ಸಾರಾಂಶ
-ಕನ್ನಡ ವಿಶ್ವವಿದ್ಯಾಲಯದ ಕುಲಪತಿ, ಶಾಸನ ತಜ್ಞ ಡಾ.ಡಿ.ವಿ. ಪರಮಶಿವಮೂರ್ತಿ ಅವರಿಂದ ಬೆಳಕಿಗೆ
----ಕನ್ನಡಪ್ರಭ ವಾರ್ತೆ ಹರಿಹರ
ತಾಲೂಕಿನ ಚಿಕ್ಕಬಿದರೆ ಗ್ರಾಮದ ಕಲ್ಲೇಶ್ವರ ದೇವಸ್ಥಾನದಲ್ಲಿ 12ನೇ ಶತಮಾನದ ಅಪರೂಪದ ಹಾಗೂ ವಿರಳವಾದ ಮಹಾಸತಿ ಶಿಲ್ಪವನ್ನು ಕನ್ನಡ ವಿಶ್ವವಿದ್ಯಾಲಯದ ಕುಲಪತಿ, ಶಾಸನ ತಜ್ಞ ಡಾ.ಡಿ.ವಿ. ಪರಮಶಿವಮೂರ್ತಿ ಅವರು ಪತ್ತೆ ಹಚ್ಚಿದ್ದಾರೆ.ಸತಿಶಿಲ್ಪ: ಚಿಕ್ಕಬಿದಿರೆ ಗ್ರಾಮದ ವೀರನೊಬ್ಬ ಯುದ್ಧದಲ್ಲಿ ಹೋರಾಡಿ ವೀರಮರಣವನ್ನು ಹೊಂದುತ್ತಾನೆ. ಗಂಡನ ಸಾವಿನ ದುಃಖ ತಾಳದೆ ಅವನ ಹೆಂಡತಿಯೂ ಪತಿಯ ದೇಹದ ಜೊತೆ ಜೀವಂತವಾಗಿ ಚಿತೆ ಏರುತ್ತಾಳೆ. ಶಿಲ್ಪದಲ್ಲಿ ಈ ಚಿತ್ರಣವನ್ನು ಮನೋಜ್ಞವಾಗಿ ಚಿತ್ರಿಸಲಾಗಿದೆ. ಶತ್ರ್ರುವನ್ನು ಮೆಟ್ಟಿನಿಂತು ಬಿಲ್ಲಾಳುವಾಗಿ ವೈರಿಗಳನ್ನು ಎದುರಿಸುತ್ತಿದ್ದಾನೆ. ಹೀಗೆ ಯುದ್ಧಮಾಡುತ್ತಾ ಅವನು ವೀರಮರಣವನ್ನು ಅಪ್ಪುತ್ತಾನೆ. ಬಲಗಡೆ ಚಿತೆಯ ಮೇಲೆ ವೀರನ ಶವ ಮಲಗಿಸಲಾಗಿದೆ. ವೀರಪತಿಯ ಶವವನ್ನು ಅಪ್ಪಿಕೊಂಡು ಸತಿ ಜೀವಂತವಾಗಿ ಚಿತೆ ಏರಿದ್ದಾಳೆ.
ಇದುವರೆಗೂ ಮಹಾಸತಿಯ ಶಿಲ್ಪಗಳು ಕರ್ನಾಟಕದಲ್ಲಿ ಹೇರಳವಾಗಿ ದೊರೆತಿವೆ. ಮತ್ತು ಪತಿಯ ಶವದೊಟ್ಟಿಗೆ ಚಿತೆಯೇರಿದ ಉಲ್ಲೇಖಗಳೂ ದೊರೆತಿವೆ. ಆದರೆ, ಪತಿಯನ್ನು ಅಪ್ಪಿಕೊಂಡು ಒಟ್ಟಿಗೆ ಅಗ್ನಿಕುಂಡ ಪ್ರವೇಶ ಮಾಡಿದ ಮಹಾಸತಿ ಶಿಲ್ಪ ದೊರೆತಿದ್ದು, ಇದೇ ಮೊಲನೆಯದ್ದಾಗಿದೆ. ಹಾಗಾಗಿ, ಕನ್ನಡ ಮಹಾಸತಿ ಶಿಲ್ಪಗಳಲ್ಲಿ ಚಿಕ್ಕಬಿದರೆಯ ಮಹಾಸತಿಯ ಶಿಲ್ಪಕ್ಕೆ ವಿಶೇಷ ಸ್ಥಾನಮಾನ ದೊರೆಯತ್ತದೆ ಎಂದು ಶಾಸನ ತಜ್ಞ ಪರಮಶಿವಮೂರ್ತಿ ಅಭಿಪ್ರಾಯಪಟ್ಟಿದ್ದಾರೆ.ವೀರಗಲ್ಲು: ಪ್ರಸ್ತುತ ಮಹಾಸತಿಶಿಲ್ಪವು ಕಲ್ಲೇಶ್ವರ ದೇವಾಲಯದ ಒಂದು ವೀರಗಲ್ಲಿನಲ್ಲಿದೆ. ಈ ವೀರಗಲ್ಲು, ಮೂರು ಹಂತಗಳ ಶಿಲ್ಪಪಟ್ಟಿಕೆಯನ್ನು ಹೊಂದಿದ್ದು, ಯಾವುದೇ ಶಾಸನವನ್ನು ಹೊಂದಿಲ್ಲ. ಮೊದಲ ಶಿಲ್ಪಪಟ್ಟಿಕೆಯಲ್ಲಿ ವೀರನೊಬ್ಬ ಹೋರಾಡುವ ಹಾಗೂ ಅವನ ಹೆಂಡತಿ ಮಹಾಸತಿಯಾದ ಚಿತ್ರಣವಿದೆ. ಎರಡನೆಯ ಹಂತದಲ್ಲಿ ವೀರನನ್ನು ಅಪ್ಸರೆಯರು ಸ್ವರ್ಗಕ್ಕೆ ಕರೆದೊಯ್ಯುತ್ತಿದ್ದಾರೆ. ಮೂರನೆಯ ಹಂತವು ಶಿವ ಸನ್ನಿಧಿಯದ್ದಾಗಿದ್ದು, ಶಿವಲಿಂಗ, ನಂದಿ, ಶಿವಾರ್ಚನೆಯಲ್ಲಿ ತೊಡಗಿದ ಯತಿ, ಚಾಮರಧಾರಿ ಸ್ತ್ರೀ ಹಾಗೂ ವೀರನನ್ನು ಚಿತ್ರಿಸಲಾಗಿದೆ. ಯುದ್ಧದಲ್ಲಿ ಯಾರೇ ವೀರಮರಣವನ್ನು ಅಪ್ಪಿದರೆ ಅವರಿಗೆ ದೈವಸನ್ನಿಧಿ ಪ್ರಾಪ್ತವಾಗುತ್ತದೆ ಎಂಬ ಭಾವ ಈ ಹಂತದಲ್ಲಿ ಕಾಣಬಹುದು. ಇದರ ಮೇಲೆ ಕಳಶವನ್ನು ಚಿತ್ರಿಸಲಾಗಿದೆ. ಈ ವೀರಗಲ್ಲಿನಲ್ಲಿನಲ್ಲಿ ಮಹಾಸತಿಶಿಲ್ಪವೂ ಇರುವುದರಿಂದ ಇದನ್ನು ವೀರಮಹಾಸತಿಶಿಲ್ಪ ಎಂದೂ ಕರೆಯಬಹುದಾಗಿದೆ.
ಪ್ರಸ್ತುತ ಕಾರ್ಯದಲ್ಲಿ ಸಹಕರಿಸಿದ ಶಿವಶಂಕರ ದಿಬ್ಬದವರ, ಚರಲಿಂಗಸ್ವಾಮಿ, ವಿಶ್ವನಾಥ ಹಾಗೂ ಡಾ.ರವಿಕುಮಾರ ಕೆ ನವಲಗುಂದ, ಹಾಗೂ ಗ್ರಾಮಸ್ಥರಿಗೆ ಪರಮಶಿವಮೂರ್ತಿ ಧನ್ಯವಾದಗಳನ್ನು ಅರ್ಪಿಸಿದ್ದಾರೆ.-----
ಫೋಟೊ: ಹರಿಹರ ತಾಲೂಕಿನ ಚಿಕ್ಕಬಿದರೆ ಗ್ರಾಮದ ಕಲ್ಲೇಶ್ವರ ದೇವಸ್ಥಾನದಲ್ಲಿ 12ನೇ ಶತಮಾನದ ಅಪರೂಪದ ಹಾಗೂ ವಿರಳವಾದ ಮಹಾಸತಿ ಶಿಲ್ಪದೊಂದಿಗೆ ಕನ್ನಡ ವಿಶ್ವವಿದ್ಯಾಲಯದ ಕುಲಪತಿ, ಶಾಸನ ತಜ್ಞ ಡಾ.ಡಿ.ವಿ. ಪರಮಶಿವಮೂರ್ತಿ ಹಾಗೂ ಗ್ರಾಮಸ್ಥರು.----
09 ಎಚ್ಆರ್ಆರ್ 01