ಕಿಸಾನ್ ಗೋಷ್ಠಿಯಲ್ಲಿ ಭಾಗವಹಿಸಿದ ಸಹಾಯಕ ಕೃಷಿ ನಿರ್ದೇಶಕ ನಾಗರಾಜ ನಾಯ್ಕ

ಕನ್ನಡಪ್ರಭ ವಾರ್ತೆ ಯಲ್ಲಾಪುರ

ಕೃಷಿಯಲ್ಲಿ ಅಭಿವೃದ್ಧಿ ಹೊಂದುವ ನಿಟ್ಟಿನಲ್ಲಿ ರೈತರಿಗೆ ಅನುಕೂಲವಾಗುವ ಹಲವು ಕಾರ್ಯಕ್ರಮಗಳನ್ನು ಆತ್ಮಾ ಯೋಜನೆಯ ಮೂಲಕ ಇಲಾಖೆ ಹಮ್ಮಿಕೊಳ್ಳುತ್ತಿದೆ ಎಂದು ಸಹಾಯಕ ಕೃಷಿ ನಿರ್ದೇಶಕ ನಾಗರಾಜ ನಾಯ್ಕ ಹೇಳಿದರು. ಪಟ್ಟಣದ ರವೀಂದ್ರನಗರದ ಶ್ರೀ ಶಕ್ತಿ ಗಣಪತಿ ಸಭಾಭವನದಲ್ಲಿ ಜಿಪಂ, ಕೃಷಿ ಇಲಾಖೆಯ ಆತ್ಮಾ ಯೋಜನೆಯ ಅಡಿಯಲ್ಲಿ ಹಮ್ಮಿಕೊಂಡಿದ್ದ ಕಿಸಾನ್ ಗೋಷ್ಠಿಯಲ್ಲಿ ಭಾಗವಹಿಸಿ ಮಾತನಾಡಿದರು.ಹೊರ ಜಿಲ್ಲೆ ಹಾಗೂ ಹೊರ ರಾಜ್ಯಗಳ ಯಶಸ್ವೀ ಕೃಷಿಕರ ಊರುಗಳಿಗೆ ತಾಲೂಕಿನ ರೈತರನ್ನು ಅಧ್ಯಯನ ಪ್ರವಾಸಕ್ಕಾಗಿ ಕರೆದೊಯ್ಯುತ್ತಿದ್ದೇವೆ. ಕೃಷಿಯಲ್ಲಿ ತಾಂತ್ರಿಕತೆಯನ್ನು ಅಳವಡಿಸಿಕೊಳ್ಳುವ ಅವಕಾಶಗಳ ಬಗ್ಗೆ, ಕೃಷಿಯಲ್ಲಿ ವಿಸ್ತರಣೆ, ಸಮಗ್ರ ಕೃಷಿ ನಿರ್ವಹಣೆ ಮುಂತಾದ ವಿಚಾರಗಳನ್ನು ರೈತರಿಗೆ ಮನವರಿಕೆ ಮಾಡುವ ಹಲವು ಕಾರ್ಯಕ್ರಮಗಳು, ಪ್ರಾತ್ಯಕ್ಷಿಕೆ ಆಯೋಜಿಸಿದ್ದೇವೆ. ರೈತರು ಇದರ ಸದುಪಯೋಗ ಪಡೆಯಬೇಕು ಎಂದರು. ಎಲೆಚುಕ್ಕೆ ರೋಗದ ನಿಯಂತ್ರಣದ ಬಗ್ಗೆ ಈಗಾಗಲೇ ತಾಲೂಕಿನ ವಿವಿಧೆಡೆ ತರಬೇತಿ ಕಾರ್ಯಕ್ರಮವನ್ನು ನೀಡಿದ್ದೇವೆ ಎಂದ ಅವರು, ಮುಸುಕಿನ ಜೋಳ, ಕಬ್ಬಿನ ಬೆಳೆಯಲ್ಲಿ ಕೀಟ ನಿಯಂತ್ರಣದ ಬಗ್ಗೆ ವಿವರಿಸಿದರು.ಕೃಷಿಕ ಸಮಾಜದ ಅಧ್ಯಕ್ಷ ವೆಂಕಟರಮಣ ಕಾರೆಮನೆ ಅಧ್ಯಕ್ಷತೆ ವಹಿಸಿ ಮಾತನಾಡಿ, ರೋಗಗಳು ಬಂದಾಗ ಅದರ ನಿಯಂತ್ರಣಕ್ಕೆ ಇಲಾಖೆಯವರು ಮಾರ್ಗದರ್ಶನ ನೀಡುತ್ತಾರೆ. ರೈತರೂ ಆಸಕ್ತಿಯಿಂದ ಇಲಾಖೆಯ ಜತೆ ಕೈಜೋಡಿಸಿ, ಕೃಷಿಯಲ್ಲಿ ಅದನ್ನು ಅಳವಡಿಸಿಕೊಳ್ಳೋಣ ಎಂದರು. ತಾಲೂಕಾ ಆತ್ಮಾ ಸಲಹಾ ಸಮಿತಿಯ ಅಧ್ಯಕ್ಷ ಗಣೇಶ ಹೆಗಡೆ ಪಣತಗೇರಿ ಕಾರ್ಯಕ್ರಮ ಉದ್ಘಾಟಿಸಿದರು. ತಾಲೂಕಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಸುಬ್ರಾಯ ಬಿದ್ರೆಮನೆ ಉಪಸ್ಥಿತರಿದ್ದರು. ನಿವೃತ್ತ ಸಹಾಯಕ ಕೃಷಿ ನಿರ್ದೇಶಕ ಶಂಕರ ಹೆಗಡೆ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿ, ಹವಾಮಾನ ವೈಪರೀತ್ಯದಿಂದ ಕೃಷಿ ಮೇಲಾಗುವ ದುಷ್ಪರಿಣಾಮಗಳು, ಕಬ್ಬು, ಮುಸುಕಿನ ಜೋಳ, ದ್ವಿದಳ ಧಾನ್ಯಗಳಲ್ಲಿ ರೋಗ ಹಾಗೂ ಕೀಟ ನಿಯಂತ್ರಣಾ ಕ್ರಮಗಳು, ಅಡಕೆ ಎಲೆ ಚುಕ್ಕಿ ರೋಗದ ಸಮಗ್ರ ನಿರ್ವಹಣಾ ಕ್ರಮಗಳ ಕುರಿತು ಮಾಹಿತಿ ನೀಡಿದರು. ಅಡಕೆಗೆ ಬಂದಿರುವ ಎಲೆಚುಕ್ಕೆ ರೋಗ ನಿಯಂತ್ರಣದ ಬಗ್ಗೆ ಹಿರಿಯ ತೋಟಗಾರಿಕಾ ನಿರ್ದೇಶಕ ಸತೀಶ ಹೆಗಡೆ ಮಾರ್ಗದರ್ಶನ ನೀಡಿದರು. ಕೃಷಿ ಸಾಧಕಿ ವನಿತಾ ಭಟ್ಟ ತಮ್ಮ ಯಶೋಗಾಥೆ ವಿವರಿಸಿದರು. ಶ್ರೀಲತಾ ರಾಜೀವ ಪ್ರಾರ್ಥಿಸಿದರು. ಆತ್ಮಾಯೋಜನೆಯ ಸಂಯೋಜಕ ಎಂ.ಜಿ. ಭಟ್ಟ ಸ್ವಾಗತಿಸಿ, ನಿರ್ವಹಿಸಿದರು.