ಸಮೀಕ್ಷೆ ಹೆಸರಿನಲ್ಲಿ ಹಿಂದೂ ಸಮಾಜ ಒಡೆಯುವ ಹುನ್ನಾರ

| Published : Sep 22 2025, 01:03 AM IST

ಸಮೀಕ್ಷೆ ಹೆಸರಿನಲ್ಲಿ ಹಿಂದೂ ಸಮಾಜ ಒಡೆಯುವ ಹುನ್ನಾರ
Share this Article
  • FB
  • TW
  • Linkdin
  • Email

ಸಾರಾಂಶ

ಕಾಂಗ್ರೆಸ್ ಸರ್ಕಾರ ಆರ್ಥಿಕ, ಸಾಮಾಜಿಕ, ಸಮೀಕ್ಷೆಯ ಹೆಸರಿನಲ್ಲಿ ಹಿಂದೂ ಸಮಾಜ ಒಡೆಯುವ ಹುನ್ನಾರ ನಡೆಸಿದೆ ಎಂದು ರಾಜ್ಯ ಸಭೆ ಸದಸ್ಯ ಈರಣ್ಣ ಕಡಾಡಿ ದೂರಿದರು.

ಕನ್ನಡಪ್ರಭ ವಾರ್ತೆ ಬೆಳಗಾವಿ

ಕಾಂಗ್ರೆಸ್ ಸರ್ಕಾರ ಆರ್ಥಿಕ, ಸಾಮಾಜಿಕ, ಸಮೀಕ್ಷೆಯ ಹೆಸರಿನಲ್ಲಿ ಹಿಂದೂ ಸಮಾಜ ಒಡೆಯುವ ಹುನ್ನಾರ ನಡೆಸಿದೆ ಎಂದು ರಾಜ್ಯ ಸಭೆ ಸದಸ್ಯ ಈರಣ್ಣ ಕಡಾಡಿ ದೂರಿದರು.

ನಗರದಲ್ಲಿ ಭಾನುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿಎಂ ಸಿದ್ದರಾಮಯ್ಯನವರು ಹೊಸ ಜಾತಿಗಳ ಪ್ರವರ್ತಕರಾಗಿ ಬದಲಾಗಿದ್ದಾರೆ. ಹೀಗಾಗಿಯೇ ಸಮೀಕ್ಷೆ ಪಟ್ಟಿಯಲ್ಲಿ ಇತರೆ ಎಂಬ ಹೊಸ ಧರ್ಮದ ಕಾಲಂಗಳನ್ನು ಸೃಷ್ಟಿಸಿರುವುದಲ್ಲದೇ ಕ್ರಿಶ್ಚಿಯನ್ ಎಂಬ ಹೊಸ ಪದ ಸೇರಿಸುವ ಮೂಲಕ ಜನರಲ್ಲಿ ಗೊಂದಲ ಮೂಡಿಸಿದ್ದಾರೆ. ಹೀಗಾಗಿ ಯಾವುದೇ ಕಾರಣಕ್ಕೂ ಈ ಸಮೀಕ್ಷೆ ಕೈಗೊಳ್ಳಬಾರದು ಎಂದು ಒತ್ತಾಯಿಸಿದರು.

ದೇಶದಲ್ಲಿ ಏಳು ಧರ್ಮಗಳು ಮಾತ್ರ ಸಂವಿಧಾನಿಕ ಸ್ಥಾನ ಪಡೆದಿವೆ. ಕರ್ನಾಟಕದಲ್ಲಿ ಒಟ್ಟಾರೆ 1350 ಜಾತಿ ಮತ್ತು ಉಪಜಾತಿಗಳಿವೆ. ಆದರೆ, ಈಗ ಅವುಗಳ ಸಂಖ್ಯೆ 1561 ತೋರಿಸುವ ಮೂಲಕ ಸುಮಾರು 210 ಹೊಸ ಜಾತಿಗಳನ್ನು ಸೃಷ್ಟಿ ಮಾಡಿದ್ದಾರೆ ಜೊತೆಗೆ ಕ್ರಿಶ್ಚಿಯನ್ ಸಮುದಾಯದ 47 ಹೊಸ ಜಾತಿಗಳನ್ನು ಸೇರಿಸಿದ್ದಾರೆ. ಈ ಬಗ್ಗೆ ಸಿದ್ದರಾಮಯ್ಯನವರು ರಾಜ್ಯದ ಜನತೆಗೆ ಸ್ಪಷ್ಟೀಕರಣ ನೀಡಬೇಕು ಎಂದ ಅವರು, ಸಿಎಂ ಸಿದ್ದರಾಮಯ್ಯನವರು ತಮ್ಮ ಕುರ್ಚಿ ಉಳಿಸಿಕೊಳ್ಳಲು ಈ ಸಮೀಕ್ಷೆಗೆ ಮುಂದಾಗಿದ್ದಾರೆ ಎಂಬ ಅನುಮಾನಗಳು ವ್ಯಕ್ತವಾಗುತ್ತಿವೆ ಎಂದರು.

ರಾಜ್ಯ ಸರಕಾರಕ್ಕೆ ಜಾತಿ ಗಣತಿ ಮಾಡಲು ಅವಕಾಶವಿಲ್ಲ. ಕಾಂಗ್ರೆಸ್ ಪಕ್ಷದ ಅನೇಕ ಶಾಸಕರು ಈ ಸಮೀಕ್ಷೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಬ್ರಾಹ್ಮಣ ಪದದ ಮುಂದೆ ಕ್ರಿಶ್ಚಿಯನ್ ಸೇರಿಸಿದ್ದಕ್ಕೆ ದಿನೇಶ ಗುಂಡೂರಾವ್ ಸೇರಿದಂತೆ ವಿವಿಧ ಮಠಾಧೀಶರು ವಿರೋಧಿಸಿದ್ದಾರೆ. ಒಕ್ಕಲಿಗರ ಸಭೆಯಲ್ಲಿ ಭಾಗವಹಿಸಿದ್ದ ಡಿಸಿಎಂ ಡಿ.ಕೆ.ಶಿವಕುಮಾರ ಈಗ ದೆಹಲಿಗೆ ಹೋಗಿದ್ದಾರೆ. ಆದರೆ, ಅವರು ಈ ಜಾತಿ ಸಮೀಕ್ಷೆಗೆ ಸಂಬಂಧಿಸಿದಂತೆ ದೆಹಲಿಗೆ ಹೋಗಿರಬಹುದು. ಅಲ್ಲದೆ ರಾಜ್ಯಪಾಲರು ಸಹಿತ ಸಿಎಂಗೆ ಪತ್ರ ಬರೆದಿದ್ದಾರೆ. ಇಷ್ಟೆಲ್ಲ ಆದರೂ ಸಿದ್ದರಾಮಯ್ಯನವರು ಪಟ್ಟು ಹಿಡಿದು ಸಮೀಕ್ಷೆ ಹೆಸರಿನಲ್ಲಿ ಜಾತಿ ಗಣತಿಗೆ ಮುಂದಾಗಿದ್ದಾರೆ ಎಂದರು. ರಾಜ್ಯದಲ್ಲಿ ರಸ್ತೆಗಳು ಹಾಳಾಗಿದ್ದು, ರಸ್ತೆ ದುರಸ್ತಿಗೊಳಿಸಲು ಕಾಂಗ್ರೆಸ್ ಸರ್ಕಾರದಲ್ಲಿ ಅನುದಾನದ ಕೊರತೆ ಇದೆ. ಹೀಗಾಗಿ ರಸ್ತೆಯಲ್ಲಿ ಸಂಚರಿಸಿದರೇ ಸಮಸ್ಯೆ ಆಗಬಹುದೆಂದು ಸಚಿವ ಸತೀಶ ಜಾರಕಿಹೊಳಿ ಅವರು ಹೆಲಿಕಾಪ್ಟರ್ ಖರೀದಿಸಿರಬಹುದು. ಆದರೆ, ಜನಸಾಮಾನ್ಯರು ಓಡಾಡುವುದು ಹೇಗೆ ಎಂದು ಪ್ರಶ್ನಿಸಿದರು.