ಕನ್ನಡ ಡಿಂಡಿಮ ಬಾರಿಸಿ ಸಪ್ತಪದಿ ತುಳಿದ ಜೋಡಿ!

| Published : Feb 27 2024, 01:31 AM IST / Updated: Feb 27 2024, 09:55 AM IST

Kannada

ಸಾರಾಂಶ

ಗಡಿನಾಡು ಬೆಳಗಾವಿಯಲ್ಲಿ ಕನ್ನಡದ ನವಜೋಡಿಯೊಂದು ಕನ್ನಡ ಸಂಭ್ರಮದಲ್ಲೇ ತಮ್ಮ ವಿವಾಹ ಮಾಡಿಕೊಳ್ಳುವ ಮೂಲಕ ಗಮನ ಸೆಳೆದಿದೆ.

ಕನ್ನಡಪ್ರಭ ವಾರ್ತೆ ಬೆಳಗಾವಿ

ಗಡಿನಾಡು ಬೆಳಗಾವಿಯಲ್ಲಿ ಕನ್ನಡದ ನವಜೋಡಿಯೊಂದು ಕನ್ನಡ ಸಂಭ್ರಮದಲ್ಲೇ ತಮ್ಮ ವಿವಾಹ ಮಾಡಿಕೊಳ್ಳುವ ಮೂಲಕ ಗಮನ ಸೆಳೆದಿದೆ.

ರಾಮತೀರ್ಥ ನಗರದಲ್ಲಿರುವ ಎಚ್‌.ಕೆ.ಪಾಟೀಲ ಕಲ್ಯಾಣ ಮಂಟಪದಲ್ಲಿ ನಡೆದ ವಿವಾಹ ಕಾರ್ಯಕ್ರಮ ಸಂಪೂರ್ಣವಾಗಿ ಕನ್ನಡಮಯವಾಗಿತ್ತು.

ದೀಪಕ ಮುಂಗರವಾಡಿ ಮತ್ತು ರಾಜೇಶ್ವರಿ ವಾಂಗಿ ಹಸೆಮಣೆಗೇರಿದವರು. ವಧು ವರರ ಕೈಯಲ್ಲಿ ಕನ್ನಡಿಗ, ಕನ್ನಡತಿ ಎಂಬ ಚಿನ್ನದ ಉಂಗುರ ಬದಲಾಯಿಸಿಕೊಂಡರು. 

ಈ ವಿವಾಹ ಕಾರ್ಯಕ್ರಮ ಕನ್ನಡದ ಸಂಭ್ರಮವೋ? ಮದುವೆಯೋ ಎಂಬ ಅನುಮಾನವೂ ಜನರನ್ನು ಕಾಡಿತು. ಕನ್ನಡ ಧ್ವಜ, ಕನ್ನಡ ಪೇಟ, ಕನ್ನಡದ ನಾಮಫಲಗಳನ್ನು ಹಾಕಿ ನವ ಜೋಡಿ ಸಪ್ತಪದಿ ತುಳಿಯಿತು. 

ಈ ವಿಶೇಷ ವಿವಾಹಕ್ಕೆ ಹುಕ್ಕೇರಿ ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಕನ್ನಡದಲ್ಲೇ ವಿವಾಹದ ಮಂತ್ರ ಪಠಿಸಿದರು. ಈ ವಿವಾಹ ಕಾರ್ಯಕ್ರಮ ಕನ್ನಡದ ಹಬ್ಬದಂತೆ ಭಾಸವಾಯಿತು.

ಕಲ್ಯಾಣ ಮಂಟಪದ ತುಂಬೆಲ್ಲ ಕನ್ನಡದ ಬಾವುಟಗಳು, ಇಮ್ಮಡಿ ಪುಲಿಕೇಶಿ, ರಾಣಿ ಚನ್ನಮ್ಮ, ಸಂಗೊಳ್ಳಿ ರಾಯಣ್ಣ ಮೂರ್ತಿ, ವಿಶ್ವಗುರು ಬಸವಣ್ಣ, ಪುಟ್ಟರಾಜ ಗವಾಯಿ, ಪೂರ್ಣಚಂದ್ರ ತೇಜಸ್ವಿ, ಸಾಲು ಮರದ ತಿಮ್ಮಕ್ಕ ಅವರ ಭಾವಚಿತ್ರಗಳು ಇಲ್ಲಿ ರಾರಾಜಿಸಿದವು. 

ಎಲ್ಲೆಲ್ಲೂ ಕನ್ನಡ ಬಾವುಟಗಳು, ಹಳದಿ-ಕೆಂಪು ಪೇಟಾ ತೊಟ್ಟಿದ್ದ ಯುವಕರು ಗಮನ ಸೆಳೆದರು.