಸ್ಥಿತಿ ಇದ್ದು ಅದನ್ನು ತಪ್ಪಿಸಲು ಉದ್ಯೋಗ ಸೃಷ್ಟಿಗಾಗಿ ಕೈಗಾರಿಕೆಗಳು ಸ್ಥಾಪಿಸಬೇಕು. ಹಾಗೇಯೆ ಈ ಭಾಗದಲ್ಲಿ ರೈಲ್ವೆ ಸಂಪರ್ಕ ಕಲ್ಪಿಸಿ ಅಭಿವೃದ್ಧಿಗೆ ಒತ್ತು ನೀಡಬೇಕು ಎಂದು ಸರ್ಕಾರಕ್ಕೆ ಮನವಿ ಮಾಡಿದರು. ಸಮ್ಮೇಳನಾಧ್ಯಕ್ಷರ ಮೆರವಣಿಗೆ

ಪ್ರಸ್ತಾವಿಕವಾಗಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್‍ನ ಅಧ್ಯಕ್ಷ ಡಿ.ಎನ್ ಕೃಷ್ಣಾರೆಡ್ಡಿ, ತಹಸೀಲ್ದಾರ್ ಮನೀಷಾ ಎನ್ ಪತ್ರಿ, ಸಾಹಿತ್ಯ ಪರಿಷತ್‍ನ ಜಿಲ್ಲಾಧ್ಯಕ್ಷ ಡಾ.ಕೋಡಿ ರಂಗಪ್ಪ ಮಾತನಾಡಿದರು. ಇದಕ್ಕೂ ಮೊದಲು ಪಟ್ಟಣದ ಡಿವಿಜಿ ಮುಖ್ಯ ರಸ್ತೆಯಲ್ಲಿ ನೂರಾರು ಜನರ ಸಮ್ಮುಖದಲ್ಲಿ ಭುವನೇಶ್ವರಿ ಮಾತೆಯ ಮತ್ತು ಸಮ್ಮೇಳನಾಧ್ಯಕ್ಷರ ಮೆರವಣಿಗೆ ನಡೆಸಲಾಯಿತು.ಈ ಸಂದರ್ಭದಲ್ಲಿ ಪುರಸಭೆಯ ಅಧ್ಯಕ್ಷ ಎ.ಶ್ರೀನಿವಾಸ್, ಮಾಜಿ ಜಿಪಂ ಸದಸ್ಯ ನರಸಿಂಹಪ್ಪ, ತಾಲೂಕು ಕಸಾಪ ಪದಾಧಿಕಾರಿಗಳಾದ ಎ.ಜಿ.ಸುಧಾಕರ್, ಚಿಕ್ಕಕೈವಾರಮಯ್ಯ, ಬಾಣಾಲಪಲ್ಲಿ ಶ್ರೀನಿವಾಸ್, ರಾಜೇಶ್,ಮಣಿಕಂಠ,ಹನುಮಂತರೆಡ್ಡಿ,ಶಿವಪ್ಪ, ಕರವೇ ಸ್ವಾಭೀಮಾನಿ ಬಣದ ತಾಲೂಕು ಅಧ್ಯಕ್ಷ ಬಿಟಿಸಿ ಶೀನ, ಕರವೇ ಅಧ್ಯಕ್ಷ ಹರೀಶ್, ನಗರ ಘಟಕದ ಅಧ್ಯಕ್ಷ ಕೆ.ಶ್ರೀನಿವಾಸ್, ಬಿಸಿಎಂ ಇಲಾಖೆ ಅಧಿಕಾರಿ ಶಿವಪ್ಪ, ಸಿಡಿಪಿಒ ರಮಚಂದ್ರ, ಮುಖ್ಯಾಧಿಕಾರಿ ಶ್ರೀನಿವಾಸ್ ಮತ್ತಿತರರು ಇದ್ದರು.