ಕನ್ನಡಪ್ರಭ ವಾರ್ತೆ ಹಳಿಯಾಳ

ರಾಜ್ಯ ಸರ್ಕಾರದ ನೌಕರಿ ಹಾಗೂ ಕೇಂದ್ರ ಸರ್ಕಾರದ ಸಬ್ಸಿಡಿ ಸಾಲ ಸೌಲಭ್ಯವನ್ನು ಅತೀ ಸುಲಭವಾಗಿ ನೀಡುವುದಾಗಿ ಅಮಾಯಕರನ್ನು ವಂಚಿಸಿ ಹಣ ವಸೂಲಿ ಮಾಡುತ್ತಿದ್ದ ವಂಚಕರ ಜಾಲವೊಂದು ಹಳಿಯಾಳ ಪೊಲೀಸರ ಬಲೆಗೆ ಬಿದ್ದಿದೆ.

ಅನುಮಾನ ಬರದಂತೆ ಮೋಹಕ ಮಾತಿನಿಂದ ಮರಳು ಮಾಡುತ್ತಿದ್ದ ಪ್ರಮುಖ ಆರೋಪಿಗಳನ್ನು ಹಿಡಿಯುವಲ್ಲಿ ಹಳಿಯಾಳ ಪೋಲಿಸರು ಯಶಸ್ವಿಯಾಗಿ, ಎಲ್ಲಾ ವಂಚನೆಯ ಜಾಲವನ್ನು ಬಯಲು ಮಾಡಿದ್ದಾರೆ.

ವಂಚನೆ ಹೇಗೆ:

ಗರಡೊಳ್ಳಿ ಗ್ರಾಮದ ಯುವತಿ ಟ್ವಿನಿ ಡಿಸೋಜಾ ವಂಚನೆ ಜಾಲಕ್ಕೆ ಒಳಗಾಗಿದ್ದಳು. ವಂಚಕರ ಮಾತಿಗೆ ಮರುಳಾಗಿ ಇವಳು ₹1.51ಲಕ್ಷ ಕಳೆದುಕೊಂಡಿದ್ದಾಳೆಂದು ಟ್ವಿನಿಯ ತಂದೆ ಈಶೆಂತಿ ಡಿಸೋಜ ಹಳಿಯಾಳ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.


ಹಳಿಯಾಳದ ತಹಸೀಲ್ದಾರ ಕಚೇರಿಯಲ್ಲಿ ಡಾಟಾ ಆಪರೇಟರ್ ಹುದ್ದೆ ಖಾಲಿ ಇದೆ ಎಂದು ಹೇಳಿ, ಹಣ ನೀಡಿದರೇ ನೇಮಕ ಮಾಡಿಸುವುದಾಗಿ ನಂಬಿಸಿದ್ದಾರೆ. ಹೀಗೆ ಸುಳ್ಳು ಹೇಳಿ ಪೋನ್ ಪೇ ಮೂಲಕ ₹1.51ಲಕ್ಷ ಪಡೆದುಕೊಂಡಿದ್ದು, ಬಳಿಕ ಇನ್ನಷ್ಟು ಹಣ ₹80 ಸಾವಿರ ಬೇಡಿಕರೆಯನ್ನಿಟ್ಟಿದ್ದಾಗ ಈಶೆಂತಿ ನಿರಾಕರಿಸಿದ್ದಾರೆ. ಬಳಿಕ ಅನುಮಾನ ಬಂದು ದೂರು ದಾಖಲಿಸಿದ್ದಾರೆ.

ತನಿಖೆ ಆರಂಭಿಸಿದ ಹಳಿಯಾಳ ಪೋಲಿಸರು ಆರೋಪಿತರಾದ ಪಟ್ಟಣದ ಮಂಜುಳಾ ಈರಣ್ಣ ಮಾದರ (40) ಅವರನ್ನು ವಿಚಾರಣೆಗೊಳಪಡಿಸಿದಾಗ ಎಲ್ಲಾ ಪ್ರಕರಣ ಹೊರಬಿದ್ದಿದೆ.

ಆರೋಪಿತರು ಸರ್ಕಾರಿ ಉದ್ಯೋಗ, ಸಬ್ಸಿಡಿ ಸಾಲ ಸೌಲಭ್ಯ ನೀಡುವುದಾಗಿ ನಂಬಿಸಿ, ಜನರಿಂದ ಹಣ ವಸೂಲಿ ಮಾಡುತ್ತಿರುವುದು ಇವರ ಬ್ಯಾಂಕ್ ವ್ಯವಹಾರಗಳಿಂದ ದೃಡಪಟ್ಟಿದೆ. ಪ್ರಕರಣದ ಇನ್ನೋರ್ವ ಆರೋಪಿ ಆಕಾಶ ಪ್ರಭಾಕರ ಗಜಾಕೋಶ ನ್ಯಾಯಾಲಯಕ್ಕೆ ಶರಣಾಗಿದ್ದು, ಇಬ್ಬರಿಗೂ ನ್ಯಾಯಾಂಗ ಬಂಧನಕ್ಕೆ ವಿಧಿಸಲಾಗಿದೆ.

ಹಳಿಯಾಳ ಪಿಎಸ್‌ಐ ಬಸವರಾಜ ಮಬನೂರ ಮತ್ತು ಕ್ರೈಂ ಪಿಎಸ್‌ಐ ಕೃಷ್ಣಗೌಡ ಅರಕೇರಿ ನೇತೃತ್ವದಲ್ಲಿ ಸಿಬ್ಬಂದಿಗಳಾದ ಅಶೋಕ ಮೊರೆ, ವಿನೋದ ಜಿ.ಬಿ., ಮಂಜುನಾಥ ಬಾಲಿ, ಯಶೋಧ ಮುನವಳ್ಳಿ ಕಾರ್ಯಾಚರಣೆಯಲ್ಲಿದ್ದರು.