ಪ್ರವೀಣ್ಣ್ ನೆಟ್ಟಾರು ಹತ್ಯೆ ಕೇಸ್ಸ್; ಮೂರು ಆರೋಪಿಗಳ ಸುಳಿವಿಗೆ ಬಹುಮಾನ ಘೋಷಿಸಿದ ಎನ್ನ್ಐಎ
ಕನ್ನಡಪ್ರಭ ವಾರ್ತೆ ಮಂಗಳೂರು ದ.ಕ. ಬಿಜೆಪಿ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ಏಜೆನ್ಸಿ(ಎನ್ಐಎ) ತನಿಖೆ ತೀವ್ರಗೊಳಿಸಿದ್ದು, ಇದೀಗ ದ.ಕ. ಮತ್ತು ಕೊಡಗು ಜಿಲ್ಲೆಯ ಒಟ್ಟು ಮೂರು ಮಂದಿ ಆರೋಪಿಗಳ ಪತ್ತೆಗೆ ರಿವಾರ್ಡ್ ವಾಂಟೆಡ್ ನೋಟಿಸ್ ಜಾರಿಗೊಳಿಸಿದೆ. ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಪಡಂಗಡಿ ಗ್ರಾಮದ ಆರೋಪಿ ನಂಬರ್ 23ರ ನೌಷದ್(32), ಕೊಡಗು ಸೋಮವಾರಪೇಟೆಯ ಚೌಡ್ಲಿ ನಿವಾಸಿ, ಆರೋಪಿ ನಂಬರ್ 22ರ ಅಬ್ದುಲ್ ನಾಸಿರ್(41), ಸೋಮವಾರಪೇಟೆಯ ಹನಗಲ್ ಕಲಂದಕೂರ್ ನಿವಾಸಿ, ಆರೋಪಿ ನಂಬರ್ 24ರ ಅಬ್ದುಲ್ ರಹಿಮಾನ್(36) ಇವರ ಬಗ್ಗೆ ಸುಳಿವು ನೀಡಿದವರಿಗೆ ತಲಾ 2 ಲಕ್ಷ ರು. ಬಹುಮಾನ ಘೋಷಿಸಿದೆ. ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದಲ್ಲಿ ಇವರೆಲ್ಲೂ ಶಾಮೀಲಾಗಿದ್ದು, ನಿಷೇಧಿತ ಪಿಎಫ್ಐ ಸಂಘಟನೆಯ ಕಾರ್ಯಕರ್ತರಾಗಿ ಗುರುತಿಸಿಕೊಂಡಿದ್ದರು. ಘಟನೆ ಬಳಿಕ ಇವರೆಲ್ಲರೂ ತಲೆಮರೆಸಿದ್ದು, ಇವರ ಬಂಧನಕ್ಕೆ ಈಗ ಬಹುಮಾನ ಸಹಿತ ವಾರಂಟ್ ಹೊರಡಿಸಲಾಗಿದೆ. ಇಲ್ಲಿವರೆಗೆ ಈ ಘಟನೆಯಲ್ಲಿ 20 ಮಂದಿಯನ್ನು ಬಂಧಿಸಲಾಗಿದೆ. ಕಳೆದ ನವೆಂಬರ್ನಲ್ಲಿ ನಾಲ್ಕು ಮಂದಿಯ ಪತ್ತೆಗೆ ಒಟ್ಟು 14 ಲಕ್ಷ ರು. ಬಹುಮಾನ ಘೋಷಿಸಲಾಗಿತ್ತು. ಮೊಹಮ್ಮದ್ ಮುಸ್ತಾಫ ಪೈಚಾರ್, ಉಮರ್ ಫರೂಕ್, ತುಫೈಲ್, ಅಬೂಬಕ್ಕರ್ ಸಿದ್ದಿಕ್ ಪತ್ತೆಗೆ ಬಹುಮಾನ ಘೋಷಿಸಲಾಗಿತ್ತು. ಈ ಪೈಕಿ ಮಡಿಕೇರಿ ನಿವಾಸಿ ತುಫೈಲ್ನ್ನು ಬೆಂಗಳೂರಿನಲ್ಲಿ ಬಂಧಿಸಲಾಗಿತ್ತು. ಪ್ರಸಕ್ತ ಈ ಪ್ರಕರಣದಲ್ಲಿ ಒಟ್ಟು ಒಂಭತ್ತು ಮಂದಿ ಆರೋಪಿಗಳು ತಲೆಮರೆಸಿದ್ದಾರೆ ಎಂದು ಹೇಳಲಾಗಿದೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.