ಸಾರಾಂಶ
ಕನ್ನಡಪ್ರಭ ವಾರ್ತೆ ನಂಜನಗೂಡುಪಟ್ಟಣದಲ್ಲಿ 5 ಕೋಟಿ ರು. ವೆಚ್ಚದಲ್ಲಿ ಭಗೀರಥ ಉಪ್ಪಾರ ಸವಿತಾ ಸಮುದಾಯ ಭವನವನ್ನು ನಿರ್ಮಿಸಲಾಗುವುದು ಎಂದು ಶಾಸಕ ದರ್ಶನ್ ಧ್ರುವನಾರಾಯಣ ಹೇಳಿದರು.ಪಟ್ಟಣದ ಪ್ರವಾಸಿ ಮಂದಿರದಲ್ಲಿ ತಾಲೂಕಿನ ನಡೆಯುವ ಶ್ರೀ ಭಗೀರಥ ಮಹರ್ಷಿ ಅವರ ಅದ್ಧೂರಿ ಜಯಂತಿ ಆಚರಣೆ ಹಿನ್ನೆಲೆ, ಉಪ್ಪಾರ ಜಿಲ್ಲಾಧ್ಯಕ್ಷ ಕರಳಪುರ ನಾಗರಾಜು ಅಧ್ಯಕ್ಷತೆಯಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.ಉಪ್ಪಾರ ಸಮುದಾಯ ಭವನ ನಿರ್ಮಾಣಕ್ಕೆ ಅಂದಾಜು 5 ಕೋಟಿ ರು. ವೆಚ್ಚದಲ್ಲಿ ಯೋಜನೆ ಸಿದ್ಧಪಡಿಸಲಾಗಿದೆ, ಮುಖ್ಯಮಂತ್ರಿಗಳ ಮನವೊಲಿಸಿ ಶೀಘ್ರದಲ್ಲೇ ಒಂದೇ ಬಾರಿಗೆ ಮೂರು ಕೋಟಿ ಅನುದಾನವನ್ನು ನಿಯೋಜಿಸಿ ಉಪ್ಪಾರ ಸಮುದಾಯ ಭವನಕ್ಕೆ ಗುದ್ದಲಿ ಪೂಜೆ ನೆರವೇರಿಸಲಾಗುವುದು, ಜೊತೆಗೆ ಉಪ್ಪಾರ ಸಮುದಾಯದವರಿಗೆ ರಾಜಕೀಯವಾಗಿ ಸ್ಥಾನಮಾನ ನೀಡಿಲ್ಲ ಎಂಬ ಆರೋಪ ಕೇಳಿ ಬಂದಿದ್ದು ಉಪ್ಪಾರ ಸಮುದಾಯಕ್ಕೆ ರಾಜಕೀಯ ಸ್ಥಾನಮಾನ ಒದಗಿಸಲು ನಾನು ಬದ್ಧನಾಗಿದ್ದು, ಅತಿ ಶೀಘ್ರದಲ್ಲಿ ಸಮುದಾಯ ಒಬ್ಬರಿಗೆ ಶ್ರೀಕಂಠೇಶ್ವರ ದೇವಾಲಯದ ಅಭಿವೃದ್ಧಿ ಸಮಿತಿಯಲ್ಲಿ ಸ್ಥಾನಮಾನ ನೀಡಲಾಗುವುದು, ಅಲ್ಲದೆ ಸಮುದಾಯದವರು ವಾಸಿಸುವ ಗ್ರಾಮಗಳಲ್ಲಿ ಅವಶ್ಯವಿರುವ ಸೌಕರ್ಯಗಳನ್ನು ಕಲ್ಪಿಸಲು ಶ್ರಮಿಸುತ್ತೇನೆ ಎಂದರು. ಅದ್ದೂರಿ ಉಪ್ಪಾರ ಜಯಂತಿ ಆಚರಣೆ ತಾಲೂಕಿನಲ್ಲಿ ಭಗಿರಥ ಮಹರ್ಷಿರವರ ಜಯಂತಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯನವರ ನೇತೃತ್ವದಲ್ಲಿ ಅದ್ದೂರಿಯಾಗಿ ಆಚರಣೆ ನಡೆಸಲು ತೀರ್ಮಾನಿಸಲಾಗಿದೆ, ಮುಖ್ಯಮಂತ್ರಿಗಳ ದಿನಾಂಕವನ್ನು ನಿಗದಿಪಡಿಸಿ ಆ ದಿನದಂದೇ ಅದ್ದೂರಿಯಾಗಿ ಜಯಂತಿ ಆಚರಣೆ ಮಾಡಲು ನಿರ್ಧರಿಸಲಾಗಿದೆ ಎಂದರು. ಮಾಜಿ ಶಾಸಕ ಕಳಲೆ ಕೇಶವಮೂರ್ತಿ, ಜಿಲ್ಲಾ ಉಪ್ಪಾರ ಸಂಘದ ಅಧ್ಯಕ್ಷರಾದ ಕರಳಪುರ ನಾಗರಾಜ್, ತಾಪಂ ಮಾಜಿ ಸದಸ್ಯ ಮೂಗಶೆಟ್ಟಿ, ಮುಖಂಡರಾದ ಮಹದೇವು, ಸಿದ್ದಶೆಟ್ಟಿ, ಮುದ್ದುಮಾದಶೆಟ್ಟಿ, ರಾಜು, ಮಹದೇವಸ್ವಾಮಿ, ಗೋವಿಂದರಾಜು, ಶ್ರೀನಿವಾಸ್, ಸತೀಶ್, ರಾಜು, ಮಹದೇವು, ಸೋಮಣ್ಣ, ಗ್ರಾಪಂ ಸದಸ್ಯ ಮುದ್ದುಮಾದಶೆಟ್ಟಿ, ವಿಜಯಕುಮಾರ್ ಇದ್ದರು.