ಸ್ವಚ್ಛ ಮೈಸೂರು ಆಶಯವನ್ನು ಸಾಕಾರಗೊಳಿಸುವುದು ಪ್ರತಿಯೊಬ್ಬರ ಸಾಮಾಜಿಕ ಜವಾ‌ಬ್ದಾರಿ

ಕನ್ನಡಪ್ರಭ ವಾರ್ತೆ ಮೈಸೂರು

ಸ್ವಚ್ಛ ಸರ್ವೇಕ್ಷಣ್ 2025- 26ರ ಭಾಗವಾಗಿ ಮೈಸೂರು ಮಹಾನಗರ ಪಾಲಿಕೆಯು ಭಾನುವಾರ ಬೆಳಗ್ಗೆ ಆಯೋಜಿಸಿದ್ದ ಸ್ವಚ್ಛತಾ ಮ್ಯಾರಾಥಾನ್ ಯಲ್ಲಿ ಸಾವಿರಾರು ಮಂದಿ ಪಾಲ್ಗೊಂಡಿದ್ದರು.

ನಗರದ ಅರಮನೆ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದ ಮುಂಭಾಗದಲ್ಲಿ ಸ್ವಚ್ಛತಾ ಮ್ಯಾರಾಥಾನ್ ಗೆ ಸಮಾಜ ಕಲ್ಯಾಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ. ಮಹದೇವಪ್ಪ ಚಾಲನೆ ನೀಡಿದರು.

ಬಳಿಕ ಮಾತನಾಡಿದ ಸಚಿವರು, ಸ್ವಚ್ಛ ಮೈಸೂರು ಆಶಯವನ್ನು ಸಾಕಾರಗೊಳಿಸುವುದು ಪ್ರತಿಯೊಬ್ಬರ ಸಾಮಾಜಿಕ ಜವಾ‌ಬ್ದಾರಿಯಾಗಿದೆ. ಕಸ ಸಮರ್ಪಕ ವಿಲೇವಾರಿ ಮಾಡಬೇಕು. ಮನೆಯ ಅಂಗಳ ಚೊಕ್ಕವಾಗಿಡಬೇಕು. ಪರಿಸರ ಕಾಪಾಡಿದರೆ, ಪರಿಸರವು ನಮ್ಮನ್ನು ರಕ್ಷಿಸುತ್ತದೆ. ಮೈಸೂರು ಸ್ವರ್ಗವಾಗಿದ್ದು ಪಾರಂಪರಿಕತೆ, ಸಂಸ್ಕೃತಿ ಉಳಿಸಬೇಕು ಎಂದು ತಿಳಿಸಿದರು.

3 ಕಿ.ಮೀ, 5 ಕಿ.ಮೀ ಹಾಗೂ 10 ಕಿ.ಮೀ. ವಿಭಾಗದಲ್ಲಿ ನಡೆದ ಓಟದಲ್ಲಿ ವಿವಿಧ ವಯೋಮಾನದ ಸಾವಿರಾರು ಮಂದಿ ಭಾಗವಹಿಸಿದ್ದರು. ಕೋಟೆ ಆಂಜನೇಯಸ್ವಾಮಿ ದೇವಸ್ಥಾನ ಮುಂಭಾಗದಿಂದ ಆರಂಭವಾದ ಮ್ಯಾರಾಥಾನ್ ಆಲ್ಪರ್ಟ್ ವಿಕ್ಟರ್‌ ರಸ್ತೆ, ಡಿ. ದೇವರಾಜ ಅರಸು ರಸ್ತೆ, ಜೆಎಲ್‌ ಬಿ ರಸ್ತೆ, ಚಾಮರಾಜ ಜೋಡಿ ರಸ್ತೆಯ ಮೂಲಕ ಓಡಿದವರು.

ಶಾಸಕರಾದ ಟಿ.ಎಸ್. ಶ್ರೀವತ್ಸ, ಕೆ. ಹರೀಶ್ ಗೌಡ, ಸಿ.ಎನ್. ಮಂಜೇಗೌಡ, ಶಿಲ್ಪಿ ಅರುಣ್ ಯೋಗಿರಾಜ್, ಜಿಲ್ಲಾಧಿಕಾರಿ ಜಿ. ಲಕ್ಷ್ಮೀಕಾಂತ್ ರೆಡ್ಡಿ, ನಗರ ಪಾಲಿಕೆಯ ಆಯುಕ್ತ ಶೇಖ್ ತನ್ವೀರ್ ಆಸೀಫ್, ಜಿಪಂ ಸಿಇಒ ಎಸ್. ಯುಕೇಶ್ ಕುಮಾರ್, ನಗರ ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್, ಕೆಪಿಎ ನಿರ್ದೇಶಕ ಎನ್. ವಿಷ್ಣುವರ್ಧನ್, ಉರ ನಿರ್ದೇಶಕ ಚನ್ನಬಸವಣ್ಣ, ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ, ಪಾಲಿಕೆ ಉಪ ಆಯುಕ್ತರಾದ ಜಿ. ಸೋಮಶೇಖರ್‌, ಸಿ.ಎಸ್‌. ಮಂಜು ಮೊದಲಾದವರು ಇದ್ದರು.

-----

ಬಾಕ್ಸ್...

ಮ್ಯಾರಾಥಾನ್ ವಿಜೇತರು

10 ಕಿ.ಮೀ ಓಟ- 18 ರಿಂದ 40 ವಯೋಮಾನ ವಿಭಾಗ (ಕ್ರಮವಾಗಿ ಮೊದಲ ಮೂರು ಸ್ಥಾನ)- ಗೋಪಿ ಸರೋಜ್, ಮಹೇಶ್ ಮತ್ತು ಗಣಪತಿ. ವಿಜಯಲಕ್ಷ್ಮಿ, ಹರ್ಷಿತಾ ಮತ್ತು ಜಯಶ್ರೀ. 41 ವರ್ಷ ಮೇಲ್ಪಟ್ಟವರ ವಿಭಾಗ- ದಶರಥ, ಗೋಪಿಕೃಷ್ಣ ಮತ್ತು ಮಹದೇವಸ್ವಾಮಿ. ಎಸ್‌.ಎಂ. ಉಮಾ, ಮಾನಸ ಮತ್ತು ರೂಪಾ ರಮೇಶ್ ತಳವಾರ. ವಿಶೇಷ ಸಾಮರ್ಥ್ಯವುಳ್ಳವರ ವಿಭಾಗ- ಕೆ. ಬಸವರಾಜು, ಯುವರಾಜ್ ಮತ್ತು ಅಜಿತ್.

5 ಕಿ.ಮೀ ಓಟ- 18 ರಿಂದ 40 ವಯೋಮಾನ ವಿಭಾಗ ಪ್ರಥಮ್, ಪುರುಷೋತ್ತಮ ಮತ್ತು ನಿತಿನ್. ಉಷಾ, ಖೋ ಖೋ ಆಟಗಾರ್ತಿ ಚೈತ್ರಾ ಮತ್ತು ವಿದ್ಯಾ. 41 ವರ್ಷ ಮೇಲ್ಪಟ್ಟವರು- ಗಣೇಶ್, ರಘುನಂದನ್ ಮತ್ತು ಯೋಗೇಶ್ ಸಾಗರ್. ‌‌ಶಾಂತಕುಮಾರಿ, ಎಂ.ಎಸ್. ಸರೋಜಾ ಮತ್ತು ಮಾಲಿನಿ. 18 ವರ್ಷದೊಳಗಿನವರು- ಚಿರಂಜೀವಿ, ವರುಣ್ ಮತ್ತು ಶ್ರೇಯಸ್‌. 3 ಕಿ.ಮೀ ಓಟ- ಪ್ರವೀಣ್, ಮೊಹಮ್ಮದ್ ಉವಾನ್ ಮತ್ತು ನಂದನ್.

ಸ್ಪರ್ಧೆಯಲ್ಲಿ ಮೊದಲ ಮೂರು ಸ್ಥಾನ ಪಡೆದವರಿಗೆ ಕ್ರಮವಾಗಿ 10000, 5000 ಮತ್ತು 3000 ರೂ. ಬಹುಮಾನ ನೀಡಲಾಯಿತು. 3 ಕಿ.ಮೀ ಓಡಿದ ಮಕ್ಕಳಿಗೆ ಸೈಕಲ್‌ ನೀಡಲಾಯಿತು.

----

ಕೋಟ್...

ನಾವು ಮೈಸೂರಿನವರು ಎಂಬುದನ್ನು ಹೆಮ್ಮೆಯಿಂದ ಹೇಳಿಕೊಳ್ಳುತ್ತೇವೆ. ಈಗಾಗಲೇ ಎರಡು ಬಾರಿ ನಾವು ಸ್ವಚ್ಛ ಮೈಸೂರು ಎಂದು ರಾಷ್ಟ್ರ ಮಟ್ಟದಲ್ಲಿ ಗುರುತಿಸಿಕೊಂಡಿದ್ದೇವೆ. ಈ ಬಾರಿ ಮೊದಲ ಸ್ಥಾನ ಪಡೆಯುವ ಮೂಲಕ ಮೈಸೂರಿಗೆ ಮತ್ತೊಮ್ಮೆ ಪ್ರಶಸ್ತಿ ತರಿಸುವ ಕೆಲಸವಾಗಬೇಕು.

- ಡಾ.ಎಚ್.ಸಿ. ಮಹದೇವಪ್ಪ, ಜಿಲ್ಲಾ ಉಸ್ತುವಾರಿ ಸಚಿವರು