ಕಾಂಗ್ರೆಸ್ ನುಡಿದಂತೆ ನಡೆವ ಪಕ್ಷ: ಡಾ. ಅಂಜಲಿ

| Published : Apr 01 2024, 12:45 AM IST / Updated: Apr 01 2024, 12:46 AM IST

ಸಾರಾಂಶ

ಕಾಂಗ್ರೆಸ್ ಬಿಜೆಪಿಗರಂತೆ ಸುಳ್ಳು ಹೇಳಲ್ಲ; ಯಾವ ಪಕ್ಷ, ಜಾತಿ ಭೇದ ನೋಡದೆ ಐದೂ ಗ್ಯಾರಂಟಿಯನ್ನು ಮುಟ್ಟಿಸಿದ್ದೇವೆ. ನುಡಿದಂತೆ ನಡೆದ ಪಕ್ಷವೆಂದರೆ ಅದು ಕಾಂಗ್ರೆಸ್ ಎಂದು ಕಾಂಗ್ರೆಸ್ ಅಭ್ಯರ್ಥಿ ಡಾ. ಅಂಜಲಿ ನಿಂಬಾಳ್ಕರ್ ತಿಳಿಸಿದರು.

ಜೋಯಿಡಾ: ೨೦೧೪ರಿಂದ ಬಿಜೆಪಿಗರು ಹೇಳುತ್ತಿದ್ದಾರೆ, ಖಾತೆಗೆ ₹೧೫ ಲಕ್ಷ ಹಾಕುತ್ತೇವೆಂದು. ಅದಕ್ಕಾಗಿ ಝೀರೋ ಖಾತೆ ಮಾಡಿಸಿದರು. ಎಲ್ಲಾದರೂ ಓರ್ವ ಬಿಜೆಪಿಗನ ಖಾತೆಗೆ ಹಣ ಬಂದಿದ್ದರೆ ಹೇಳಿ, ನಾವೆಲ್ಲರೂ ರಾಜೀನಾಮೆ ಕೊಡುತ್ತೇವೆ ಎಂದು ಉತ್ತರಕನ್ನಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಾ. ಅಂಜಲಿ ನಿಂಬಾಳ್ಕರ್ ಸವಾಲೆಸೆದರು.

ಗಣೇಶಗುಡಿಯಲ್ಲಿ ಹಮ್ಮಿಕೊಂಡಿದ್ದ ಉತ್ತರಕನ್ನಡ ಲೋಕಸಭಾ ಚುನಾವಣಾ ಪೂರ್ವಸಿದ್ಧತಾ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿ, ಕಾಂಗ್ರೆಸ್ ಬಿಜೆಪಿಗರಂತೆ ಸುಳ್ಳು ಹೇಳಲ್ಲ; ಯಾವ ಪಕ್ಷ, ಜಾತಿ ಭೇದ ನೋಡದೆ ಐದೂ ಗ್ಯಾರಂಟಿಯನ್ನು ಮುಟ್ಟಿಸಿದ್ದೇವೆ. ನುಡಿದಂತೆ ನಡೆದ ಪಕ್ಷವೆಂದರೆ ಅದು ಕಾಂಗ್ರೆಸ್ ಎಂದರು‌.

ಸಿಲಿಂಡರ್ ₹೪೦೦ ಇದ್ದಾಗ ಬಿಜೆಪಿಯ ಸ್ಮೃತಿ ಇರಾನಿ ಸಿಲಿಂಡರ್ ಹಿಡಿದು ರಸ್ತೆಗೆ ಇಳಿಯುತ್ತಿದ್ದರು. ಈಗ ಸಾವಿರ ದಾಟಿದೆ. ಆದರೆ ಅವರೆಲ್ಲ ಮೌನವಾಗಿದ್ದಾರೆ. ಹೀಗಾಗಿ ನಾವು ಮಾತನಾಡಬೇಕಿದೆ. ಅದಕ್ಕಾಗಿ ಗ್ಯಾರಂಟಿ ಯೋಜನೆಗಳ ಬಗ್ಗೆ ಜನರಿಗೆ ಮಾಹಿತಿ ತಿಳಿಸಿ ಲೋಕಸಭೆಯಲ್ಲಿ ಕಾಂಗ್ರೆಸ್ ಗೆಲ್ಲಿಸಬೇಕಿದೆ ಎಂದರು.

ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ, ಶಾಸಕ ಆರ್.ವಿ. ದೇಶಪಾಂಡೆ ಮಾತನಾಡಿ, ಜೋಯಿಡಾದಲ್ಲಿ ಕುಣಬಿ ಸಮಾಜದವರ ಸಂಖ್ಯೆ ಹೆಚ್ಚಿದೆ. ಗೋವಾ ಕುಣಬಿಗಳು ಪರಿಶಿಷ್ಟ ಪಂಗಡದಲ್ಲಿದ್ದಾರೆ. ಜೋಯಿಡಾದ ಕುಣಬಿಗಳೂ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಎಲ್ಲ ಕ್ಷೇತ್ರದಿಂದಲೂ ಹಿಂದುಳಿದಿದ್ದಾರೆ. ಹೀಗಾಗಿ ಇಲ್ಲಿಯ ಕುಣಬಿಗಳನ್ನೂ ಪರಿಶಿಷ್ಟ ಪಂಗಡಕ್ಕೆ ಸೇರಿಸಬೇಕಂಬ ಪ್ರಯತ್ನಗಳು ನಡೆದಿವೆ. ಆದರೆ ಈ ಪ್ರಕ್ರಿಯೆ ಅಂತಿಮ ಹಂತದಲ್ಲಿ ಭಾರತ ಸರ್ಕಾರದಲ್ಲಿದೆ. ಕಾಂಗ್ರೆಸ್ ಬಡವರ, ಕೂಲಿಕಾರರ ಪಕ್ಷ. ಕುಣಬಿಗಳ ಅಭ್ಯುದಯಕ್ಕಾಗಿ ಲೋಕಸಭೆಗೆ ಕಾಂಗ್ರೆಸ್ ಅಭ್ಯರ್ಥಿಯನ್ನ ಗೆಲ್ಲಿಸಬೇಕಿದೆ ಎಂದರು.

ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳು ವೈದ್ಯ ಮಾತನಾಡಿ, ಬಿಜೆಪಿಗರು ೩೦ ವರ್ಷಗಳಿಂದ ಸುಳ್ಳು ಹೇಳುತ್ತಾ, ಭ್ರಷ್ಟಾಚಾರ ಮಾಡುತ್ತಾ ಅಧಿಕಾರ ಮಾಡಿದರು. ಅವರ ಸುಳ್ಳು ಈಗ ಜನರಿಗೆ ಗೊತ್ತಾಗಿದೆ. ಸುಳ್ಳು ಬಿಟ್ಟರೆ ಅವರು ಬೇರೇನೂ ಮಾಡಿಲ್ಲ ಎಂದರು‌.

ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಾಯಿ ಗಾಂವ್ಕರ್ ಮಾತನಾಡಿದರು.

ಬ್ಲಾಕ್ ಮಹಿಳಾ ಕಾಂಗ್ರೆಸ್‌ನಿಂದ ಅಭ್ಯರ್ಥಿ ಡಾ. ಅಂಜಲಿ ನಿಂಬಾಳ್ಕರ್ ಅವರಿಗೆ ಅರಿಶಿಣ- ಕುಂಕುಮ ನೀಡಿ, ಬಳೆ ತೊಡಿಸಿ ಉಡಿ ತುಂಬಲಾಯಿತು. ಬ್ಲಾಕ್ ಕಾಂಗ್ರೆಸ್‌ನಿಂದ ಗಣ್ಯರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದ ಪೂರ್ವ ಅವೇಡಾ ಬಸ್ ತಂಗುದಾಣದ ಬಳಿಯ ಶಿವಾಜಿ ಮೂರ್ತಿಗೆ ಗಣ್ಯರೆಲ್ಲರೂ ಮಾಲಾರ್ಪಣೆ ಮಾಡಿದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿನಯ್ ದೇಸಾಯಿ, ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಜಿಲ್ಲಾಧ್ಯಕ್ಷ ಸತೀಶ್ ನಾಯ್ಕ, ಕಿಸಾನ್ ಮೋರ್ಚಾ ಅಧ್ಯಕ್ಷ ರವಿ ರೇಡ್ಕರ್, ರಮೇಶ್ ನಾಯ್ಕ, ಸಂಜಯ್ ಹಣಬರ, ಸದಾನಂದ ದಬಗಾರ ಮುಂತಾದವರಿದ್ದರು.