ವಿದ್ಯಾರ್ಥಿಗಳ ಪ್ರತಿಭೆ ಅನಾವರಣಕ್ಕೆ ಉತ್ತಮ ವೇದಿಕೆ

ಕೊಪ್ಪಳ: ಮಕ್ಕಳಲ್ಲಿ ಅಡಗಿರುವ ಪ್ರತಿಭೆ ಹೊರ ಬರಲು ಪ್ರತಿಭಾ ಕಾರಂಜಿಯಂತ ವೇದಿಕೆ ಅವಶ್ಯ ಎಂದು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಶರಣಬಸನಗೌಡ ಪಾಟೀಲ್ ಹೇಳಿದರು.

ತಾಲೂಕಿನ ಮುದ್ದಾಬಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲೆಯಲ್ಲಿ ನಡೆದ ಬಹದ್ದೂಬರಂಡಿ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಹಾಗೂ ಕಲಿಕೋತ್ಸವ ಉದ್ಘಾಟಿಸಿ ಮಾತನಾಡಿದರು.

ಮಕ್ಕಳಲ್ಲಿ ವಿವಿಧ ರೀತಿಯ ಪ್ರತಿಭೆ ಅಡಗಿರುತ್ತವೆ. ಅವುಗಳನ್ನು ಬೆಳಕಿಗೆ ತರುವ ಉದ್ದೇಶದಿಂದ ರಾಜ್ಯ ಸರ್ಕಾರವು ಪ್ರತಿ ವರ್ಷ ಪ್ರತಿಭಾ ಕಾರಂಜಿ ವೇದಿಕೆ ಸೃಷ್ಟಿ ಮಾಡಿ ಮಕ್ಕಳಿಗೆ ವೇದಿಕೆ ಕಲ್ಪಿಸುತ್ತದೆ ಎಂದರು.

ಕೆಓಎಫ್ ಅಧ್ಯಕ್ಷ ಸುರೇಶರಡ್ಡಿ ಮಾದಿನೂರು ಮಾತನಾಡಿ, ವಿದ್ಯಾರ್ಥಿಗಳ ಪ್ರತಿಭೆ ಅನಾವರಣಕ್ಕೆ ಉತ್ತಮ ವೇದಿಕೆಯಾಗಿದೆ. ಈ ಶಾಲೆಯ ವಿದ್ಯಾರ್ಥಿಗಳು ಸರ್ಕಾರಿ ಮೆಡಿಕಲ್ ಸೀಟು ಪಡೆದರೆ ನನ್ನ ತಂದೆ ಸ್ಮರಣಾರ್ಥ ₹೫೦ಸಾವಿರ ಆರ್ಥಿಕ ನೆರವು ನೀಡುವೆ ಎಂದು ಘೋಷಣೆ ಮಾಡಿದರು.

ಬೀರಪ್ಪ ಅಂಡಗಿ ಮಾತನಾಡಿ, ಮುದ್ದಾಬಳ್ಳಿಯಲ್ಲಿ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಆಯೋಜನೆಗೆ ಗ್ರಾಮಸ್ಥರು ತುಂಬಾ ಸಹಕಾರ ನೀಡಿ ತನು, ಮನ, ಧನದಿಂದ ಸೇವೆ ಮಾಡಿದ್ದಾರೆ ಎಂದರು.

ಬಹದ್ದೂರ್ ಬಂಡಿ ಕ್ಲಸ್ಟರ್ ಮಟ್ಟದ ಸಿಆರ್‌ಪಿ ಮುದ್ದು ಬಸಯ್ಯ ಪ್ರಾಸ್ತಾವಿಕ ಮಾತನಾಡಿದರು. ಕಾರ್ಯಕ್ರಮದಲ್ಲಿ ಸಣ್ಣ ಹನುಮಪ್ಪ ಹುಳ್ಳಿ, ಶರಣಗೌಡ ಪಾಟೀಲ್, ನಂದಯ್ಯ ಸಸಿಮಠ, ನಿವೃತ್ತ ಯೋಧರಾದ ಶಿವಮೂರ್ತೆಯ್ಯ ಸೊಪ್ಪಿಮಠ, ವಿರುಪಾಕ್ಷಪ್ಪ ಚಕ್ರಸಾಲಿ, ತಾಪಂ ಮಾಜಿ ಸದಸ್ಯ ರಾಜೀವರಡ್ಡಿ ಮಾದಿನೂರು, ಬಹದ್ದೂಬರಂಡಿ ಗ್ರಾಪಂ ಅಧ್ಯಕ್ಷ ಯೋಗಾನಂದ ಲೇಬಗೇರಿ, ಹೊಳಿಬಸಯ್ಯ ಕಾಟ್ರಳ್ಳಿಮಠ, ಎಸ್‌ಡಿಎಂಸಿ ಅಧ್ಯಕ್ಷೆ ವಿಜಯಲಕ್ಷ್ಮಿ ಹಾಲವರ್ತಿ, ವಿರುಪಾಕ್ಷಪ್ಪ ಬಾಗೋಡಿ, ಶರಣಪ್ಪ ರಡ್ಡೇರ್, ಯಂಕಪ್ಪ ಚುಕ್ಕನಕಲ್, ದತ್ತು ಕಮ್ಮಾರ, ಮಾರುತಿ ಮ್ಯಾಗಳಮನಿ, ಮರಿಯಪ್ಪ ದೇವರಮನಿ, ವಿರೇಶ ಅರಳಿಕಟ್ಟಿ, ಮಂಜುನಾಥ ಆರೇರ್ ಸೇರಿದಂತೆ ಹಲವು ಗಣ್ಯರು, ಅಧಿಕಾರಿಗಳು ಉಪಸ್ಥಿತರಿದ್ದರು. ಮುಖ್ಯ ಶಿಕ್ಷಕಿ ರೇಖಾ ಕುಲಕರ್ಣಿ ಸ್ವಾಗತಿಸಿದರು. ಶಿಕ್ಷಕ ಮೊಹ್ಮದ್ ಇಸ್ಮಾಯಿಲ್ ನಿರೂಪಿಸಿದರು. ಸಿಆರ್‌ಪಿ ಹನುಮಂತಪ್ಪ ಕೆ.ಆರ್.ಕಾರ್ಯಕ್ರಮ ನಿರ್ವಹಿಸಿದರು.