ಸಾಹಿತ್ಯ ಮತ್ತು ಸಂಗೀತ ಮನುಷ್ಯನ ಚಿಂತನಾ ಶೈಲಿಯನ್ನು ಬದಲಿಸುವ ಶಕ್ತಿ ಹೊಂದಿವೆ. ಹಳೆಯ ಚಿತ್ರಗೀತೆಗಳ ಸಾಹಿತ್ಯ, ರಾಗ ಸಂಯೋಜನೆ ಹಾಗೂ ನಮ್ಮ ಜಾನಪದ ಸಂಸ್ಕೃತಿ ಉಳಿಸುವ ಅಗತ್ಯವಿದೆ.

ಗಾನಕೋಗಿಲೆ ಎಸ್.ಜಾನಕಿಗೆ ನಾದ ನಮನ

ಕೋಲಾರ: ಚಾಂದಿನಿ ಬಳಗದಿಂದ ತಾಲೂಕಿನ ಮೂರಾಂಡಹಳ್ಳಿ ಸಮೀಪದ ಪ್ರದೀಪ ಎಂಬುವವರ ಮನೆಯಲ್ಲಿ ಗಾನಕೋಗಿಲೆ ಎಸ್. ಜಾನಕಿಯವರಿಗೆ ಸಮರ್ಪಿತ ‘ನಾದ ನಮನ’ ಹಾಗೂ ರಸಸಂಜೆ ಸಂಗೀತ ಕಾರ್ಯಕ್ರಮ ನಡೆಯಿತು.

ಜಿಲ್ಲಾಧಿಕಾರಿ ಡಾ.ಎಂ.ಆರ್. ರವಿ ಉದ್ಘಾಟಿಸಿ ಮಾತನಾಡಿ, ಹುಣ್ಣಿಮೆ ರಾತ್ರಿ ಕುಟುಂಬ ಸಮೇತ ಸೇರಿ ಊಟ, ಪುಸ್ತಕ ಓದು ಹಾಗೂ ಸಂಗೀತದ ಮೂಲಕ ಆತ್ಮೀಯತೆ ಬೆಳೆಸುವ ಸಂಪ್ರದಾಯ ಅತ್ಯಂತ ಆರೋಗ್ಯಕರ. ಮೊಬೈಲ್ ಮತ್ತು ದೂರದರ್ಶನದಿಂದ ದೂರವಾಗಿ ಸಂಗೀತದ ಸವಿ ಅನುಭವಿಸುವ ಇಂತಹ ಕಾರ್ಯಕ್ರಮ ಸಮಾಜವನ್ನು ಮತ್ತಷ್ಟು ಬೆಸೆಯುತ್ತವೆ ಎಂದರು.

ದಾಂಪತ್ಯ ಜೀವನದಲ್ಲಿ ಪರಸ್ಪರ ಗೌರವದ ಮಹತ್ವ ವಿವರಿಸಿದ ಅವರು, ಡಾ.ರಾಜ್‌ಕುಮಾರ್ ಅವರ ಚಿತ್ರಗಳು ಮತ್ತು ಹಾಡುಗಳು ಬದುಕಿನ ಮೌಲ್ಯಗಳನ್ನು ಕಲಿಸಿವೆ ಎಂದು ಸ್ಮರಿಸಿದರು.

ಬೆಂಗಳೂರು ಉತ್ತರ ವಿವಿ ಕುಲಪತಿ ಪ್ರೊ.ಬಿ.ಕೆ.ರವಿ ಮಾತನಾಡಿ, ಸಾಹಿತ್ಯ ಮತ್ತು ಸಂಗೀತ ಮನುಷ್ಯನ ಚಿಂತನಾ ಶೈಲಿಯನ್ನು ಬದಲಿಸುವ ಶಕ್ತಿ ಹೊಂದಿವೆ. ಹಳೆಯ ಚಿತ್ರಗೀತೆಗಳ ಸಾಹಿತ್ಯ, ರಾಗ ಸಂಯೋಜನೆ ಹಾಗೂ ನಮ್ಮ ಜಾನಪದ ಸಂಸ್ಕೃತಿ ಉಳಿಸುವ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟರು.

ಎಸ್‌ಡಿಸಿ ಸಮೂಹ ಸಂಸ್ಥೆಗಳ ಮುಖ್ಯಸ್ಥೆ ಉಷಾ ಗಂಗಾಧರ್, ಯುವ ಗಾಯಕ ಹರ್ಷಿತ್, ನಾಗಶ್ರೀರ ಪ್ರತಿಭೆ ಮೆಚ್ಚಿ, ಸ್ಥಳೀಯ ಪ್ರತಿಭೆಗಳಿಗೆ ವೇದಿಕೆ ಕಲ್ಪಿಸುವ ಇಂತಹ ಕಾರ್ಯಕ್ರಮಗಳು ನಿರಂತರವಾಗಿ ನಡೆಯಬೇಕು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಗಾಯಕ ಸುಪ್ರೀತ್, ನಾಗಶ್ರೀ ಹಾಗೂ ಇತರ ಕಲಾವಿದರು ಎಸ್.ಜಾನಕಿ ಮತ್ತು ಡಾ. ರಾಜ್‌ಕುಮಾರ್‌ರ ಜನಪ್ರಿಯ ಯುಗಳ ಗೀತೆಗಳನ್ನು ಹಾಡಿ ಸಂಗೀತಪ್ರಿಯರನ್ನು ರಂಜಿಸಿದರು. ಇದೇ ವೇಳೆ ಜು. ೩೧ರಂದು ನಿವೃತ್ತಿಯಾಗಲಿರುವ ಜಿಲ್ಲಾಧಿಕಾರಿ ಡಾ.ಎಂ.ಆರ್. ರವಿಯವರನ್ನು ಸನ್ಮಾನಿಸಲಾಯಿತು. ಜೊತೆಗೆ ಗಾಯಕರನ್ನು ಗಣ್ಯರು ಅಭಿನಂದಿಸಿದರು.

ಕಾರ್ಯಕ್ರಮದಲ್ಲಿ ಪ್ರೇಮ್ ಕುಮಾರ್, ಪ್ರೊ.ಮುರಳೀಧರ್, ನವೀನ್ ಶೆಟ್ಟಿ, ಹರೀಶ್ ಶೆಟ್ಟಿ, ರಾಜ್‌ಕುಮಾರ್, ನಿತ್ಯಾನಂದ ಶೆಟ್ಟಿ, ಹರ್ಷಿತಾ, ಚಂದನ್, ಹರ್ಷರಾಜ್, ಪತ್ರಕರ್ತ ರಾಜೇಂದ್ರಸಿಂಹ ಇದ್ದರು. ವಾಣಿ ಮುರಳೀಧರ್ ಸ್ವಾಗತಿಸಿ, ಹರೀಶ್ ನಿರೂಪಿಸಿದರು.