ಕನ್ನಡಪ್ರಭ ವಾರ್ತೆ ಅಥಣಿ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ತಾಲೂಕಿನ ಸುಟ್ಟಟ್ಟಿ ಗ್ರಾಮದ ಚಂದ್ರು ಶೆಟ್ಟೆಪ್ಪ ಕಾಶೀದ (39) ಪಂಜಾಬ್‌ನಲ್ಲಿ ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತದಿಂದ ಮಂಗಳವಾರ ನಸುಕಿನ ಜಾವ ನಿಧನರಾಗಿದ್ದಾರೆ. ಅವರ ಪಾರ್ಥಿವ ಶರೀರ ಬುಧವಾರ ಹುಟ್ಟೂರಾದ ಸುಟ್ಟಟ್ಟಿ ಗ್ರಾಮಕ್ಕೆ ಆಗಮಿಸಿತು. ಮೃತ ಯೋಧನ ಅಂತ್ಯಕ್ರಿಯೆ ಸಕಲ ಸರ್ಕಾರಿ ಗೌರವಗಳೊಂದಿಗೆ ಜರುಗಿತು.

ಕನ್ನಡಪ್ರಭ ವಾರ್ತೆ ಅಥಣಿ

ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ತಾಲೂಕಿನ ಸುಟ್ಟಟ್ಟಿ ಗ್ರಾಮದ ಚಂದ್ರು ಶೆಟ್ಟೆಪ್ಪ ಕಾಶೀದ (39) ಪಂಜಾಬ್‌ನಲ್ಲಿ ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತದಿಂದ ಮಂಗಳವಾರ ನಸುಕಿನ ಜಾವ ನಿಧನರಾಗಿದ್ದಾರೆ. ಅವರ ಪಾರ್ಥಿವ ಶರೀರ ಬುಧವಾರ ಹುಟ್ಟೂರಾದ ಸುಟ್ಟಟ್ಟಿ ಗ್ರಾಮಕ್ಕೆ ಆಗಮಿಸಿತು. ಮೃತ ಯೋಧನ ಅಂತ್ಯಕ್ರಿಯೆ ಸಕಲ ಸರ್ಕಾರಿ ಗೌರವಗಳೊಂದಿಗೆ ಜರುಗಿತು. ಮೃತ ಯೋಧನಿಗೆ ಪತ್ನಿ, ಓರ್ವ ಪುತ್ರ, ಇಬ್ಬರು ಪುತ್ರಿಯರು, ತಂದೆ ತಾಯಿ ಸೇರಿದಂತೆ ಅಪಾರ ಬಂಧುಬಳಗವಿದೆ.

ಗ್ರಾಮದಲ್ಲಿ ಶೋಕ: ​ಸುಟ್ಟಟ್ಟಿ ಗ್ರಾಮದಲ್ಲಿ ಯೋಧ ಚಂದ್ರು ಶೆಟ್ಟೆಪ್ಪ ಕಾಶೀದ ನಿಧನದ ಸುದ್ದಿ ಗೊತ್ತಾಗುತ್ತಿದ್ದಂತೆ ದುಃಖದ ವಾತಾವರಣ ನಿರ್ಮಾಣವಾಯಿತು. ಯೋಧ ಚಂದ್ರು ಅವರ ಪಾರ್ಥಿವ ಶರೀರವನ್ನು ಹೊತ್ತ ಸೇನಾ ವಾಹನ ಗ್ರಾಮಕ್ಕೆ ಪ್ರವೇಶಿಸುತ್ತಿದ್ದಂತೆಯೇ, ಯೋಧನ ಪರ ಜಯ ಘೋಷಗಳು ಮೊಳಗಿದವು. ಗ್ರಾಮದಲ್ಲಿ ವಿದ್ಯಾರ್ಥಿಗಳು ಸಾಲಾಗಿ ನಿಂತು ಪಾರ್ಥಿವ ಶರೀರ ಮೇಲೆ ಪುಷ್ಪ ನಮನ ಸಲ್ಲಿಸಿದರು. ಗ್ರಾಮದ ಪ್ರಾಥಮಿಕ ಶಾಲೆ ಆವರಣದಲ್ಲಿ ​ಅಂತಿಮ ದರ್ಶನಕ್ಕೆ ಪಾರ್ಥಿವ ಶರೀರವನ್ನು ಇಡಲಾಗಿತ್ತು. ಈ ವೇಳೆ ಕುಟುಂಬ ಸದಸ್ಯರ ಆಕ್ರಂದನ ಮುಗಿಲು ಮುಟ್ಟಿತ್ತು. ನಂತರ, ಸಕಲ ಸೇನಾ ಮತ್ತು ಸರ್ಕಾರಿ ಗೌರವಗಳೊಂದಿಗೆ ಅಂತ್ಯಸಂಸ್ಕಾರ ನೆರವೇರಿಸಲಾಯಿತು. ಸೇನಾಧಿಕಾರಿಗಳು ಮೂರು ಸುತ್ತು ಗುಂಡು ಹಾರಿಸಿ ಗೌರವ ಸಲ್ಲಿಸಿದರು. ಸ್ಥಳೀಯ ಜನಪ್ರತಿನಿಧಿಗಳು ಹಾಗೂ ತಹಸೀಲ್ದಾರ್‌ ಸೇರಿದಂತೆ ಗ್ರಾಮ ಮಟ್ಟದ ಅಧಿಕಾರಿಗಳು, ಗಣ್ಯರು ಅಂತಿಮ ನಮನ ಸಲ್ಲಿಸಿದರು.