ಸಾರಾಂಶ
ಬೇಲೂರು ತಾಲೂಕಿನ ಲಕ್ಕುಂದ ಗ್ರಾಮದಲ್ಲಿ ಗರ್ಭಿಣಿಯನ್ನು ಆಸ್ಪತ್ರೆಗೆ ಕರೆದೊಯ್ಯುತ್ತಿದ್ದ ಬೈಕ್ ಮೇಲೆ ದಿಢೀರನೆ ಕಾಡಾನೆ ದಾಳಿ ಮಾಡಿದ್ದು, ಗಾಯಗೊಂಡು ಆಸ್ಪತ್ರೆಗೆ ದಾಖಲು ಮಾಡಿರುವ ಘಟನೆ ನಡೆದಿದೆ.
ಬೇಲೂರು: ತಾಲೂಕಿನ ಲಕ್ಕುಂದ ಗ್ರಾಮದಲ್ಲಿ ಗರ್ಭಿಣಿಯನ್ನು ಆಸ್ಪತ್ರೆಗೆ ಕರೆದೊಯ್ಯುತ್ತಿದ್ದ ಬೈಕ್ ಮೇಲೆ ದಿಢೀರನೆ ಕಾಡಾನೆ ದಾಳಿ ಮಾಡಿದ್ದು, ಗಾಯಗೊಂಡು ಆಸ್ಪತ್ರೆಗೆ ದಾಖಲು ಮಾಡಿರುವ ಘಟನೆ ಸೋಮವಾರ ನಡೆದಿದೆ.
ಲಕ್ಕುಂದ ಗ್ರಾಮದ ಚಂದ್ರೇಗೌಡ (58) ಹಾಗೂ ಪೂರ್ಣಿಮಾ (25) ಎಂಬುವವರು ಗಾಯಗೊಂಡಿದ್ದು, ಪೂರ್ಣಿಮಾ ಎಂಟು ತಿಂಗಳ ಗರ್ಭಿಣಿ, ಚಂದ್ರೇಗೌಡ ಅವರು ಆಸ್ಪತ್ರೆಗೆಂದು ಪೂರ್ಣಿಮಾ ಅವರನ್ನು ಕರೆದೊಯ್ಯುತ್ತಿದ್ದ ಸಂದರ್ಭದಲ್ಲಿ ಕಾಡಾನೆ ದಾರಿ ಮಧ್ಯೆ ದಾಳಿ ನಡೆಸಿದೆ. ಬೈಕ್ ಸಹಿತ ಇಬ್ಬರನ್ನೂ ಸೊಂಡಲಿನಿಂದ ಎತ್ತಿ ಬಿಸಾಡಿದೆ. ಗರ್ಭಿಣಿ ಮಹಿಳೆ ಜೋರಾಗಿ ಕಿರುಚಾಡಿದ ನಂತರ ಕಾಡಾನೆ ಕಾಡಿನೊಳಕ್ಕೆ ಹಿಂತಿರುಗಿದೆ. ಗಾಯಗೊಂಡವರನ್ನು ತಕ್ಷಣವೇ ಹಾಸನದ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.