ಕಾಯಂ ಪೀಠ ಈ ಭಾಗದ ಜನರಿಗೆ ಅನುಕೂಲ

| Published : Feb 06 2025, 12:17 AM IST

ಸಾರಾಂಶ

ಅಧಿಕ ಬೆಲೆ ನಿಗದಿ, ಸೇವೆಗಳಲ್ಲಿನ ಕೊರತೆ, ಉತ್ಪನ್ನಗಳ ಗುಣಮಟ್ಟ, ದಾರಿ ತಪ್ಪಿಸುವ ಜಾಹೀರಾತುಗಳು ಅಥವಾ ಮಾರಾಟಗಾರ ವ್ಯಾಪಾರಿಯ ಅನ್ಯಾಯದ ಕುರಿತು ಗ್ರಾಹಕರ ದೂರುಗಳನ್ನು ಪರಿಹರಿಸಲು ಜಿಲ್ಲೆಯಲ್ಲಿ ಕರ್ನಾಟಕ ರಾಜ್ಯ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಕಾಯಂ ಸಂಚಾರಿ ಪೀಠ ಪ್ರಾರಂಭವಾಗಿರುವುದು ಈ ಭಾಗದ ಜನರಿಗೆ ಸಾಕಷ್ಟು ಅನುಕೂಲವಾಗಲಿದೆ ಎಂದು ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಹಾಗೂ ಕಾನೂನು ಮಾಪನಶಾಸ್ತ್ರ ಇಲಾಖೆ ಸಚಿವ ಕೆ.ಎಚ್.ಮುನಿಯಪ್ಪ ಹೇಳಿದರು.

ಕನ್ನಡಪ್ರಭ ವಾರ್ತೆ ಬೆಳಗಾವಿ

ಅಧಿಕ ಬೆಲೆ ನಿಗದಿ, ಸೇವೆಗಳಲ್ಲಿನ ಕೊರತೆ, ಉತ್ಪನ್ನಗಳ ಗುಣಮಟ್ಟ, ದಾರಿ ತಪ್ಪಿಸುವ ಜಾಹೀರಾತುಗಳು ಅಥವಾ ಮಾರಾಟಗಾರ ವ್ಯಾಪಾರಿಯ ಅನ್ಯಾಯದ ಕುರಿತು ಗ್ರಾಹಕರ ದೂರುಗಳನ್ನು ಪರಿಹರಿಸಲು ಜಿಲ್ಲೆಯಲ್ಲಿ ಕರ್ನಾಟಕ ರಾಜ್ಯ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಕಾಯಂ ಸಂಚಾರಿ ಪೀಠ ಪ್ರಾರಂಭವಾಗಿರುವುದು ಈ ಭಾಗದ ಜನರಿಗೆ ಸಾಕಷ್ಟು ಅನುಕೂಲವಾಗಲಿದೆ ಎಂದು ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಹಾಗೂ ಕಾನೂನು ಮಾಪನಶಾಸ್ತ್ರ ಇಲಾಖೆ ಸಚಿವ ಕೆ.ಎಚ್.ಮುನಿಯಪ್ಪ ಹೇಳಿದರು.

ಆಟೋ ನಗರದ ಕರ್ನಾಟಕ ರಾಜ್ಯ ಸಹಕಾರ ಪಟ್ಟಣ ಬ್ಯಾಂಕುಗಳ ಮಹಾಮಂಡಳ ನಿಯಮಿತ ಕಟ್ಟಡದ 3ನೇ ಮಹಡಿಯ ಕೆ.ಎಚ್.ಪಾಟೀಲ ಸಭಾ ಭವನದಲ್ಲಿ ಬುಧವಾರ ನಡೆದ ನೂತನ ಕರ್ನಾಟಕ ರಾಜ್ಯ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಕಾಯಂ ಸಂಚಾರಿ ಪೀಠದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ಪ್ರತಿ ಬಾರಿಯೂ ನ್ಯಾಯಕ್ಕಾಗಿ ಗ್ರಾಹಕರು ಬೆಂಗಳೂರಿಗೆ ಅಲೆದಾಡುವಂತಾಗಿದೆ. ಜಿಲ್ಲೆಯಲ್ಲಿ ಗ್ರಾಹಕರ ಪ್ರಕರಣಗಳು ಬಾಕಿ ಇವೆ. ಇವುಗಳ ತುರ್ತು ವಿಲೇವಾರಿಗಾಗಿ ಪ್ರತ್ಯೇಕ ಸಂಚಾರಿ ಪೀಠ ಅಗತ್ಯವಿತ್ತು. ಅದರಂತೆ ಕಡಿಮೆ ವೆಚ್ಚದಲ್ಲಿ ಪ್ರಕರಣಗಳನ್ನು ತ್ವರಿತವಾಗಿ ವಿಲೇವಾರಿ ಮಾಡಲು ಗ್ರಾಹಕ ಆಯೋಗಗಳನ್ನು ಸ್ಥಾಪಿಸಲಾಗಿದೆ. ಈ ನಿಟ್ಟಿನಲ್ಲಿ ಗ್ರಾಹಕರ ಸಂರಕ್ಷಣಾ ಕಾಯ್ದೆಯಡಿ ಕರ್ನಾಟಕ ರಾಜ್ಯ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಕಾಯಂ ಸಂಚಾರಿ ಪೀಠ ಕಾರ್ಯನಿರ್ವಹಿಸಲಿದೆ ಎಂದರು.ಕಾನೂನು, ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಹಾಗೂ ಪ್ರವಾಸೋದ್ಯಮ ಸಚಿವ ಎಚ್. ಕೆ. ಪಾಟೀಲ ಮಾತನಾಡಿ, ಉತ್ತರ ಕರ್ನಾಟಕ ಭಾಗದಲ್ಲಿ ಅತ್ಯಂತ ಅಗತ್ಯವಿರುವ ಕರ್ನಾಟಕ ರಾಜ್ಯ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಕಾಯಂ ಸಂಚಾರಿ ಪೀಠ ಪ್ರಾರಂಭವಾಗಿದೆ. ಮಾನ್ಯ ಮುಖ್ಯಮಂತ್ರಿಗಳು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರ ನಿರಂತರ ಪ್ರಯತ್ನದಿಂದ ಇಂದು ಕಾಯಂ ಸಂಚಾರಿ ಪೀಠ ಉದ್ಘಾಟನೆಯಾಗುತ್ತಿದೆ. ಗ್ರಾಹಕರ ಆಯೋಗ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಬೇಕು. ಗ್ರಾಹಕರ ಪ್ರಕರಣಗಳು ಬಹಳ ದಿನಗಳನ್ನು ತೆಗೆದುಕೊಳ್ಳದೆ ಶೀಘ್ರ ವಿಲೇವಾರಿಯಾಗುವ ನಿಟ್ಟಿನಲ್ಲಿ ಕೆಲಸಗಳಾಗಬೇಕು ಎಂದು ಸಲಹೆ ನೀಡಿದರು.

ಬೆಳಗಾವಿ ಜಿಲ್ಲೆಯಲ್ಲಿ ಅಂದಾಜು 2 ಸಾವಿರಕ್ಕೂ ಅಧಿಕ ಮೇಲ್ಪಟ್ಟು ಗ್ರಾಹಕರ ಪ್ರಕರಣಗಳು ಬಾಕಿ ಇವೆ. ಮುಂದಿನ ದಿನಗಳಲ್ಲಿ ಪ್ರಕರಣಗಳು ಬಾಕಿ ಉಳಿಯದಂತೆ ಗ್ರಾಹಕರು ತ್ವರಿತವಾಗಿ ಪರಿಹಾರ ಕಂಡುಕೊಳ್ಳಬೇಕು. ಗ್ರಾಹಕರ ಸಮಸ್ಯೆ ಬಹು ಬೇಗನೆ ಇತ್ಯರ್ಥಗೊಳಿಸಲು ಕೆಲವು ತಿದ್ದುಪಡಿಯಾಗಬೇಕು. ಗ್ರಾಹಕರಿಗೆ ತಮ್ಮ ಹಕ್ಕು ಸಮೇತ ಸೇವೆಗಳನ್ನು ಪಡೆದುಕೊಳ್ಳುವ ನಿಟ್ಟಿನಲ್ಲಿ ಸಂಚಾರಿ ಪೀಠ ನೆರವಾಗಬೇಕು. ಗ್ರಾಹಕರ ಸಂರಕ್ಷಣೆ ಕ್ರಮವಾಗಿ ಯಾವುದೇ ಪ್ರಕರಣಗಳು ಬಾಕಿ ಉಳಿಯಬಾರದು. ಜನಪರ, ಜನೋಪಯೋಗಿ ಸಂಚಾರಿ ಪೀಠವಾಗಿ ಕಾರ್ಯ ನಿರ್ವಹಿಸಬೇಕು ಎಂದು ತಿಳಿಸಿದರು.ಲೋಕೋಪಯೋಗಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಮಾತನಾಡಿ, ಬಹಳ ದಿನಗಳಿಂದ ಸ್ಥಳದ ಕೊರತೆಯಿತ್ತು. ಹಾಗಾಗಿ ಕರ್ನಾಟಕ ರಾಜ್ಯ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಕಾಯಂ ಸಂಚಾರಿ ಪೀಠ ಪ್ರಾರಂಭ ವಿಳಂಬವಾಗುತಿತ್ತು. ಈಗ ಪ್ರಾರಂಭವಾದ ಸಂಚಾರಿ ಪೀಠದ ಕಚೇರಿಗೆ ಬೇಕಾಗುವ ಅವಶ್ಯಕ ಪೀಠೋಪಕರಣ, ಸಿಬ್ಬಂದಿ ನೇಮಕ, ಅಗತ್ಯ ಸವಲತ್ತುಗಳನ್ನು ಒದಗಿಸಲಾಗುವುದು. ಇಲ್ಲಿನ ಗ್ರಾಹಕರು ನ್ಯಾಯಕ್ಕಾಗಿ ಬೆಂಗಳೂರಿಗೆ ಹೋಗುವ ಸಂದರ್ಭ ಇತ್ತು. ಈ ಕಾಯಂ ಸಂಚಾರಿ ಪೀಠ ಆರಂಭ ಗ್ರಾಹಕರಿಗೆ ಸಂತಸದ ವಿಷಯವಾಗಿದೆ. ಕಳೆದ 4 ವರ್ಷಗಳಿಂದ ಕಾಯಂ ಪೀಠ ಪ್ರಾರಂಭಿಸುವ ಬಗ್ಗೆ ಹೋರಾಟವಿತ್ತು. ಅದರಂತೆ ಇಂದು ಸಂಚಾರಿ ಪೀಠ ಉದ್ಘಾಟನೆಗೊಳ್ಳುತ್ತಿದೆ ಎಂದು ಹರ್ಷ ವ್ಯಕ್ತಪಡಿಸಿದರು.ಸಂಸದ ಜಗದೀಶ ಶೆಟ್ಟರ್‌ ಮಾತನಾಡಿ, ಜಿಲ್ಲೆಯಲ್ಲಿ ಕಾಯಂ ಸಂಚಾರಿ ಪೀಠ 4 ವರ್ಷಗಳ ಹಿಂದೆಯೇ ಆಗಬೇಕಿತ್ತು. ಬಹಳ ದಿನಗಳಿಂದ ನ್ಯಾಯವಾದಿಗಳು ಸರ್ಕಾರದ ಮೇಲೆ ಒತ್ತಡ ತಂದು ಜಿಲ್ಲೆಯಲ್ಲಿ ಸಂಚಾರಿ ಪೀಠ ಲೋಕಾರ್ಪಣೆಗೊಳಿಸಲು ಕಾರಣರಾಗಿದ್ದಾರೆ. ಸಂಚಾರಿ ಪೀಠಕ್ಕೆ ನ್ಯಾಯಾಧೀಶರ ನೇಮಕವಾದರೆ ಮಾತ್ರ ಸೂಕ್ತ ವ್ಯವಸ್ಥೆ ಕಲ್ಪಿಸಿದಂತಾಗುತ್ತದೆ. ಗ್ರಾಹಕರ ಪ್ರಕರಣಗಳು ಬಾಕಿ ಉಳಿಯಬಾರದು. ಗ್ರಾಹಕರಿಗೆ ಅತೀ ತ್ವರಿತವಾಗಿ ನ್ಯಾಯ ಸಿಗಬೇಕು. ಬಹಳ ಪ್ರಕರಣಗಳು 10 ವರ್ಷಗಳವರೆಗೆ ಬಾಕಿ ಇವೆ. ಈ ರೀತಿ ಪರಿಸ್ಥಿತಿ ಮುಂದಿನ ದಿನಗಳ ನಿರ್ಮಾಣವಾಗಬಾರದು. ನ್ಯಾಯಾಲಯದಲ್ಲಿ ತ್ವರಿತವಾಗಿ ನ್ಯಾಯ ದೊರೆಯುತ್ತದೆ ಎಂದು ಹೇಳಿದರು.

ಈ ವೇಳೆ ವಿಧಾನ ಪರಿಷತ್ ಸದಸ್ಯ ಹನುಮಂತ ನಿರಾಣಿ, ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್, ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷ ಸಂಜೀವ ಕುಲಕರ್ಣಿ, ಬೆಳಗಾವಿ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ (ಹೆಚ್ಚುವರಿ ಪೀಠ) ಅಧ್ಯಕ್ಷ ಮಹಾಂತೇಶ ಶಿಗ್ಗಿ, ಬೆಂಗಳೂರು ಕರ್ನಾಟಕ ರಾಜ್ಯ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಸದಸ್ಯೆ ಸುನೀತಾ ಬಾಗೇವಾಡಿ, ಬೆಂಗಳೂರು ಕರ್ನಾಟಕ ರಾಜ್ಯ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ರಿಜಿಸ್ಟರ್ ಮತ್ತು ಆಡಳಿತಾಧಿಕಾರಿ ಮಲ್ಲಿಕಾರ್ಜುನ ಕಮತಗಿ, ನ್ಯಾಯವಾದಿಗಳ ಸಂಘದ ಅಧ್ಯಕ್ಷ ಶಿವಪ್ಪ ಕಿವುಡಸಣ್ಣವರ ಮೊದಲಾದವರು ಉಪಸ್ಥಿತರಿದ್ದರು.