ಸಾರಾಂಶ
ಕನ್ನಡಪ್ರಭ ವಾರ್ತೆ ಸಕಲೇಶಪುರ
ತಾಲೂಕಿನಲ್ಲಿ ಸೋಮವಾರ ಸುರಿದ ಬಿರುಗಾಳಿ ಮಳೆ ತಾಲೂಕಿನ ಕಾಫಿ ಬೆಳೆಗಾರರಿಗೆ ಯುಗಾದಿಗೂ ಮುನ್ನವೇ ಬೇವು ಬೆಲ್ಲ ಹಂಚಿದೆ.ತಾಲೂಕಿನ ಯಸಳೂರು ಹೋಬಳಿ ಹೊರತುಪಡಿಸಿ ಉಳಿದೆಲ್ಲ ಭಾಗದಲ್ಲಿ ಮಾರ್ಚ್ ೧೨ರಂದು ಉತ್ತಮ ಮಳೆಯಾಗಿದ್ದರಿಂದ ಕಾಫಿ ಬೆಳೆಗಾರರ ಸಂತಸಕ್ಕೆ ಎಲ್ಲೆ ಇಲ್ಲದಂತೆ ಮಾಡಿತ್ತು. ಪರಿಣಾಮ ಮಾರ್ಚ್ ೧೫ರಿಂದ ೧೮ರವರೆಗೆ ಕಾಫಿಗಿಡಗಳು ಹೂವಾಗಿದ್ದು ಸದ್ಯಕ್ಕೆ ಹೂವುಗಳು ಮಾಗುವ ಹಂತ ತಲುಪಿದ್ದು, ಈ ವೇಳೆ ಮತ್ತೊಮ್ಮೆ ಮಳೆಯಾದರೆ ಕಾಫಿ ಹೂವು ಹೀಚಾಗಲು(ಕಾಯಿ ಕಟ್ಟಲು) ಅನುಕೂಲವಾಗಲಿದೆ ಎಂಬ ಮಾತುಗಳು ಬೆಳೆಗಾರರ ವಲಯದಿಂದ ಕೇಳಿಬರುತ್ತಿದ್ದವು. ನಿರೀಕ್ಷೆಯಂತೆ ಮಾರ್ಚ್ ೨೪ರಂದು ತಾಲೂಕಿನ ಬೆಳಗೋಡು ಹಾಗೂ ಕಸಬಾ ಹೋಬಳಿ ವ್ಯಾಪ್ತಿಯಲ್ಲಿ ಧಾರಾಕಾರ ಮಳೆಯಾಗಿದ್ದರಿಂದ ಈ ಎರಡು ಹೋಬಳಿಯ ಬೆಳೆಗಾರರಿಗೆ ಸಂತಸಕ್ಕೆ ಪಾರವೇ ಇಲ್ಲದಂತಾಗಿದ್ದು, ಈ ಎರಡು ಹೋಬಳಿಯ ಕಾಫಿ ಬೆಳೆಗಾರರಿಗೆ ಮುಂಗಾರು ಸಿಹಿ ಹಂಚಿದೆ. ಆದರೆ, ಕೊಡಗಿನ ಗಡಿಯನ್ನು ಹೊಂದಿಕೊಂಡಿರುವ ಯಸಳೂರು ಹೋಬಳಿಯಲ್ಲಿ ಮಾರ್ಚ್ ೧೨ರಂದು ಸಹ ಮಳೆ ಹನಿ ಭೂಮಿ ಸೇರದಾಗಿದ್ದರೆ, ಮಾರ್ಚ್ ೨೪ರಂದು ಸಹ ಮಳೆಯಾಗದಿರುವುದು ಬೆಳೆಗಾರರ ಪಾಲಿಗೆ ಮುಂಗಾರು ಕಹಿಯಾಗಿದೆ. ಮಾರ್ಚ್ ತಿಂಗಳ ೧೨ರಂದು ಹೆತ್ತೂರು ಹೋಬಳಿಯಲ್ಲಿ ಸಾಧಾರಣ ಹಾಗೂ ಹಾನುಬಾಳ್ ಹೋಬಳಿಯಲ್ಲಿ ಧಾರಾಕಾರ ಮಳೆಯಾಗಿತ್ತು. ಆದರೆ, ಈ ಎರಡು ಹೋಬಳಿಯಲ್ಲಿ ಮಾರ್ಚ್೨೪ ರಂದು ಮಳೆಯಾಗದಿರುವುದು ಈ ಎರಡು ಹೋಬಳಿಯ ಕಾಫಿ ಬೆಳೆಗಾರರಿಗೆ ಬೇಸರ ಹೆಚ್ಚಿಸಿದೆ.
ಹನಿ ನೀರಾವರಿ:ಯಸಳೂರು ಹೋಬಳಿಯಾದ್ಯಂತ ಫೆಬ್ರವರಿ ಅಂತ್ಯದಿಂದಲೂ ಬೆಳೆಗಾರರು ಹನಿನೀರಾವರಿ ಮಾಡುತ್ತಿರುವುದರಿಂದ ಎಲ್ಲೆಲ್ಲೂ ಮೋಟರ್ಗಳ ಸದ್ದು ಕಿವಿಗಚ್ಚುತ್ತಿದೆ. ಆದರೆ, ಒಂದೆರಡು ಬಾರಿಗೆ ಇದ್ದ ನೀರು ಸದ್ಯ ಖಾಲಿಯಾಗುವ ಹಂತ ತಲುಪಿರುವುದರಿಂದ ಮಳೆಯಾದರೆ ಸಾಕು ಎಂಬ ಚಡಪಡಿಕೆ ಬೆಳೆಗಾರರನ್ನು ಕಾಡುತ್ತಿದೆ.ಮಳೆ ಬಾರದಿದ್ದರೆ:
ಯಸಳೂರು ಹೋಬಳಿಯಾದ್ಯಂತ ಫೆಬ್ರವರಿ ತಿಂಗಳ ಆರಂಭದಿಂದಲೂ ಹನಿನೀರಾವರಿ ಮಾಡುತ್ತಿದ್ದು, ಈಗಾಗಲೇ ನೀರಿನ ಮೂಲಗಳು ಬರಿದಾಗುವ ಹಂತ ತಲುಪಿವೆ. ಇನ್ನೊಂದು ವಾರದಲ್ಲಿ ಮಳೆಯಾಗದಿದ್ದರೆ ಹನಿನೀರಾವರಿಯಿಂದ ಅರಳಿದ ಹೂವುಗಳು ಕಮರುವುದರಿಂದ ಮುಂದಿನ ಹಂಗಾಮಿನಲ್ಲಿ ನಿರೀಕ್ಷಿತ ಕಾಫಿ ಫಸಲು ದೊರೆಯುವುದು ಸಾಧ್ಯವಿಲ್ಲ ಎಂಬ ಆತಂಕ ಬೆಳೆಗಾರರನ್ನು ಕಾಡುತ್ತಿದೆ.ಹರಿವು ಹೆಚ್ಚಿದೆ:
ಮಾರ್ಚ್ ಎರಡನೇ ವಾರದಲ್ಲಿ ತಾಲೂಕಿನ ಹಲವೇಡೆ ಉತ್ತಮ ಮಳೆಯಾಗಿರುವ ಪರಿಣಾಮ ಕ್ಷೀಣಿಸಿದ್ದ ಹೇಮಾವತಿ ನದಿಯ ನೀರಿನ ಹರಿವು ಹೆಚ್ಚಿದ್ದು, ಹೇಮಾವತಿ ನದಿಯೊಂದಕ್ಕೆ ೧೦ ಹೆಚ್.ಪಿ ಮೋಟರ್ ನಿಂದ ೮೦ ಎಚ್.ಪಿ ಮೋಟರ್ ವರೆಗೆ ಸುಮಾರು ೬೦೦ಕ್ಕೂ ಅಧಿಕ ಮೋಟರ್ಗಳನ್ನು ತಾಲೂಕು ವ್ಯಾಪ್ತಿಯಲ್ಲಿ ಇಡಲಾಗಿದೆ. ಸದ್ಯ ಮಳೆಯಾಗಿರುವುದರಿಂದ ಈ ಎಲ್ಲ ಮೋಟರ್ಗಳು ತಮ್ಮ ಕಾರ್ಯಾಚರಣೆ ಸ್ಥಗಿತಗೊಳಿಸಿವೆ ರಿಣಾಮ ನದಿಯಲ್ಲಿ ನೀರಿನ ಹರಿವು ಏರಿಕೆಯಾಗಿದೆ. ಆದರೆ, ಮಾರ್ಚ್ ೨೪ರಂದು ಹೇಮಾವತಿ ನದಿ ವ್ಯಾಪ್ತಿಯಲ್ಲಿ ಮತ್ತೆ ಉತ್ತಮ ಮಳೆಯಾಗಿರುವುದರಿಂದ ನದಿ ಹರಿವು ಮತ್ತಷ್ಟು ಹೆಚ್ಚಿದ್ದು ಬೇಸಿಗೆಯಲ್ಲಿ ಜನ ಜಾನುವಾರುಗಳಿಗೆ ಕುಡಿಯುವ ನೀರಿನ ಕೊರತೆ ಭೀತಿಯನ್ನು ಇಲ್ಲವಾಗಿಸಿದೆ.ರೇವತಿ ಮಳೆ ಭರವಸೆ:
ಯಸಳೂರು ಹಾಗೂ ಹೆತ್ತೂರು ಹೋಬಳಿಯ ಕಾಫಿ ಬೆಳೆಗಾರರು ಈ ಮಳೆ ಕೈಕೊಟ್ಟರೂ ರೇವತಿ ಮಳೆ ನಮ್ಮ ಕೈಬಿಡುವುದಿಲ್ಲ ಎಂಬ ನಂಬಿಕೆಯಲ್ಲಿದ್ದಾರೆ. ಸಾಮಾನ್ಯವಾಗಿ ಮಾರ್ಚ್ ಅಂತ್ಯಕ್ಕೆ ಆರಂಭವಾಗಲಿರುವ ರೇವತಿ ಮಳೆ "ಬೆಳೆಗಾರರ ವರದಾನದ ಮಳೆ " ಎಂಬ ಪ್ರತೀತಿ ಇದೆ. ಆದರೂ ಸಾಕಷ್ಟು ವರ್ಷ ಈ ಮಳೆಯು ಕೈಕೊಟ್ಟಿರುವುದರಿಂದ ಈ ಮಳೆಯ ಬಗ್ಗೆಯು ಬೆಳೆಗಾರರಲ್ಲಿ ಸಣ್ಣದೊಂದು ಸಂಶಯ ನೆಲೆಸಿದೆ. ಸಂಶಯ ನಿಜವಾದಲ್ಲಿ ಮಳೆಯಾಶ್ರಿತ ಬೆಳೆಗಾರರ ಸ್ಥಿತಿ ಡೋಲಾಯಮಾನವಾಗಲಿರುವುದು ನಿಶ್ಚಿತ.--------------------------------------------------------------------------------ಫೋಟೋ: ೨೪ ಎಸ್ಕೆಪಿಪಿ ೧- ಬತ್ತಿರುವ ಕಾಫಿ ಹೂವು.* ಹೇಳಿಕೆ 1
ಹೂವು ಹೀಚಾಗಲು ಮತ್ತೊಂದು ಉತ್ತಮ ಮಳೆಯ ನಿರೀಕ್ಷೆಯಲ್ಲಿದ್ದೇವೆ. ಜಿಲ್ಲೆಯ ಎಲ್ಲೆಡೆ ಸುರಿಯುತ್ತಿರುವ ಮಳೆ ಅಗತ್ಯವಿರುವೇಡೆ ಬೀಳದಿರುವುದು ದುಗುಡ ಹೆಚ್ಚಿಸಿದೆ:ಭರತ್, ಕಾಫಿಬೆಳೆಗಾರ, ಹೆಬ್ಬಸಾಲೆ (26ಎಚ್ಎಸ್ಎನ್6ಎ)