ಸಾರಾಂಶ
ಭತ್ತ ನಾಟಿಯಾದ ಎಂಟರಿಂದ ಹತ್ತು ದಿನದ ನಂತರ ಸಾಧನಕ್ಕೂ ಗದ್ದೆಗೂ ಒಂದು ಅಡಿ ಅಂತರ ಕಾಪಾಡಿಕೊಂಡು ಒಬ್ಬರು ಎಳೆದುಕೊಂಡುಹೋದರೆ ಭತ್ತದ ಬೆಳೆಯಲ್ಲಿ ಕಳೆ ನಿವಾರಣೆ ಅಂತರ ಬೇಸಾಯ, ಮಣ್ಣು ಬಗ್ಗುಡ ಮಾಡುವ ಮೂರು ಕಾರ್ಯಗಳಿಗೆ ನೆರವಾಗುತ್ತದೆ.
ಕನ್ನಡಪ್ರಭ ವಾರ್ತೆ ಮಂಡ್ಯ
ಭತ್ತದ ಕಳೆ ನಾಶಕ್ಕೊಂದು ಹೊಸ ಸಾಧನವನ್ನು ಕೃಷಿ ಕ್ಷೇತ್ರಕ್ಕೆ ಪರಿಚಯಿಸಲಾಗುತ್ತಿದೆ. ಇದೊಂದು ಸರಳವಾದ ಸರಪಳಿಯಂತಹ ಸಾಧನ. ಕಳೆನಾಶಕ, ಕಾರ್ಮಿಕರ ಅಗತ್ಯವಿಲ್ಲದೆ ಕಳೆಗಳನ್ನು ತೆಗೆಯಬಹುದು ಎಂದು ನಿರ್ಮಲ ಭೂಮಾತಾ ಟ್ರಸ್ಟ್ನ ಅಧ್ಯಕ್ಷ ಕೆ.ಜೆ.ಅನಂತರಾವ್ ಹೇಳಿದರು.ಭತ್ತ ನಾಟಿಯಾದ ಎಂಟರಿಂದ ಹತ್ತು ದಿನದ ನಂತರ ಸಾಧನಕ್ಕೂ ಗದ್ದೆಗೂ ಒಂದು ಅಡಿ ಅಂತರ ಕಾಪಾಡಿಕೊಂಡು ಒಬ್ಬರು ಎಳೆದುಕೊಂಡುಹೋದರೆ ಭತ್ತದ ಬೆಳೆಯಲ್ಲಿ ಕಳೆ ನಿವಾರಣೆ ಅಂತರ ಬೇಸಾಯ, ಮಣ್ಣು ಬಗ್ಗುಡ ಮಾಡುವ ಮೂರು ಕಾರ್ಯಗಳಿಗೆ ನೆರವಾಗುತ್ತದೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಈ ಯಂತ್ರಕ್ಕೆ ಯಾವುದೇ ಇಂಧನ, ತಂತ್ರಜ್ಞಾನ, ನಿರ್ವಹಣಾ ವೆಚ್ಚದ ಅವಶ್ಯಕತೆಯಿಲ್ಲ. ಯಾವ ಜೀವಸಂಕುಲಕ್ಕೂ ಹಾನಿ ಮಾಡುವುದಿಲ್ಲ. ವಾಯು ಮಾಲಿನ್ಯವಿಲ್ಲದ ಪರಿಸರಸ್ನೇಹಿ, ರೈತಸ್ನೇಹಿ ಸಾಧನ ಎಂದು ವಿವರಿಸಿದರು.ಕಳೆ ನಿವಾರಣೆ ಸಾಧನವನ್ನು ಜಗದೀಶ್ ಮತ್ತು ಸೊಳ್ಳೆಪುರ ಚಂದ್ರು ಅಭಿವೃದ್ಧಿಪಡಿಸಿದ್ದು, ಆನಂತರ ಅನಂತರಾವ್ ಅವರ ಭತ್ತದ ಗದ್ದೆಯಲ್ಲಿ ಪ್ರಾಯೋಗಿಕ ಬಳಕೆ ಮಾಡಿದಾಗ ಯಶಸ್ವಿಯಾದ ಸಾಧನವೆಂಬುದು ದೃಢಪಟ್ಟಿತು. ಭತ್ತದ ಕಳೆ ನಿರ್ವಹಣೆಯಲ್ಲಿ ಕಳೆ ನಾಶಕ ಪ್ರಯೋಗ ಮತ್ತು ಕಾರ್ಮಿಕರ ಅಗತ್ಯವಿಲ್ಲದೆ ಒಬ್ಬನೇ ರೈತ ಸ್ವಾವಲಂಬಿಯಾಗಿ ಭತ್ತ ಬೆಳೆಯುವುದಕ್ಕೆ ಅನುಕೂಲವಾಗಿದೆ. ಸಣ್ಣಪುಟ್ಟ ಹಿಡುವಳಿದಾರರಿಗೆ ವರದಾನವಾಗಿದೆ ಎಂದರು.
ಭತ್ತ ಕಳೆ ನಿರ್ವಹಣೆ ಸರಪಳಿ ಸಾಧನದ ಬೆಲೆಯನ್ನು ರೈತರಿಗೆ ಅನುಕೂಲವಾಗುವಂತೆ 5 ಸಾವಿರ ರು. ಮಾತ್ರ ನಿಗದಿಪಡಿಸಲಾಗಿದೆ. ಹೆಚ್ಚಿನ ಮಾಹಿತಿ ಬೇಕಿದ್ದಲ್ಲಿ 98441522845 ಹಾಗೂ 9448268216 ಸಂಖ್ಯೆಯನ್ನು ಸಂಪರ್ಕಿಸಬಹುದು ಎಂದು ಹೇಳಿದ್ದಾರೆ. ಗೋಷ್ಠಿಯಲ್ಲಿ ಉಪಾಧ್ಯಕ್ಷ ಮಹೇಶ್ಕುಮಾರ್, ಜಗದೀಶ್, ಸೊಳ್ಳೇಪುರ ಚಂದ್ರು ಇದ್ದರು.