ಕನ್ನಡಪ್ರಭ ವಾರ್ತೆ ಸವದತ್ತಿ: ಇತ್ತೀಚಿನ ದಿನಗಳಲ್ಲಿ ಸಮಾಜದಲ್ಲಿ ಅನೇಕ ಗೊಂದಲಗಳು ಸೃಷ್ಟಿಯಾಗುತ್ತಿದ್ದು, ಗ್ರಾಮದೇವಿಯ ಜಾತ್ರಾ ಮಹೋತ್ಸವದಂತಹ ಧಾರ್ಮಿಕ ಕಾರ್ಯಕ್ರಮಗಳು ಸಮಾಜವನ್ನು ಒಗ್ಗೂಡಿಸುವ ಜೊತೆಗೆ ನೆಮ್ಮದಿಯ ಬದುಕನ್ನು ನಿರ್ಮಿಸುತ್ತವೆ ಎಂದು ರಾಜ್ಯ ಚುನಾವಣಾ ಆಯುಕ್ತ ಡಾ.ಜಿ.ಎಸ್.ಸಂಗ್ರೇಶಿ ಹೇಳಿದರು.

ಕನ್ನಡಪ್ರಭ ವಾರ್ತೆ ಸವದತ್ತಿ:

ಇತ್ತೀಚಿನ ದಿನಗಳಲ್ಲಿ ಸಮಾಜದಲ್ಲಿ ಅನೇಕ ಗೊಂದಲಗಳು ಸೃಷ್ಟಿಯಾಗುತ್ತಿದ್ದು, ಗ್ರಾಮದೇವಿಯ ಜಾತ್ರಾ ಮಹೋತ್ಸವದಂತಹ ಧಾರ್ಮಿಕ ಕಾರ್ಯಕ್ರಮಗಳು ಸಮಾಜವನ್ನು ಒಗ್ಗೂಡಿಸುವ ಜೊತೆಗೆ ನೆಮ್ಮದಿಯ ಬದುಕನ್ನು ನಿರ್ಮಿಸುತ್ತವೆ ಎಂದು ರಾಜ್ಯ ಚುನಾವಣಾ ಆಯುಕ್ತ ಡಾ.ಜಿ.ಎಸ್.ಸಂಗ್ರೇಶಿ ಹೇಳಿದರು.

ಪಟ್ಟಣದ ಗ್ರಾಮದೇವಿಯ ಕಾಡಸಿದ್ದೇಶ್ವರ ವೇದಿಕೆಯ ಮೇಲೆ ನಡೆಯುತ್ತಿರುವ ಧಾರ್ಮಿಕ ಸಭೆ ಮತ್ತು ಸಾರ್ವಜನಿಕ ಸಭೆಯ ನಾಲ್ಕನೇ ದಿನದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಜನರಲ್ಲಿರುವ ಮತ ಶಕ್ತಿಯು ಅತ್ಯಂತ ಪ್ರಭಾವಶಾಲಿಯಾಗಿದ್ದು, ಚುನಾವಣೆಗಳಲ್ಲಿ ಯೋಗ್ಯರ ಆಯ್ಕೆಗೆ ತಮ್ಮ ಶಕ್ತಿಯ ಪ್ರಭಾವ ಬೀರಲಿ ಎಂದು ಹೇಳಿದರು.

ಜಾರಿ ನಿರ್ದೇಶನಾಲಯದ ಉಪನಿರ್ದೇಶಕ ಮಲ್ಲಿಕಾರ್ಜುನ ರಾಜಣ್ಣ ಮಾಮನಿ ಮಾತನಾಡಿ, ಸವದತ್ತಿ ಗ್ರಾಮ ದೇವಿಯ ಜಾತ್ರೆಯು ಜನಮಾನಸದಲ್ಲಿ ನೆನಪಿಡುವಂತದ್ದಾಗಿದೆ. ಜಾತ್ರೆಯ ಯಶಸ್ಸಿಗೆ ಶ್ರಮವಹಿಸಿರುವುದು ಇಂದು ಸಾರ್ಥಕತೆಯತ್ತ ಸಾಗುತ್ತಿದೆ. ಸವದತ್ತಿ ಪಟ್ಟಣವು ದಿನೇ ದಿನೇ ವಿಸ್ತಾರವಾಗುತ್ತಿದ್ದು, ಪಟ್ಟಣದಲ್ಲಿನ ದೇವಸ್ಥಾನ ಚಿಕ್ಕದಾಗಿರುವುದರಿಂದ ಮುಂದಿನ ದಿನಗಳಲ್ಲಿ ಗ್ರಾಮದೇವಿಯ ದೇವಸ್ಥಾನ ನಿರ್ಮಾಣಕ್ಕೆ ಕನಿಷ್ಠ ೫ ಎಕರೆ ಜಾಗ ತೆಗೆದುಕೊಂಡರೆ ನಮ್ಮ ಕುಟುಂಬ ಹಾಗೂ ಮಾಮನಿ ಫೌಂಡೇಷನ್‌ನಿಂದ ಹೆಚ್ಚಿನ ಆರ್ಥಿಕ ಸಹಾಯ ನೀಡುವದಾಗಿ ಭರವಸೆ ನೀಡಿದರು. ತಹಸೀಲ್ದಾರ ಮಲ್ಲಿಕಾರ್ಜುನ ಹೆಗ್ಗಣ್ಣವರ ಹಾಗೂ ಡಿಎಸ್‌ಪಿ ಚಿದಂಬರ ಮಡಿವಾಳರ ಮಾತನಾಡಿ, ಜಾತ್ರೆಗೆ ತಾಲೂಕು ಆಡಳಿತ ಸಂಪೂರ್ಣ ಸಹಕಾರ ನೀಡುತ್ತಿದೆ. ಎಲ್ಲ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಸಹ ನಮ್ಮೂರ ಜಾತ್ರೆ ಎಂಬ ಅಭಿಮಾನದಿಂದ ಟೀಮ್ ವರ್ಕ ಮಾಡುತ್ತಿರುವುದಾಗಿ ತಿಳಿಸಿದರು.ಬೈಲಹೊಂಗಲ ಮೂರುಸಾವಿರಮಠದ ಶ್ರೀ ಪ್ರಭು ನೀಲಕಂಠ ಮಹಾಸ್ವಾಮೀಜಿ ಮಾತನಾಡಿ, ಜಾತ್ರೆಗಳು ಭಂಡಾರ ಹಚ್ಚಿಕೊಂಡು ಕುಣಿದು ಕುಪ್ಪಳಿಸುವ ಜಾತ್ರೆಗಳಾಗದೆ ಅದರ ಮಹತ್ವ ಅರಿವು ನಮಗಿರಬೇಕು. ಸಂಪತ್ತಿನ ಪರ್ಯಾಯ ಶಬ್ದವೇ ಭಂಡಾರ, ಅದನ್ನು ಹಚ್ಚಿಕೊಂಡು ಜಾತ್ರೆ ಮಾಡುವ ಸಂಭ್ರಮವೇ ಬೇರೆ ಎಂದರು.ಮುರಗೋಡದ ಶ್ರೀ ನೀಲಕಂಠ ಮಹಾಸ್ವಾಮೀಜಿ, ಕಾಗಿನೆಲೆ ಕನಕಗುರುಪೀಠದ ಅಮೋಘ ಸಿದ್ದೇಶ್ವರ ಸ್ವಾಮೀಜಿ, ಭಾಗೋಜಿಕೊಪ್ಪದ ಶಿವಲಿಂಗ ಮುರುಘರಾಜೇಂದ್ರ ಸ್ವಾಮೀಜಿ, ಸತ್ತಿಗೇರಿಯ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ, ಕೆ.ಶಿವಾಪುರದ ಜಡೆತಲೆ ಮರುಳ ಸಿದ್ದೇಶ್ವರ ಶಿವಾಚಾರ್ಯ ಸ್ವಾಮೀಜಿ ಆಶೀರ್ವಚನ ನೀಡಿದರು. ಜಾರಿ ನಿರ್ದೇಶನಾಲಯದ ಉಪನಿರ್ದೇಶಕ ಮಲ್ಲಿಕಾರ್ಜುನ ಮಾಮನಿ ಮತ್ತು ಉಪವಿಭಾಗಾಧಿಕಾರಿ ಅಪೂರ್ವ ಮಾಮನಿ ಅವರನ್ನು ಉತ್ಸವ ಸಮಿತಿಯಿಂದ ಸನ್ಮಾನಿಸಲಾಯಿತು.

ಶಾಸಕ ವಿಶ್ವಾಸ ವೈದ್ಯ ಮತ್ತು ಜಾತ್ರಾ ಸಮಿತಿ ಅಧ್ಯಕ್ಷ ವಿರುಪಾಕ್ಷ ಮಾಮನಿ ನೇತೃತ್ವವಹಿಸಿದ್ದರು. ಪುರಸಭೆ ಮಾಜಿ ಅಧ್ಯಕ್ಷ ಶಿವಾನಂದ ಹೂಗಾರ, ಅಲ್ಲಮಪ್ರಭು ಪ್ರಭುನವರ, ಚಂದ್ರಣ್ಣ ಶಾಮರಾಯನವರ, ಮಲ್ಲಿಕಾರ್ಜುನ ಪುರದಗುಡಿ, ನಗರಾಭಿವೃದ್ಧಿ ಪ್ರಾಧಿಕಾರದ ಉಪನಿರ್ದೇಶಕ ವಿಷ್ಣು ತೇರದಾಳ, ಎಸಿಪಿ ಶಿವಾನಂದ ಚಲವಾದಿ, ತಾಪಂ ಇಒ ಆನಂದ ಬಡಕುಂದರಿ, ಪೌರಾಯುಕ್ತ ಸಂಗನಬಸಯ್ಯ ಗದಗಿಮಠ, ಬಿಇಒ ಎ.ಎ.ಖಾಜಿ, ಎಚ್.ಎ.ಕದ್ರಾಪುರ, ಸಿಡಿಪಿಒ ಅಮೃತ ಸಾಣಿಕೊಪ್ಪ, ಕೃಷಿಇಲಾಖೆ ಸಹಾಯಕ ನಿರ್ದೇಶಕ ಶಿವಪ್ರಕಾಶ ಪಾಟೀಲ, ಟಿಎಚ್‌ಒ ಶ್ರೀಪಾದ ಸಬನೀಸ, ಡಾ.ಎಚ್.ಎಮ್.ಮಲ್ಲನಗೌಡರ, ಡಾ.ಅನೀಲ ಮರಲಿಂಗಣ್ಣವರ, ಆರ್.ಆರ್.ಕುಲಕರ್ಣಿ, ಕೃಷ್ಣಮೂರ್ತಿ ನಾಯ್ಕ, ರಮೇಶ ದೇವರಡ್ಡಿ, ನಾಗೇಶ ಸೇರಿ ಜಿಲ್ಲಾ ಮತ್ತು ತಾಲೂಕು ಮಟ್ಟದ ಎಲ್ಲ ಅಧಿಕಾರಿಗಳನ್ನು ಹಾಗೂ ಗಣ್ಯರನ್ನು ಗೌರವಿಸಲಾಯಿತು. ಡಾ.ವೈ.ಎಮ್.ಯಾಕೊಳ್ಳಿ ಸ್ವಾಗತಿಸಿದರು. ಶಿವಾನಂದ ತಾರೀಹಾಳ ನಿರೂಪಿಸಿದರು. ಮಹೇಶ ಶಿರಸಂಗಿ ವಂದಿಸಿದರು.